ನಿರ್ಮಲಾನಂದರ ಪರಿಸರ ಪ್ರೇಮ; ಆದಿಚುಂಚನಗಿರಿಯಲ್ಲಿ 250 ಮರಗಳ ಸ್ಥಳಾಂತರ
ಮಂಡ್ಯ, ಜನವರಿ 7: ತಂತ್ರಜ್ಞಾನವನ್ನು ಬಳಸಿಕೊಂಡು ಪರಿಸರವನ್ನು ಉಳಿಸುವ ಪ್ರಯತ್ನಗಳು ಹೆಚ್ಚಾಗಿ ನಡೆಯುತ್ತಿವೆ. ಅದಕ್ಕೆ, ಈಚೆಗೆ ಮರಗಳನ್ನು ಒಂದೆಡೆಯಿಂದ ಇನ್ನೊಂದು ಕಡೆಗೆ ಸ್ಥಳಾಂತರಗೊಳಿಸುತ್ತಿರುವ ಹಲವು ಉದಾಹರಣೆಗಳು ದೊರೆಯುತ್ತಿರುವುದೇ ಸಾಕ್ಷಿ. ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಕ್ಷೇತ್ರದಲ್ಲೂ ಇಂಥದ್ದೊಂದು ಉದಾಹರಣೆ ದೊರೆತಿದೆ.
ಅರೆರೆ, ಮೈಸೂರಿನಲ್ಲಿ ಅಲ್ಲಿಂದ ಇಲ್ಲಿಗೆ ಬಂತು ಅರಳಿಮರ!
ಅತ್ಯಾಧುನಿಕ ತಂತ್ರಜ್ಞಾನದ ನೂತನ ಆಸ್ಪತ್ರೆಯ ಕಟ್ಟಡ ನಿರ್ಮಾಣದ ವೇಳೆ ಧರೆಗೆ ಉರುಳಲಿದ್ದ ಸುಮಾರು ಇನ್ನೂರೈವತ್ತಕ್ಕೂ ಹೆಚ್ಚಿನ ಮರಗಳನ್ನು ಬುಡಸಹಿತ ತೆಗೆದು ಬೇರೆಡೆ ನೆಡುವ ಮೂಲಕ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದ ಮಠಾಧೀಶರಾದ ಡಾ ನಿರ್ಮಲಾನಂದ ಸ್ವಾಮೀಜಿ ಪರಿಸರ ಪ್ರೇಮ ಮೆರೆದಿದ್ದಾರೆ.
ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ಬಳಿಯಿರುವ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮುಂಭಾಗದ ಆವರಣದಲ್ಲಿ ಸುಮಾರು 140 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ನೂತನ ಆಸ್ಪತ್ರೆ ಶಂಕುಸ್ಥಾಪನೆ ನೆರವೇರಿದೆ. ಇನ್ನೊಂದು ವರ್ಷದ ಅವಧಿಯಲ್ಲಿ ಈ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳಲಿದ್ದು, ಈ ಕಟ್ಟಡ ನಿರ್ಮಿಸಲುದ್ದೇಶಿಸಿದ ಆಸ್ಪತ್ರೆ ಆವರಣದಲ್ಲಿ ಸುಮಾರು 250ಕ್ಕೂ ಹೆಚ್ಚು ಗಿಡ ಮರಗಳಿದ್ದು, ಅವುಗಳನ್ನು ಕಟ್ಟಡ ನಿರ್ಮಾಣದ ವೇಳೆ ತೆರವುಗೊಳಿಸುವುದು ಅನಿವಾರ್ಯವಾಗಿತ್ತು. ಆದರೆ ಈ ಮರಗಳನ್ನು ನೂತನ ತಂತ್ರಜ್ಞಾನ ಬಳಸಿ ಮತ್ತೊಂದು ಪ್ರದೇಶವಾದ ಬಿಜಿಎಸ್ ಮಾಡೆಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನೆಡಲಾಗಿದೆ.
ಈ ಮರಗಿಡಗಳನ್ನು ಆದಿಚುಂಚನಗಿರಿ ವೈದ್ಯಕೀಯ ಮಹಾ ವಿದ್ಯಾಲಯದ ಬೃಹತ್ ಆವರಣದಲ್ಲಿ ದೈವೈಕ್ಯರಾದ ಬಾಲ ಗಂಗಾಧರನಾಥ ಸ್ವಾಮೀಜಿ ಹತ್ತಾರು ಜಾತಿಯ ನೂರಾರು ಮರಗಳನ್ನು ನೆಟ್ಟು ಪೋಷಿಸಿದ್ದರು. ಪರಿಸರಕ್ಕೆ ಹೆಚ್ಚು ಒತ್ತು ನೀಡಿದ್ದರು. ಈ ಮರಗಿಡಗಳು ಬೆಳೆದು ಆಸ್ಪತ್ರೆ ಆವರಣದ ಸುತ್ತಮುತ್ತ ಹಚ್ಚಹಸಿರಿನಿಂದ ಕಾಣುವುದರೊಂದಿಗೆ ತಂಪು ನೀಡುತ್ತಿತ್ತು. ಇದೀಗ ಈ ಸ್ಥಳದಲ್ಲಿ ನೂತನ ತಂತ್ರಜ್ಞಾನದಲ್ಲಿ 140 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಇಲ್ಲಿದ್ದ ಮರಗಳಿಗೆ ಜೀವದಾನ ಮಾಡಲಾಗಿದೆ.