ಮೇಲುಕೋಟೆ ಚೆಲುವನಾರಾಯಣನ ಪಾದದ ಬಳಿ ಮುಸ್ಲಿಂ ಮಹಿಳೆಯ ವಿಗ್ರಹ?!
ಮಂಡ್ಯ, ಮಾರ್ಚ್ 27: ತಮಿಳುನಾಡಿನ ರಾಜ ಕ್ರಿಮಿಕಾಂತ ವೈಷ್ಣವರನ್ನ ಎಲ್ಲೆಂದರಲ್ಲಿ ಹತ್ಯೆಮಾಡಲು ಆದೇಶ ನೀಡಿದಾಗ, ಅಲ್ಲಿದ್ದ ರಾಮಾನುಜಾಚಾರ್ಯರು ಹಾಗು ಅವರೊಂದಿಗೆ ವೈಷ್ಣವರು ಮೇಲುಕೋಟೆಗೆ ಬಂದರೆಂಬುದು ಇತಿಹಾಸ.
ಆದರೆ ಒಮ್ಮೆ ರಾಮಾನುಜಾಚಾರ್ಯರ ಕನಸಿನಲ್ಲಿ ಶ್ರೀಮನ್ ನಾರಾಯಣರು ಕಾಣಿಸಿಕೊಂಡು, ಅನೇಕ ವರ್ಷಗಳ ಹಿಂದೆ ಮೇಲುಕೋಟೆಯ ಮೇಲೆ ದೆಹಲಿ ಸುಲ್ತಾನರು ದಾಳಿಮಾಡಿದ ಸಂಧರ್ಭದಲ್ಲಿ ಮೇಲುಕೋಟೆಯ ಉತ್ಸವ ಮೂರ್ತಿ ಚೆಲುವನಾರಾಯಣ ಸ್ವಾಮಿಯಯನ್ನು ಕದ್ದೊಯ್ದಿದ್ದು, ಅದು ಈಗ ದೆಹಲಿಯ ಸಲ್ತಾನನ ಮಗಳ ಅಂತಃಪುರದಲ್ಲಿದೆ. ಅದನ್ನು ತೆಗೆದುಕೊಂಡು ಬಂದು ಪೂಜಿಸಲು ಭಗವಂತನು ಆದೇಶ ನೀಡುತ್ತಾನೆ. ಅದರಂತೆ ದೆಹಲಿಗೆ ತೆರಳಿದ ರಾಮಾನುಜಾಚಾರ್ಯರು ದೆಹಲಿಯ ಸುಲ್ತಾನನನ್ನು ವಿಗ್ರಹವನ್ನು ಹಿಂದಿರುಗಿಸುವಂತೆ ಕೇಳಲಾಗಿ , ಅಂತಹ ವಿಗ್ರಹ ನಮ್ಮ ಬಳಿ ಇಲ್ಲ. ಬೇಕಾದರೆ ನಿನ್ನ ಭಗವಂತನನ್ನು ಒಮ್ಮೆ ಜೋರಾಗಿ ಕೂಗು ಬಂದರೆ ಕರೆದುಕೊಂಡು ಹೋಗು ಎಂದು ಉಡಾಫೆಯ ಉತ್ತರ ನೀಡುತ್ತಾನೆ.
ಮೇಲುಕೋಟೆ ವೈರಮುಡಿ ಜಾತ್ರೆಯ ವೇಳೆ ನಡೆಯಿತೊಂದು ಪವಾಡ!
