ಕೆಆರ್ ಎಸ್ ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ಮಂಡ್ಯ, ಸೆಪ್ಟೆಂಬರ್ 6: ಕಾವೇರಿ ಕಣಿವೆಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟೆಗೆ ಹರಿದು ಬರುತ್ತಿರುವ ಒಳಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಇದೀಗ ಸುಮಾರು 20 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಕೆಆರ್ ಎಸ್ ಜಲಾಶಯದಿಂದ ಕಾವೇರಿ ನದಿಗೆ ನೀರು ಹೊರ ಬಿಟ್ಟ ಹಿನ್ನೆಲೆ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮ ಪ್