ಮಂಡ್ಯದ 22 ಅಕ್ರಮ ಕಲ್ಲು ಗಣಿಗಾರಿಕೆಗಳ ಪರವಾನಗಿ ರದ್ದು
ಮಂಡ್ಯ, ಆಗಸ್ಟ್ 03: ಮಂಡ್ಯ ಜಿಲ್ಲೆ ಹಾಗೂ ಕೆಆರ್ಎಸ್ ಜಲಾಶಯದ ಸುತ್ತಮುತ್ತ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ಕೆಆರ್ಎಸ್ ಜಲಾಶಯಕ್ಕೆ ಹಾನಿಯಾಗುತ್ತಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಧ್ವನಿ ಎತ್ತಿದ್ದರು.
ಕೆಆರ್ಎಸ್ ಜಲಾಶಯದ ಸುತ್ತಮುತ್ತ ಅಕ್ರಮ ಕಲ್ಲು ಗಣಿಗಾರಿಕೆ ವಿವಾದ ರಾಜಕೀಯ ತಿರುವು ಕೂಡ ಪಡೆದಿತ್ತು. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಸಂಸದೆ ಸುಮಲತಾ ಅಂಬರೀಶ್ ಒತ್ತಾಯಿಸಿದ್ದರು. ಈ ಕುರಿತು ಅಂದಿನ ಗಣಿ ಸಚಿವ ಮುರುಗೇಶ್ ನಿರಾಣಿಯವರ ಗಮನಕ್ಕೂ ತರಲಾಗಿತ್ತು.
ಕೆಆರ್ಎಸ್ ಸುತ್ತ ಗಣಿಗಾರಿಕೆ; ಕೇಂದ್ರ ಸಚಿವರನ್ನು ಭೇಟಿಯಾದ ಸುಮಲತಾ
ಕೆಆರ್ಎಸ್ ಜಲಾಶಯದ ಸುತ್ತಮುತ್ತ ಅಕ್ರಮ ಕಲ್ಲು ಗಣಿಗಾರಿಕೆ ನಿಷೇಧಿಸಬೇಕೆಂದು ಇತ್ತೀಚಿಗೆ ಸುಮಲತಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿ ಮನವಿ ಮಾಡಿದ್ದರು.
ಈ ಬೆನ್ನಲ್ಲೇ ಮಂಡ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜುಲೈ 28 ರಂದು ನಡೆದ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ(ಗಣಿ) ಸಭೆಯಲ್ಲಿ ಅವಧಿ ವಿಸ್ತರಿಸಿ ನೀಡಿದ ಕಲ್ಲು ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಪ್ರಾಧಿಕಾರದಿಂದ ಇದುವರೆಗೂ ಪರಿಸರ ವಿಮೋಚನಾ ಪತ್ರವನ್ನು ಪಡೆದು ಕಚೇರಿಗೆ ಹಾಜರುಪಡಿಸದೆ ಇರುವ 22 ಕಲ್ಲುಗಣಿ ಗುತ್ತಿಗೆಗಳನ್ನು ರದ್ದುಪಡಿಸಲು ನಿರ್ಣಯಿಸಲಾಗಿದೆ. ಮಂಡ್ಯ ಜಿಲ್ಲೆಯಾದ್ಯಂತ ಪರಿಸರ ವಿಮೋಚನಾ ಪತ್ರ ಪಡೆಯದೆ ಇದ್ದ 22 ಕಲ್ಲು ಗಣಿ ಗುತ್ತಿಗೆಗಳನ್ನು ಜುಲೈ 31ರಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.
22 ಕ್ರಷರ್ಗಳ ಕ್ರಷರ್ ಪರವಾನಗಿ ರದ್ದು
ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರ ಸಭೆಯ ತೀರ್ಮಾನಂತೆ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರದ ಹಿರಿಯ ಭೂವಿಜ್ಞಾನಿ ಮತ್ತು ಸದಸ್ಯ ಕಾರ್ಯದರ್ಶಿ ಕ್ರಷರ್ ಪರವಾನಗಿಗೆ ಸಹಿ ಮಾಡಿ ವಿತರಿಸಿರುವ ಪರವಾನಗಿಗಳನ್ನು ಜುಲೈ 28 ರಂದು ನಡೆದ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರದ ಸಭೆಯಲ್ಲಿ ರದ್ದುಪಡಿಸಲು ತೀರ್ಮಾನಿಸಲಾಗಿದೆ. ಅದರಂತೆ ಮಂಡ್ಯ ಜಿಲ್ಲಾಧಿಕಾರಿಗಳು 22 ಕ್ರಷರ್ಗಳ ಕ್ರಷರ್ ಪರವಾನಗಿ (ಫಾರಂ-ಸಿ)ಯನ್ನು ರದ್ದುಪಡಿಸಿದ್ದಾರೆ.