ರಾಮಾನುಜಾಚಾರ್ಯರು ದಿವ್ಯ ದೃಷ್ಟಿಯಿಂದ ನೋಡಲಾಗಿ, ಸುಲ್ತಾನನ ಅವಿವಾಹಿತ ಮಗಳು ತುಲುಕ್ಕ ನಾಚಿಯಾರ್ ಒಂದು ತೊಟ್ಟಿಲಲ್ಲಿ ಆ ವಿಗ್ರಹವನ್ನು ಬಚ್ಚಿಟ್ಟು ತನ್ನ ಮಗುವನ್ನು ನೋಡಿಕೊಳ್ಳುವ ಹಾಗೆ ನೋಡಿಕೊಂಡಿರುತ್ತಾಳೆ ಹಾಗೂ ಪ್ರಾಣಕ್ಕಿಂತ ಹೆಚ್ಚಾಗಿ ಆ ವಿಗ್ರಹವನ್ನು ಬಹಳ ಭಕ್ತಿ ಇಂದ ಪ್ರೀತಿಸುತ್ತಿರುತ್ತಾಳೆ ಪೂಜಿಸುತ್ತಿರುತ್ತಾಳೆ. ಆದರೆ ಈ ವಿಚಾರ ದೆಹಲಿಯ ಸುಲ್ತಾನನಿಗೆ ತಿಳಿದಿರುವುದಿಲ್ಲ. ಇದನ್ನು ಮನಗಂಡ ರಾಮಾನುಜರು ಒಮ್ಮೆ ಜೋರಾಗಿ 'ವಾಡಾ.. ಏನ್ ಕಣ್ಣಾ, ಏನ್ ಸೆಲ್ವ ಪಿಳ್ಳೆ' ಎಂದು ಭಕ್ತಿಯಿಂದ ಪ್ರೀತಿಯಿಂದ ಮಕ್ಕಳನ್ನು ಕರೆಯುವ ರೀತಿಯಲ್ಲಿ ಕರೆಯಲಾಗಿ , ಆ ವಿಗ್ರಹವು ತನ್ನಷ್ಟಕ್ಕೆ ತಾನೇ ನಡೆದು ಕೊಂಡು ಬಂದು ರಾಮಾನುಜರ ತೊಡೆಯ ಮೇಲೆ ಕುಳಿತುಕೊಳ್ಳುತ್ತದೆ. ಇದನ್ನು ಕಂಡ ಆಸ್ಥಾನದ ಎಲ್ಲರೂ ಸುಲ್ತಾನನು ಸೇರಿದಂತೆ ನಿಬ್ಬೆರಗಾಗುತ್ತಾರೆ. ನಂತರ ಆ ವಿಗ್ರಹವನ್ನು ಮೇಲುಕೋಟೆಗೆ ರಾಮಾನುಜರು ತೆಗೆದುಕೊಂಡು ಬರುತ್ತಾರೆ. ನಂತರ ಉತ್ಸವ ನಡೆಯುತ್ತದೆ.
ಮೇಲುಕೋಟೆ ಬಳಿ ರಾಮಾನುಜಾಚಾರ್ಯ ಪ್ರತಿಮೆ ಅನಾವರಣ
ಇದಾದ ಸ್ವಲ್ಪ ದಿನಗಳ ನಂತರ ಚುಲುವ ನಾರಾಯಣನನ್ನು ಬಿಟ್ಟಿರಲಾರದ ಸುಲ್ತಾನನ ಮಗಳು ಮೇಲುಕೋಟೆಗೆ ಓಡೋಡಿ ಬರುತ್ತಾಳೆ. ಮೇಲುಕೋಟೆಯ ದೇವಾಲಯದ ಬಳಿ ಅವಳನ್ನು ತಡೆದ ದ್ವಾರ ಪಾಲಕರು ಅವಳನ್ನು ದೇವಾಲಯದ ಒಳಗಡೆ ಬಿಡಲು ನಿರಾಕರಿಸುತ್ತಾರೆ. ಬಹಳ ನೋವಿನಲ್ಲಿದ್ದ ನಾಚಿಯಾರ್ ಳನ್ನು ಕಂಡ ರಾಮಾನುಜರು ಅವಳನ್ನು ದೇವಾಲಯದ ಒಳಗಡೆ ಬಿಡಲು ಸೂಚಿಸುತ್ತಾರೆ. ಆಗ ನಾಚಿಯಾರ್ ಓಡೋಡಿ ಹೋಗಿ ದೇವರ ಗರ್ಭ ಗುಡಿಯಲ್ಲಿ ಎಲ್ಲರೂ ನೋಡುತ್ತಿದ್ದಂತೆ ಆ ಭಗವಂತನಲ್ಲಿ ಐಕ್ಯವಾಗುತ್ತಾಳೆ. ಇದನ್ನು ನೋಡಿದ ಸಾವಿರಾರು ಜನ ನಾಚಿಯಾರ್ ಭಕ್ತಿಯನ್ನು ಕೊಂಡಾಡುತ್ತಾರೆ. ಆ ಕಾರಣಕ್ಕಾಗಿಯೇ ಅಂದಿನಿಂದ ಇಂದಿಗೂ ನಾಚಿಯಾರ್ ವಿಗ್ರಹವನ್ನು ಮಾಡಿಸಿ ದೇವರ ಪಾದದ ಕೆಳಗೆ ಇಟ್ಟು ದೇವರಿಗೆ ಸಲ್ಲುವ ಎಲ್ಲಾ ಪೂಜೆಯು ನಾಚಿಯಾರ್ ಗೂ ಸಲ್ಲುವ ರೀತಿಯಲ್ಲಿ ಪೂಜಾ ಕಾರ್ಯಗಳು ನಡೆಯುತ್ತವೆ