ರೈತನಿಂದ ಲಂಚ ಪಡೆದು ಜೈಲು ಸೇರಿದ ಕೆ.ಆರ್. ಪೇಟೆ ಎಎಸ್ ಐ
ಮಂಡ್ಯ, ಅಕ್ಟೋಬರ್ 22: ಜಿಲ್ಲೆಯಲ್ಲಿ ಸಾಲದ ಸುಳಿಗೆ ಸಿಲುಕಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇಂಥ ಪರಿಸ್ಥಿತಿಯಲ್ಲೂ ಮಾನವೀಯತೆ ಮರೆತು ರೈತನಿಗೆ ಕೆಲಸ ಮಾಡಿಕೊಡದೆ ಲಂಚಕ್ಕೆ ಕೈಯೊಡ್ಡಿದ್ದ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ ಐ ಇದೀಗ ಬಂಧನಕ್ಕೊಳಗಾಗಿದ್ದಾರೆ.
ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ ಐ ಈರೇಗೌಡ ಎಂಬಾತ ಜಮೀನು ಸ್ವಾಧೀನಕ್ಕೆ ಪೊಲೀಸ್ ರಕ್ಷಣೆ ನೀಡಲು ರೈತನಿಂದ 22 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದು ಆತನನ್ನು ಬಂಧಿಸಲಾಗಿದೆ.
ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದ ವಿರಾಜಪೇಟೆ ತಹಶೀಲ್ದಾರ್
ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ಹೆಮ್ಮನಹಳ್ಳಿ ಗ್ರಾಮದ ರೈತ ಉಮೇಶಗೌಡ ಎಂಬುವರು ತಮ್ಮ ಜಮೀನನ್ನು ಅಳತೆ ಮಾಡಿ ಸ್ವಾಧೀನಕ್ಕೆ ಪಡೆದುಕೊಳ್ಳಲು ಯಾವುದೇ ತಂಟೆ ತಕರಾರು ಬಾರದಂತೆ ಪೊಲೀಸ್ ರಕ್ಷಣೆ ನೀಡುವಂತೆ ಕೆ.ಆರ್.ಪೇಟೆ ತಹಶೀಲ್ದಾರ್ ಕೇಳಿಕೊಂಡಿದ್ದು, ಅವರು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರಿಗೆ ಪತ್ರ ಬರೆದಿದ್ದರು. ಉಮೇಶಗೌಡ ರಕ್ಷಣೆ ನೀಡುವಂತೆ ಎ.ಎಸ್.ಐ ಈರೇಗೌಡ ಅವರಲ್ಲಿ ಹಲವು ಬಾರಿ ಮನವಿ ಮಾಡಿದ್ದರು. ಆದರೆ ತಕರಾರು ಇರುವ ಜಮೀನಿಗೆ ರಕ್ಷಣೆ ನೀಡಬೇಕಾದರೆ 30 ಸಾವಿರ ಲಂಚ ನೀಡಬೇಕು ಎಂದು ಈರೇಗೌಡ ಕೇಳಿದ್ದರು.
ಇಷ್ಟೊಂದು ಹಣ ನನ್ನಲ್ಲಿ ಇಲ್ಲ ಎಂದು ರೈತ ಹೇಳಿದ್ದರಿಂದ ಒಂದೂವರೆ ತಿಂಗಳಿನಿಂದಲೂ ಸತಾಯಿಸುತ್ತಾ ಬಂದಿದ್ದರು. ಅನ್ಯ ಮಾರ್ಗವಿಲ್ಲದೆ ಉಮೇಶಗೌಡ, ಸಾಲ ಮಾಡಿ 20 ಸಾವಿರ ಕೊಡುತ್ತೇನೆ ಎಂದು ಕೇಳಿಕೊಂಡರು. ಕೊನೆಗೆ 25 ಸಾವಿರಕ್ಕೆ ಒಪ್ಪಿಕೊಂಡು ಮುಂಚಿತವಾಗಿ 22 ಸಾವಿರ ನೀಡಬೇಕೆಂದು ಪಟ್ಟು ಹಿಡಿದಿದ್ದನು.
ಭ್ರಷ್ಟಾಚಾರ ಆರೋಪ; ಕುಂದಾಪುರ ಉಪವಿಭಾಗಾಧಿಕಾರಿ ಮನೆ ಮೇಲೆ ಎಸಿಬಿ ದಾಳಿ
ಉಮೇಶಗೌಡರ ಮಂಡ್ಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇಲಾಖೆಗೆ ಅ.21ರಂದು ದೂರು ನೀಡಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು. ದೂರು ದಾಖಲಿಸಿಕೊಂಡ ಎಸಿಬಿ ಅಧಿಕಾರಿಗಳು ತಂಡ ರಚಿಸಿ ದಾಳಿ ನಡೆಸಲು ಸಿದ್ಧತೆ ಮಾಡಿಕೊಂಡು ಅಂದೇ ಸಂಜೆ ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರ ಕಚೇರಿಯ ದ್ವಾರದ ಮುಂಭಾಗದಲ್ಲಿ ರೈತ ಉಮೇಶಗೌಡ ಅವರಿಂದ ಈರೇಗೌಡ ಲಂಚ ಸ್ವೀಕರಿಸುತ್ತಿದ್ದಾಗ ದಿಢೀರ್ ದಾಳಿ ನಡೆಸಿದ್ದಾರೆ. ಲಂಚದ ಹಣ ಸಮೇತ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಮೇರೆಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.