ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ನಾಲ್ಕೂವರೆ ಕೆಜಿ ಚಿನ್ನ ಲಪಟಾಯಿಸಿದ ಆಸಾಮಿ!
ಬೆಂಗಳೂರು, ಅ. 15: ಸಕ್ಕರೆ ನಾಡು ಮಂಡ್ಯದಲ್ಲೊಂದು ಮಹಾ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್ನಲ್ಲಿ ಚಿನ್ನ ಇಟ್ಟರೆ ಹೆಚ್ಚಿನ ಬಡ್ಡಿ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿರುವ ಪ್ರಕರಣ ನಡೆದಿದೆ. ಹೀಗೆ ಸುಮಾರು 20 ಕೋಟಿ ರೂಪಾಯಿಗಳಷ್ಟು ಬೆಲೆ ಬಾಳುವ ಚಿನ್ನವನ್ನು ಸಂಗ್ರಹಿಸಿ ಖತರ್ನಾಕ್ ಖದೀಮ ವಂಚನೆ ಮಾಡಿದ್ದಾನೆ.
ಮಂಡ್ಯದ ಫೆಡ್ ಬ್ಯಾಂಕ್ನ ಎಕ್ಸಿಕ್ಯುಟಿವ್ನಿಂದ ಭಾರೀ ವಂಚನೆ ನಡೆದಿರುವುದು ಪತ್ತೆಯಾಗಿದ್ದು, ನಮ್ಮ ಬ್ಯಾಂಕ್ನಲ್ಲಿ ಚಿನ್ನ ಇಟ್ಟರೆ ವಾರಕ್ಕೆ ಶೇಕಡಾ 20ರಷ್ಟು ಹಾಗೂ ತಿಂಗಳಿಗೆ ಶೇಕಡಾ 40 ರಷ್ಟು ಬಡ್ಡಿ ಕೊಡುತ್ತೇವೆ ಎಂದು ಆಮಿಷವೊಡ್ಡಿ, ನಂಬಿಸಿ ಚಿನ್ನವನ್ನು ಸಂಗ್ರಹಿಸಿದ್ದಾನೆ. ಮಂಡ್ಯದ ಗುತ್ತಲು ಬಡಾವಣೆಯ ಸೋಮಶೇಖರ್ ಎಂಬುವನಿಂದ ಈ ಕೃತ್ಯ ನಡೆದಿದೆ. ಚಿನ್ನ ಕೊಟ್ಟಿದ್ದಕ್ಕೆ ಯಾವುದೇ ದಾಖಲೆಯನ್ನು ಪಡೆಯದೆ, ಬಡ್ಡಿಯ ಆಮಿಷಕ್ಕೆ ಒಳಗಾಗಿ ಮಹಿಳಾ ಗ್ರಾಹಕರು ಚಿನ್ನ ಕಳೆದುಕೊಂಡು ಕಂಗಾಲಾಗಿದ್ದಾರೆ.
ಮಹಿಳೆಯರು ಖದೀಮನ ಟಾರ್ಗೆಟ್
ಮಹಿಳೆಯರು ಮತ್ತು ಮಂಗಳಮುಖಿಯರನ್ನು ಗುರಿಯಾಗಿರಿಸಿಕೊಂಡು ಸೋಮಶೇಖರ್ ವಂಚನೆ ಮಾಡಿದ್ದಾನೆ. ಈ ಬಗ್ಗೆ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಂಗಳಮುಖಿಯೊಬ್ಬರ ದೂರಿನಿಂದ ಸುಮಾರು 20 ಕೋಟಿ ರೂಪಾಯಿಗಳ ವಂಚನೆ ಪ್ರಕರಣ ಬಯಲಿಗೆ ಬಂದಿದೆ.
ಬೆಳಗಾವಿ; ನದಿಯಲ್ಲಿ ಸಿಕ್ಕ ಶವದೊಂದಿಗೆ ಇತ್ತು 1.5 ಕೆಜಿ ಚಿನ್ನ!
ಬಗೆದಂತೆ ಹೆಚ್ಚಾಗುತ್ತಿದೆ ಪ್ರಕರಣ
ದೊಡ್ಡ ದೊಡ್ಡ ಕುಟುಂಬದ ಮಹಿಳೆಯರೇ ಈತನ ಗ್ರಾಹಕರಾಗಿದ್ದಾರೆ ಎಂದು ವಿಚಾರಣೆ ವೇಳೆ ಬಯಲಾಗಿದೆ. ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷೆ ಸೇರಿ ಹಲವರಿಗೆ ವಂಚನೆ ಮಾಡಿರುವುದು ಬಯಲಾಗಿದೆ. ವಿಚಾರಣೆ ತೀವ್ರವಾಗುತ್ತಿದ್ದಂತೆಯೆ ವಂಚಕನ ಬೃಹತ್ ದೋಖಾದ ಆಳ ಹೆಚ್ಚಾಗುತ್ತಿದೆ.