ಪ್ರಾಧಿಕಾರ ಸಭೆಯಲ್ಲಿ ರದ್ದುಪಡಿಸಲು ತೀರ್ಮಾನ
ಪಾಂಡವಪುರ ತಾಲ್ಲೂಕು ಬೇಬಿಬೆಟ್ಟದ ಕಾವಲು ಗ್ರಾಮದ ವ್ಯಾಪ್ತಿಯಲ್ಲಿನ 4 ಕ್ರಷರ್ ಘಟಕಗಳನ್ನು Karnataka Regulation of Stone Crusher Act 2011 ರ ಕಲಂ 6(1)(b) ರಂತೆ ಕ್ರಷರ್ ಸುರಕ್ಷತಾ ವಲಯವು ಜಿಲ್ಲಾ ಮುಖ್ಯ ರಸ್ತೆಯ 100 ಮೀಟರ್ ವ್ಯಾಪ್ತಿಯೊಳಗೆ ಇರುವಂತದ್ದಲ್ಲ. ಪರವಾನಗಿದಾರರಿಗೆ ಕ್ರಷರ್ ಪರವಾನಗಿ ನೀಡಲಾಗಿರುವ ಪ್ರದೇಶವು ಲೋಕೋಪಯೋಗಿ ಇಲಾಖೆ ಹಾಗೂ ತಾಂತ್ರಿಕ ಅಧಿಕಾರಿಗಳ ವರದಿಯಂತೆ ಜಿಲ್ಲಾ ಮುಖ್ಯ ರಸ್ತೆಯ 100 ಮೀಟರ್ ಅಂತರದೊಳಗೆ ಬರುತ್ತಿರುವುದರಿಂದ ಹಾಗೂ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರದ ಹಿರಿಯ ಭೂವಿಜ್ಞಾನಿ ಮತ್ತು ಸದಸ್ಯ ಕಾರ್ಯದರ್ಶಿ ಕ್ರಷರ್ ಪರವಾನಿಗೆಗೆ ಸಹಿ ಮಾಡಿ ವಿತರಿಸಿರುವುದರಿಂದ ಜುಲೈ 28 ರಂದು ನಡೆದ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರ ಸಭೆಯಲ್ಲಿ ರದ್ದುಪಡಿಸಲು ತೀರ್ಮಾನಿಸಲಾಗಿದೆ. ಅದರಂತೆ ಮಂಡ್ಯ ಜಿಲ್ಲಾಧಿಕಾರಿಗಳು 4 ಕ್ರಷರ್ಗಳ ಕ್ರಷರ್ ಪರವಾನಗಿ(ಫಾರಂ-ಸಿ)ಯನ್ನು ರದ್ದುಪಡಿಸಿದ್ದಾರೆ.
ಚಾಲಿತ ದಳದ ರಚನೆ
ಮಂಡ್ಯ ಜಿಲ್ಲೆಯ ಪಾಂಡವಪುರ, ಶ್ರೀರಂಗಪಟ್ಟಣ ಮತ್ತು ನಾಗಮಂಗಲ ತಾಲ್ಲೂಕುಗಳಲ್ಲಿ ಅನಧಿಕೃತ ಕಲ್ಲುಗಣಿಗಾರಿಕೆ, ಸಾಗಾಣಿಕೆ ನಿಯಂತ್ರಣ ಸಂಬಂಧ ಜಿಲ್ಲಾ ಟಾಸ್ಕ್ಫೋರ್ಸ್ ವತಿಯಿಂದ ತಾಲ್ಲೂಕುವಾರು ಕಂದಾಯ ಇಲಾಖೆ, ಅರಣ್ಯ ಇಲಾಖೆ, ಪಂಚಾಯತ್ರಾಜ್ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳನ್ನು ಒಳಗೊಂಡಂತೆ ಚಾಲಿತ ದಳವನ್ನು ರಚಿಸಲಾಗಿದೆ. ಅದರಂತೆ ಚಾಲಿತ ದಳವು ಕಾರ್ಯನಿರ್ವಹಿಸುತ್ತಿದೆ.
