ಮಂಡ್ಯ; ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದ ನಾಲ್ವರಿಗೆ 5 ವರ್ಷ ಶಿಕ್ಷೆ
ಮಂಡ್ಯ, ಅಕ್ಟೋಬರ್ 23: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚೊಟ್ಟನಹಳ್ಳಿಯಲ್ಲಿ 2015ರಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ ತಲಾ 10 ಸಾವಿರ ರೂ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಆದೇಶಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕು ಹೊನ್ನೂರು ಗ್ರಾಮದ ಕೆಂಪರಾಜು, ಶಿವಣ್ಣ, ನಂಜುಂಡ, ರಾಜು ಶಿಕ್ಷೆಗೆ ಒಳಗಾದವರು. ಇವರು ಅದೇ ಗ್ರಾಮದ ಸಿದ್ದಶೆಟ್ಟಿ ಎಂಬುವರನ್ನು ಕೊಲೆ ಮಾಡಿದ್ದರು.
ಜ್ಞಾನಭಾರತಿ ಸಾಮೂಹಿಕ ಅತ್ಯಾಚಾರ ಪ್ರಕರಣ: 7 ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಚೊಟ್ಟನಹಳ್ಳಿ ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಇವರೆಲ್ಲ ಕೂಲಿ ಕೆಲಸಕ್ಕೆ ಬಂದಿದ್ದರು. 2015 ಸೆ.24ರಂದು, ಅಡುಗೆ ಮಾಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕೆಂಪರಾಜು ಎಂಬುವನು ಸಿದ್ದಶೆಟ್ಟಿ ಕಪಾಲಕ್ಕೆ ಹೊಡೆದಿದ್ದ. ಆಗ ಸಿದ್ದಶೆಟ್ಟಿ ಮೃತಪಟ್ಟಿದ್ದನು. ಆ ಬಳಿಕ ನೇಣು ಹಾಕಿಕೊಂಡು ಆತ ಮೃತಪಟ್ಟಿದ್ದ ಎನ್ನುವಂತೆ ನಟಿಸಿ ಟಾಟಾ ಸುಮೋದಲ್ಲಿ ಶವವನ್ನು ಗ್ರಾಮಕ್ಕೆ ಕಳುಹಿಸಿದ್ದರು.
ಆದರೆ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಕುಟುಂಬದವರು, ಶವವನ್ನು ಮತ್ತೆ ಮಂಡ್ಯ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಬಂದು ಪರೀಕ್ಷೆ ನಡೆಸಿದ್ದರು. ಜತೆಗೆ ಸಾವಿನ ಬಗ್ಗೆ ತನಿಖೆ ಮಾಡುವಂತೆ ಬೆಸಗರಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ನಂತರ ಇವರೆಲ್ಲರನ್ನೂ ವಿಚಾರಣೆಗೆ ಒಳಪಡಿಸಿದಾಗ ವಿಷಯ ಬಾಯಿ ಬಿಟ್ಟಿದ್ದರು.