ಲಂಚ ಸ್ವೀಕರಿಸುವಾಗಲೇ ಡಿಸಿ ಕಚೇರಿ ಅಧಿಕಾರಿ ಎಸಿಬಿ ಬಲೆಗೆ
ಮಂಡ್ಯ, ಜನವರಿ 18: ಮಂಡ್ಯ ಸರ್ವೇಯರ್ ಒಬ್ಬರಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಿಸಲು ಶಿಫಾರಸು ಮಾಡುವುದಕ್ಕಾಗಿ 30 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯ ಮಹಿಳಾ ಅಧಿಕಾರಿಯೊಬ್ಬರನ್ನು ಎಸಿಬಿ ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ.
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯ ಅಧೀಕ್ಷಕಿ ಹಾಗೂ ಪದ ನಿಮಿತ್ತ ಭೂ ದಾಖಲೆಗಳ ಉಪ ನಿರ್ದೇಶಕಿ ವಿಜಯ ಎಂಬುವವರೇ ಸೋಮವಾರ ಕಚೇರಿಯಲ್ಲೇ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ.
ರಾಷ್ಟ್ರಪತಿ, ಪ್ರಧಾನಮಂತ್ರಿಗೆ ಪತ್ರ ಬರೆದ ಮಂಡ್ಯದ ರೈತ: ಕಾರಣವೇನು?
ಮಹದೇವಯ್ಯ ಎಂಬವರು ಕಳೆದ 5 ವರ್ಷಗಳಿಂದ ಹೊರಗುತ್ತಿಗೆ ಸಂಸ್ಥೆಯ ಮೂಲಕ ಗುತ್ತಿಗೆ ಆಧಾರದಲ್ಲಿ ಸರ್ವೇಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಡಿಸೆಂಬರ್ನಲ್ಲಿ ಗುತ್ತಿಗೆ ಅವಧಿ ಮುಕ್ತಾಯಗೊಂಡಿದ್ದು, ಈ ಬಾರಿ ಹೊರಗುತ್ತಿಗೆಯನ್ನು ಬೇರೆ ಸಂಸ್ಥೆ ಪಡೆದುಕೊಂಡಿತ್ತು.
ಈ ಹೊರಗುತ್ತಿಗೆ ಸಂಸ್ಥೆ ಮೂಲಕ ಪುನಃ ಸರ್ವೇಯರ್ ಕೆಲಸ ಪಡೆಯಲು ವಿಜಯಾ ಅವರನ್ನು ವಿನಂತಿಸಿದ್ದರು. ಆದರೆ ವಿಜಯಾ ಅವರು ಗುತ್ತಿಗೆ ಸಂಸ್ಥೆಗೆ ಕೆಲಸ ಕೊಡಲು ಶಿಫಾರಸು ಮಾಡುವುದಕ್ಕಾಗಿ 30 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ದುಬಾರಿ ಬೇಡಿಕೆಗೆ ಬೆಚ್ಚಿದ ಮಹದೇವಯ್ಯ ಅವರು ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಭೂ ದಾಖಲೆಗಳ ಉಪ ನಿರ್ದೇಶಕರ ಕಚೇರಿಯಲ್ಲಿ ದಾಳಿ ನಡೆಸಿ 25 ಸಾವಿರ ರೂ. ಹಣ ಪಡೆಯುತ್ತಿದ್ದ ವಿಜಯ ಅವರನ್ನು ಬಂಧಿಸಿದರು.
Recommended Video
ಎಸಿಬಿ ಮೈಸೂರಿನ ಡಿವೈಎಸ್ಪಿ ಪರಶುರಾಮಪ್ಪ, ಮಂಡ್ಯ ಎಸಿಬಿ ಇನ್ಸ್ಪೆಕ್ಟರ್ ಸತೀಶ್, ಪಾಪಣ್ಣ, ನೇತ್ರಾವತಿ, ಪುಷ್ಪಲತ ಮುಂತಾದವರು ದಾಳಿಯಲ್ಲಿ ಭಾಗವಹಿಸಿದ್ದರು.