ಚೆಕ್ಪೋಸ್ಟ್ ಸ್ಥಾಪನೆ
ಮಂಡ್ಯ ಜಿಲ್ಲೆಯಾದ್ಯಂತ ಅನಧಿಕೃತ ಕಲ್ಲುಗಣಿಗಾರಿಕೆ/ ಸಾಗಾಣಿಕೆ ನಿಯಂತ್ರಣ ಸಂಬಂಧ ಜಿಲ್ಲಾ ಟಾಸ್ಕ್ಫೋರ್ಸ್ ವತಿಯಿಂದ ಕಂದಾಯ ಇಲಾಖೆ, ಅರಣ್ಯ ಇಲಾಖೆ, ಪಂಚಾಯತ್ರಾಜ್ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ/ ಸಿಬ್ಬಂದಿಗಳನ್ನು ಒಳಗೊಂಡಂತೆ 11 ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ.
ಜಂಟಿ ತಂಡ ರಚನೆ
ಮಂಡ್ಯ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ನಡೆಯುತ್ತಿರುವ ಅನಧಿಕೃತ ಉಪಖನಿಜ ಗಣಿಗಾರಿಕೆ, ಸಾಗಾಣಿಕೆ ಹಾಗೂ ಕ್ರಷರ್ ಘಟಕಗಳು ಕಾರ್ಯನಿರ್ವಹಣೆ ಸಂಬಂಧ ಅತೀ ಹೆಚ್ಚು ದೂರು ಬರುತ್ತಿರುವ ಪ್ರದೇಶಗಳಾದ ಮಂಡ್ಯ ತಾಲ್ಲೂಕಿನ ರಾಗಿಮುದ್ದನಹಳ್ಳಿ, ಆನೆಕುಪ್ಪೆ, ಮದ್ದೂರು ತಾಲ್ಲೂಕಿನ ಕೆ.ಹೊನ್ನಲಗೆರೆ, ಶಿಂಷಾ ನದಿ ಪಾತ್ರ. ಶ್ರೀರಂಗಪಟ್ಟಣ ತಾಲ್ಲೂಕಿನ ಚನ್ನನಕೆರೆ, ಜಕ್ಕನಹಳ್ಳಿ, ಕಾಳೇನಹಳ್ಳಿ, ಗೌಡಹಳ್ಳಿ, ಗಣಂಗೂರು, ಹಂಗರಹಳ್ಳಿ, ಮುಂಡಗದೊರೆ, ಸಿದ್ದಾಪುರ, ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದ ಕಾವಲು, ಚಿನಕುರಳಿ, ಕಾಮನಾಯಕನಹಳ್ಳಿ, ಶಂಭೂನಹಳ್ಳಿ, ನರಹಳ್ಳಿ.
ನಾಗಮಂಗಲ ತಾಲ್ಲೂಕಿನ ಸಂಕನಹಳ್ಳಿ, ಗಂಗಸಮುದ್ರ, ದೇವರಹೋಸೂರು, ಕಾಂತಾಪುರ. ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು. ಹೇಮಾವತಿ ನದಿ ಪಾತ್ರ. ಮಳವಳ್ಳಿ ತಾಲ್ಲೂಕಿನ ಅಗಸನಪುರ ಗ್ರಾಮಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿ ನಿಗಾವಹಿಸಲು ಕಂದಾಯ, ಅರಣ್ಯ, ಪಂಚಾಯತ್ರಾಜ್, ಪ್ರಾದೇಶಿಕ ಸಾರಿಗೆ, ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಂತೆ ಜಂಟಿ ತಂಡಗಳನ್ನು ರಚನೆ ಮಾಡಲಾಗಿದೆ.
Recommended Video
ಪ್ರಕರಣ ದಾಖಲಿಸಿರುವ ವಿವರ
ಮಂಡ್ಯ ಜಿಲ್ಲೆಯಾದ್ಯಂತ ಅನಧಿಕೃತ ಉಪಖನಿಜ ಗಣಿಗಾರಿಕೆ, ದಾಸ್ತಾನು ಸಂಬಂಧ 12 ಪಿಸಿಆರ್ಗಳನ್ನು ಸಂಬಂಧಿಸಿದ ನ್ಯಾಯಾಲಯಗಳಲ್ಲಿ ದಾಖಲಿಸಲಾಗಿದ್ದು, ಇನ್ನೂ ಹಲವಾರು ಪ್ರಕರಣಗಳನ್ನು ದಾಖಲಿಸುವ ಕಾರ್ಯ ಪ್ರಗತಿಯಲ್ಲಿದೆ. ಅನಧಿಕೃತ ಉಪಖನಿಜ ಸಾಗಾಣಿಕೆ ಸಂಬಂಧ ಏಪ್ರಿಲ್ 2021 ರಿಂದ ಇಲ್ಲಿಯವರೆಗೆ ಒಟ್ಟು 119 ವಾಹನಗಳಿಂದ 33.73 ಲಕ್ಷ ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪದ್ಮಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.