ಪಾಂಡವಪುರದಲ್ಲಿ ಮುಂಗಾರು ಮಳೆ ಕಲರವ
ಮಂಡ್ಯ, ಸೆಪ್ಟೆಂಬರ್ 14: ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ದೇವೇಗೌಡನಕೊಪ್ಪಲು ಗ್ರಾಮದ ಸಮೀಪದ ಜ್ಞಾನಬಂಧು ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮುಂಗಾರು ಮಳೆಯ ಕಲರವ(ಮಾನ್ಸೂನ್ ಡೇ) ಎಂಬ ವಿನೂತನ ಕಾರ್ಯಕ್ರಮ ಗಮನಸೆಳೆಯಿತು.
ಶ್ರೀರಂಗಪಟ್ಟಣ: ಕಾವೇರಿ ನದಿ ಪುಷ್ಕರ ಪುಣ್ಯ ಸ್ನಾನ ಆರಂಭ
ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮುಂಗಾರು ಮಳೆಯ ಅನುಭವ, ಯಾವ ಕಾಲದಲ್ಲಿ ಮುಂಗಾರು ಮಳೆ ಬರಲಿದೆ, ಮಳೆಯಿಂದಾಗುವ ಅನುಕೂಲಗಳ ಬಗ್ಗೆ ತಿಳಿವಳಿಕೆ ಮೂಡಿಸಲಾಯಿತು.
ಇದೇ ವೇಳೆ ಮಳೆಯ ಪ್ರಾತ್ಯಕ್ಷಿಕೆ ತೋರಿಸಲಾಯಿತಲ್ಲದೆ, ಮಳೆಯ ನೀರಿನಲ್ಲಿ ಮಕ್ಕಳು ಕೊಡೆಗಳನ್ನು ಹಿಡಿದು ಕುಣಿದು ಕುಪ್ಪಳಿಸುವ ಮೂಲಕ ಮೂಲಕ ಶಾಲೆಯ ಪುಟಾಣಿ ಮಕ್ಕಳು ಮಳೆಯ ಸಿಂಚನದ ಸುಖ ಅನುಭವಿಸಿದರು. ಅವರಿಗೆ ಶಿಕ್ಷಕಿಯರು ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ಜ್ಞಾನಬಂಧು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಂ.ಆರ್.ಕುಮಾರಸ್ವಾಮಿ, 'ಮುಂಗಾರು ಮಳೆಯೂ ಒಂದೊಂದು ರಾಜ್ಯದಲ್ಲಿ ಒಂದೊಂದು ತಿಂಗಳಲ್ಲಿ ಬೀಳುತ್ತಿದೆ. ಮುಂಗಾರು ಮಳೆ ಭೂಮಿಗೆ ಸ್ಪರ್ಶವಾಗುತ್ತಿದ್ದಂತೆ ಭೂಮಿಯಲ್ಲಿ ತಂಪಾಗಿ ರೈತರು ಬೇಸಾಯಕ್ಕೆ ಮುಂದಾಗುತ್ತಾರೆ' ಎಂದು ಮಕ್ಕಳಿಗೆ ಅರಿವು ಮೂಡಿಸಿದರು.
ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆಗಾಗಿ ಮಳೆ ಅತ್ಯವಶ್ಯಕವಾಗಿ ಬೇಕಾಗಿದೆ. ರೈತರು ಕೃಷಿ ಮಾಡಬೇಕಾದರೆ, ಅಂತರ್ಜಲ ವೃದ್ಧಿಸಬೇಕಾದರೆ, ಪ್ರಾಣಿ, ಪಕ್ಷಿಗಳು, ಮಾನವರು ಜೀವಿಸಬೇಕಾದರೆ ನೀರಿನ ಅತ್ಯಗತ್ಯ. ಭೂಮಿಯಲ್ಲಿ ನೀರು ಬೇಕಾದರೆ ಕಾಲಕಾಲಕ್ಕೆ ಮಳೆಯಾಗಬೇಕು.
ಒಂದು ವೇಳೆ ಕಾಲಕಾಲಕ್ಕೆ ಮಳೆಯಾಗದಿದ್ದರೆ ದೇಶಾದ್ಯಂತ ಬರಗಾಲ ಹೆಚ್ಚಾಗಿ ಜನ-ಜಾನುವಾರುಗಳು, ಪ್ರಾಣಿಪಕ್ಷಿಗಳು ಕುಡಿಯಲು ನೀರಿಲ್ಲದೆ ಸಾಯುವಂತಹ ಸ್ಥಿತಿ ನಿರ್ಮಾಣವಾಗಲಿದೆ. ರೈತರು ಬೇಸಾಯ ಮಾಡಲು ಸಾಧ್ಯವಾಗುವುದಿಲ್ಲ. ಕೃಷಿ ಮಾಡದೆ ಹೋದರೆ ತಿನ್ನಲು ಆಹಾರವಿಲ್ಲದೆ ಮನುಕುಲ ಅಧೋಗತಿಗೆ ತಲುಪುವಂತಹ ಸ್ಥಿತಿ ಎದುರಾಗುತ್ತದೆ ಆದ್ದರಿಂದ ದೇಶ ಸಮೃದ್ಧಿಯಾಗಿರಬೇಕಾದರೆ ಮಳೆ ಅತ್ಯವಶ್ಯಕವಾಗಿ ಬೇಕಾಗಿದೆ ಎಂದು ಹೇಳಿದರು.
ಆದ್ದರಿಂದ ಮಕ್ಕಳು ಚಿಕ್ಕವಯಸ್ಸಿನಿಂದಲೇ ಮಳೆಯ ಬಗ್ಗೆ ಜಾಗೃತಿ ಮೂಡಿಸಿಕೊಂಡು ಮುಂದೆ ಸಮಾಜಕ್ಕೆ ಹೆಚ್ಚು ಮಳೆ ಬೀಳಬೇಕಾದರೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುವುದರ ಬಗ್ಗೆ ತಿಳಿದುಕೊಳ್ಳಬೇಕು. ಹೆಚ್ಚು ಮರಗಳನ್ನು ಬೆಳೆಸಿ ಅರಣ್ಯ ಸಂಪತ್ತು ಹೆಚ್ಚಿಸಬೇಕು ಎಂದರು.