ಮಂಗಳಮುಖಿಯೊಬ್ಬರು ಕೊಟ್ಟಿದ್ದ ದೂರು
ಮಂಗಳಮುಖಿಯೊಬ್ಬರು ನೀಡಿದ ದೂರು ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಡ್ಯದ ಆರ್.ಪಿ. ರಸ್ತೆಯಲ್ಲಿರುವ ಫೆಡ್ ಬ್ಯಾಂಕ್ನಲ್ಲಿ ತೀವ್ರ ತಪಾಸಣೆ ಮಾಡಲಾಗುತ್ತಿದೆ. ಜೊತೆಗೆ ಚಿನ್ನ ಅಡವಿಟ್ಟಿರುವ ಬೇರೆ ಬೇರೆ ಗೋಲ್ಡ್ ಕಂಪನಿಗಳಲ್ಲೂ ತಪಾಸಣೆ ನಡೆಸಲಾಗುತ್ತಿದೆ.
ಫೈನಾನ್ಸ್ ಕಂಪನಿಗಳಲ್ಲಿಟ್ಟಿದ್ದಾನೆ ಮಹಿಳೆಯರ ಚಿನ್ನ
ಆರೋಪಿ ಸೋಮಶೇಖರ್ ಮಣಪ್ಪುರಂ, ಮುತ್ತೂಟ್, ಕೋಶಮಟ್ಟಂ ಫೈನಾನ್ಸ್ ಕಂಪನಿಗಳಲ್ಲಿಯೂ ಚಿನ್ನವನ್ನು ಇಟ್ಟಿದ್ದಾನೆ. ಪೊಲೀಸರ ವಶದಲ್ಲಿರುವ ಆರೋಪಿ ಸೋಮಶೇಖರ್ನನ್ನು ಕರೆದೊಯ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. 30ಕ್ಕೂ ಹೆಚ್ಚು ಮಹಿಳೆಯರಿಂದ ಹತ್ತಾರು ಕೆಜಿ ಚಿನ್ನವನ್ನು ಪಡೆದು ವಂಚನೆ ಮಾಡಿರುವುದು ಪ್ರಾಥಮಿಕ ಹಂತದ ತನಿಖೆಯಲ್ಲಿ ಪೊಲೀಸರಿಗೆ ಗೊತ್ತಾಗಿದೆ.
Recommended Video
ಹೇಗೆ ವಂಚನೆ ಮಾಡುತ್ತಿದ್ದ?
ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ಅವರು ಮಾಹಿತಿ ಕೊಟ್ಟಿದ್ದಾರೆ. ಮಂಡ್ಯದ ಕೆಲವು ಮಹಿಳೆಯರಿಂದ ಹಣ, ಒಡವೆ ಪಡೆದು ಗುತ್ತಲು ನಿವಾಸಿ ಸೋಮಶೇಖರ್ ಎಂಬಾತ ಮೋಸ ಮಾಡಿದ್ದಾನೆ. ಸೋನಿಯಾ ಎಂಬುವವರು ಕೊಟ್ಟ ದೂರು ಆಧರಿಸಿ ದೂರು ದಾಖಲಾಗಿದ್ದು, ಆರೋಪಿ ಸೋಮಶೇಖರ್ ಬಂಧಿಸಲಾಗಿದೆ.
ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಆರೋಪಿ ವಂಚನೆ ಮಾಡಿದ್ದಾನೆ. ಒಬ್ಬರಿಂದ ಪಡೆದು, ಮತ್ತೊಬ್ಬರಿಗೆ ಕೊಡುತ್ತಿದ್ದ. ಚಿನ್ನವನ್ನು ವಾಪಸ್ ಕೊಡಲಾಗದೆ, ಪರಿಸ್ಥಿತಿ ಗಂಭೀರವಾದಾಗ ವಂಚನೆ ಕುರಿತು ದೂರು ದಾಖಲಾಗಿದೆ. ತಾನು ಐಷಾರಾಮಿ ಜೀವನ ಮಾಡಲು ಸೋಮಶೇಖರ್ ಮಹಿಳೆಯರಿಗೆ ವಂಚನೆ ಮಾಡಿದ್ದಾನೆ.
ಸದ್ಯಕ್ಕೆ 36 ಜನಕ್ಕೆ ವಂಚಿಸಿರೋದು ಖಚಿತವಾಗಿದೆ. ಸುಮಾರು ನಾಲ್ಕೂವರೆ ಕೆಜಿ ಚಿನ್ನ, ಒಂದೂವರೆ ಕೋಟಿ ವಂಚನೆ ಬಗ್ಗೆ ಮಾಹಿತಿ ಇದೆ. ತನಿಖೆಗಾಗಿ ನಾಲ್ಕು ತಂಡಗಳ ರಚನೆ ಮಾಡಲಾಗಿದೆ. ಎಲ್ಲರೂ ಪ್ರತ್ಯೇಕವಾಗಿ ತನಿಖೆ ಮಾಡುತ್ತಿದ್ದಾರೆ. ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ ಎಂದು ಮಂಡ್ಯ ಜಿಲ್ಲಾ ಎಸ್ಪಿ ಕೆ. ಪರಶುರಾಮ್ ತಿಳಿಸಿದ್ದಾರೆ.