ಮಂಡ್ಯದಲ್ಲಿ 'ಬೆವರುದಾನ' ಮಾಡಿದ ಇಂಟೆಲ್ ಟೆಕ್ಕಿಗಳು!
ಮಂಡ್ಯ, ಆಗಸ್ಟ್ 24: ಬೆಂಗಳೂರಿನ ಇಂಟೆಲ್ ಕಂಪನಿಯ ನೌಕರರು ಮಂಡ್ಯದ ಕೀಲಾರ ಗ್ರಾಮದ ಸಾವಯವ ರೈತ ಬೀರೇಶ್ ಅವರ ಗದ್ದೆಯಲ್ಲಿ 'ಬೆವರು ದಾನ' ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಗಮನಸೆಳೆದರು.
ಮಂಡ್ಯ ಸಾವಯವ ಕೃಷಿಕರ ಸಹಕಾರ ಸಂಘ ಹಾಗೂ ಆಗ್ರ್ಯಾನಿಕ್ ಮಂಡ್ಯ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಕಂಪನಿಯ ಸುಮಾರು 140 ಮಂದಿ ಯುವಕ-ಯುವತಿಯರು ಬೀರೇಶ್ ಅವರ ಸುಮಾರು 2 ಎಕರೆ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದರು.
ಕಾರ್ಯಕ್ರಮದ ಉದ್ದೇಶದ ಕುರಿತು ಆಗ್ರ್ಯಾನಿಕ್ ಮಂಡ್ಯದ ಅಧ್ಯಕ್ಷ ಎಸ್.ಸಿ.ಮಧುಚಂದನ್ ಮಾತನಾಡಿ, ರೈತರು ಹಾಗೂ ಸಾಫ್ಟ್ ವೇರ್ ಕಂಪನಿ ನೌಕರರ ನಡುವೆ ಕೃಷಿ ಸಂಬಂಧ ವೃದ್ಧಿಗಾಗಿ, ಕೃಷಿಯ ಬಗ್ಗೆ ಸಾಫ್ಟ್ ವೇರ್ ನೌಕರರಿಗೆ ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಹೇಳಿದರು.
ಆಗ್ರ್ಯಾನಿಕ್ ಮಂಡ್ಯ ಸುಮಾರು 15ಕ್ಕೂ ಹೆಚ್ಚು ಬೆವರು ದಾನ ಶಿಬಿರ ನಡೆಸಿದೆ. ವಿದ್ಯಾರ್ಥಿಗಳು ಶ್ರಮದಾನ ಶಿಬಿರ ನಡೆಸುವ ರೀತಿಯಲ್ಲಿ ಬೆವರುದಾನ ಶಿಬಿರ ನಡೆಸುತ್ತಿದೆ. ಕೃಷಿಗೆ ಇಲ್ಲಿ ಯಾವುದೇ ರಾಸಾಯನಿಕ ಗೊಬ್ಬರ ಬಳಸುತ್ತಿಲ್ಲ. ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಲಾಗುತ್ತಿದೆ. ರಾಸಾಯನಿಕ ಗೊಬ್ಬರ ಬಳಕೆಯಿಂದ ಕೃಷಿಯಲ್ಲಿ ವಿಷಯುಕ್ತ ಉತ್ಪನ್ನ ಬೆಳೆಯಲಾಗುತ್ತಿದೆ. ಬೆಳೆಯುವ ಎಲ್ಲಾ ಆಹಾರ ಪದಾರ್ಥಗಳೂ ವಿಷವಾಗಿ ನೂರಾರು ಬಗೆಯ ಖಾಯಿಲೆಗಳು ಕಾಡುತ್ತಿವೆ. ಆರೋಗ್ಯಪೂರ್ಣ ಆಹಾರ ಬೆಳೆಯುವ ಉದ್ದೇಶದಿಂದ ಸಾವಯವ ಕೃಷಿ ಬಗ್ಗೆ ವ್ಯಾಪಕ ಅರಿವು ಮೂಡಿಸಲಾಗುತ್ತಿದೆ ಎಂದರು.
ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಕಾರಸವಾಡಿ ಮಹದೇವು ಮಾತನಾಡಿ, ಕಳೆದ 2 ವರ್ಷಗಳಿಂದ ಸಾವಯವ ಕೃಷಿಕರ ಸಹಕಾರ ಸಂಘ ವಿಷಮಯವಾಗಿರುವ ಕೃಷಿ ಭೂಮಿಯನ್ನು ಮರಳಿ ಫಲವತ್ತತೆಯತ್ತ ತರಲು ವ್ಯಾಪಕ ಪ್ರಚಾರ ಮಾಡುತ್ತಿದೆ ಎಂದರು.