ಮಂಡ್ಯ; ಬಾಲ್ಯ ವಿವಾಹ, ಮಕ್ಕಳ ಭಿಕ್ಷಾಟನೆ ತಡೆಗೆ ಕ್ರಮ
ಮಂಡ್ಯ, ಆಗಸ್ಟ್, 08: ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಹಾಗೂ ಅವರಿಗೆ ಮೂಲಭೂತ ಸೌಕರ್ಯದ ಕಲ್ಪಿಸಲು ಆಧಾರ್, ಪಡಿತರ ಚೀಟಿಯನ್ನು ಒದಗಿಸಬೇಕು ಎಂದು ಮಂಡ್ಯ ಅಪರ ಜಿಲ್ಲಾಧಿಕಾರಿ ಡಾ. ಹೆಚ್. ಎಲ್ ನಾಗರಾಜು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಕ್ಕಳ ಸಹಾಯವಾಣಿ ಪ್ರಗತಿ ಪರಿಶೀಲನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಾಲ್ಯವಿವಾಹ ಹಾಗೂ ಭಿಕ್ಷಾಟನೆಯಲ್ಲಿ ಮಕ್ಕಳು, ಪೋಷಕರು ತೊಡಗಿಕೊಂಡಿರುವ ಪ್ರಕರಣಗಳ ಬಗ್ಗೆ ಗಮನಹರಿಸಬೇಕು ಎಂದರು.
ವಲಸೆ ಕಾರ್ಮಿಕರು ಮುಖ್ಯವಾಗಿ ಕಬ್ಬಿನ ಕಟಾವಿಗೆಂದು ಜಿಲ್ಲೆಗೆ ಆಗಮಿಸುತ್ತಾರೆ. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ವಸತಿ ಶಾಲೆಗಳಿಗೆ ದಾಖಲು ಮಾಡಲು ಸ್ವಯಂ ಸೇವಾ ಸಂಸ್ಥೆಗಳು ಕೈ ಜೋಡಿಸಬೇಕು ಎಂದು ತಿಳಿಸಿದರು.
ಮಂಡ್ಯ: ಶಾಸಕನಿಂದ ಅವಾಚ್ಯ ಪದಗಳಿಂದ ನಿಂದನೆ, ಬೆದರಿಕೆ: ರಕ್ಷಣೆಗೆ ಮೊರೆ ಅರಣ್ಯಾಧಿಕಾರಿಗಳು
ಭಿಕ್ಷಾಟನೆಯಲ್ಲಿ ತೊಡಗುವವರು, ವಲಸೆ ಕಾರ್ಮಿಕರಿಗೆ ವಸತಿ ಹಾಗೂ ಆಹಾರದ ಸಮಸ್ಯೆ ಪರಿಹಾರವಾದರೆ ಮಕ್ಕಳಿಗೆ ಸಂಬಂಧಿಸಿದ ಬಹಳಷ್ಟು ಸಮಸ್ಯೆಗಳು ತಪ್ಪುತ್ತವೆ. ಈ ಹಿನ್ನೆಲೆಯಲ್ಲಿ ಅವರಿಗೆ ನಿವೇಶನ, ಮನೆ, ಪಡಿತರ ಚೀಟಿ ಒದಗಿಸಬೇಕು ಎಂದು ಹೇಳಿದರು.
'ಶಾಲೆಗಳ ಗೋಡೆ ಮೇಲೆ ಸಹಾಯವಾಣಿ ಬರೆಸಿ'
ಮಂಡ್ಯ ನಗರದಲ್ಲಿ 13 ವರ್ಷದ ಬಾಲಕ ಶ್ರವಣ ದೋಷದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಅಂದಾಜು 5 ಲಕ್ಷ ರೂಪಾಯಿ ಹಣ ಬೇಕಿರುತ್ತದೆ. ಚಿಕಿತ್ಸೆಗೆ ಮಂಡ್ಯ ನಗರಸಭೆ ವಿಕಲಚೇತನರ ಅನುದಾನ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಇದೇ ವೇಳೆ ಮಕ್ಕಳ ಸಹಾಯವಾಣಿಯ ನೋಡಲ್ ಸಂಸ್ಥೆಯ ಬರ್ಡ್ಸ್ನ ನಿರ್ದೇಶಕ ವೆಂಕಟೇಶ್ ಮಾತನಾಡಿ, ಎಲ್ಲಾ ಶಾಲೆಗಳ ಗೋಡೆಗಳಲ್ಲಿ ಮಕ್ಕಳ ಸಹಾಯವಾಣಿ-1098ನ್ನು ಬರೆಸಿ ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಸಹಾಯವಾಣಿಗೆ ಬಂದ ಒಟ್ಟು ಕರೆಗಳು?
ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಏಪ್ರಿಲ್ 2022 ರಿಂದ ಜೂನ್ 2022ರ ವರೆಗೆ ಕೆ.ಆರ್ ಪೇಟೆ 20, ಮಂಡ್ಯ 18, ಶ್ರೀರಂಗಪಟ್ಟಣ 03, ಪಾಂಡವಪುರ 07, ನಾಗಮಂಗಲ 08, ಮದ್ದೂರು 08, ಮಳವಳ್ಳಿ 02 ಸೇರಿದಂತೆ ಒಟ್ಟು 66 ಕರೆಗಳು ಸಹಾಯವಾಣಿಯಲ್ಲಿ ಸ್ವಿಕೃತಿಯಾಗಿದ್ದು, 46 ಬಾಲ್ಯ ವಿವಾಹವನ್ನು ತಡೆಯಲಾಗಿದೆ. ಒಟ್ಟು ಈವರೆಗೆ 66 ಪ್ರಕರಣಗಳು ವರದಿಯಾಗಿದೆ. 20 ಪ್ರಕರಣಗಳಿಗೂ ಎ.ಐ.ಆರ್ ದಾಖಲಿಸಲಾಗಿದೆ.
ಮಂಡ್ಯದಲ್ಲಿ ಒಟ್ಟು ಪ್ರಕರಣಗಳ ನೋಂದಣಿ
ಮಂಡ್ಯ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ 1098ಕ್ಕೆ ಮಾರ್ಚ್ 2011ರಿಂದ ಜೂನ್ 2022 ರವರೆಗೆ ಒಟ್ಟು 7,892 ಪ್ರಕರಣಗಳು ನೋಂದಣಿಯಾಗಿವೆ. ಜಿಲ್ಲಾ ಮಟ್ಟದಲ್ಲಿ ಮಕ್ಕಳ ಮಾರಾಟ, ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಜಾಗೃತಿಯನ್ನು ಮೂಡಿಸಲು ಹಲವಾರು ಜಾಥಾ ಮಾಡಲಾಗಿದೆ ಎಂದರು.
ಪರಿಹಾರದ ಠೇವಣಿ ಪಡೆದ ಅಧಿಕಾರಿಗಳು
ಇದೇ ಸಂದರ್ಭದಲ್ಲಿ ಕೋವಿಡ್ನಿಂದ ತಂದೆ, ತಾಯಿ ಇಬ್ಬರನ್ನು ಕಳೆದುಕೊಂಡಿರುವ ಮಕ್ಕಳಿಗೆ ಪಿ.ಎಂ.ಕೇರ್ಸ್ನಿಂದ ನೀಡಲಾಗುವ 10 ಲಕ್ಷ ರೂಪಾಯಿ ಪರಿಹಾರದ ಠೇವಣಿಯನ್ನು ಪಡೆದುಕೊಳ್ಳಲಾಯಿತು.
ಸಭೆಯಲ್ಲಿ ಜಿಲ್ಲಾ ಉಪಕಾರ್ಯದರ್ಶಿ ಸರಸ್ವತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚೇತನ್ ಕುಮಾರ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂ ಪ್ರಕಾಶ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅನಿಲ್ಕುಮಾರ್, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ವಿಜಯ್ ಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬಾಲ್ಯ ವಿವಾಹ ತಡೆಗಟ್ಟಲು ಎಲ್ಲಾ ಇಲಾಖೆಗಳ ಸಹಕಾರ ಮುಖ್ಯ. ಗ್ರಾಮ ಮಟ್ಟದಲ್ಲಿ ನಿಯೋಜನೆ ಆಗಿರುವ ಅಧಿಕಾರಿಗಳು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು. ಗ್ರಾಮ ಮಟ್ಟದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದು ಸೂಚಿಸಿದರು.