ಮಂಡ್ಯದ ಮೇಲುಕೋಟೆ ಸಮೀಪ ಚಿರತೆಗಳ ಹಾವಳಿ: ಸ್ಥಳೀಯರಲ್ಲಿ ಆತಂಕ
ಮಂಡ್ಯ, ನವೆಂಬರ್ 15: ಮಂಡ್ಯ ಜಿಲ್ಲೆ ಮೇಲುಕೋಟೆ ಸಮೀಪದ ಗುಡ್ಡಪ್ರದೇಶದಲ್ಲಿ ಆರು ಚಿರತೆಗಳು ಸುತ್ತಾಡುತ್ತಿದ್ದು, ಸ್ಥಳೀಯರು ಹಾಗೂ ರೈತರು ಆತಂಕಕ್ಕೀಡಾಗಿದ್ದಾರೆ.
ಕಳೆದ ಕೆಲವು ವಾರದಿಂದ ಕಾಣಿಸಿಕೊಳ್ಳುತ್ತಿರುವ ಚಿರತೆಗಳು ಗ್ರಾಮದಲ್ಲಿ ರಾತ್ರಿ ಹೊತ್ತು ನಾಯಿಗಳನ್ನು ಹೊತ್ತೊಯ್ಯುತ್ತಿವೆ. ಕೋಳಿಗಳ ಮೇಲೆ ನಿರಂತರವಾಗಿ ದಾಳಿ ಮಾಡಿ ತಿಂದು ಹಾಕುತ್ತಿವೆ. ಹೊಗರಮ್ಮನಬೆಟ್ಟ, ಜೇನುಕಲ್ಲು, ಪಲಾಷತೀರ್ಥ ಸೇರಿದಂತೆ 8 ಕಿ.ಮೀ. ವ್ಯಾಪ್ತಿಯ ಹಲವೆಡೆ ಇವು ಸುತ್ತಾಡುತ್ತಿದ್ದು, ಈವರೆಗೆ 4-5 ಕರುಗಳನ್ನೂ ಕೊಂದು ಹಾಕಿವೆ.
ಕಬ್ಬಿನ ಗದ್ದೆಯಲ್ಲಿ ಮುದ್ದಾದ ಮೂರು ಚಿರತೆ ಮರಿಗಳು ಪ್ರತ್ಯಕ್ಷ
ಈ ಕುರಿತು ಮೇಲುಕೋಟೆ ವಲಯ ಅರಣ್ಯಾಧಿಕಾರಿಗೆ ದೂರು ನೀಡಿರುವ ಗ್ರಾಮಸ್ಥರು, ಕೂಡಲೇ ಚಿರತೆಗಳನ್ನು ಸೆರೆ ಹಿಡಿದು ಬೇರೆಡೆಗೆ ಸಾಗಿಸುವಂತೆ ಒತ್ತಾಯಿಸಿದ್ದಾರೆ.
ಕಳೆದ ವಾರ ಮೇಲುಕೋಟೆ ಬಸ್ ನಿಲ್ದಾಣದ ಬಳಿ ಬಂದು ನಾಯಿಯನ್ನು ಬೇಟೆಯಾಡಿ ಕೊಂದು ತೆಗೆದುಕೊಂಡು ಹೋಗಿದೆ. ಚಿರತೆಗಳಿಗೆ ಆಹಾರ ಕೊರತೆಯಾದರೆ ಮನುಷ್ಯರ ಮೇಲೆ ದಾಳಿ ಮಾಡುವ ಸಾಧ್ಯತೆಯಿದ್ದು, ಚಿರತೆಗಳನ್ನು ಹಿಡಿದು ದಟ್ಟ ಕಾಡಿಗೆ ಬಿಡುವಂತೆ ಅರಣ್ಯಾಧಿಕಾರಗಳಲ್ಲಿ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ಆದರೆ, ಅರಣ್ಯಾಧಿಕಾರಿಗಳು ಮಾತ್ರ ಯಾವುದೇ ಕ್ರಮ ಜರುಗಿಸಿಲ್ಲ. ಹೆಚ್ಚಿನ ಅಪಾಯ ಆಗುವ ಮುನ್ನ ಚಿರತೆಗಳನ್ನು ಹಿಡಿದು ಕಾಡಿಗೆ ಬಿಡಬೇಕೆಂದು ಒತ್ತಾಯಿಸಿರುವ ಸ್ಥಳೀಯರು, ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಸಮಸ್ಯೆ ಪರಿಹರಿಸದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.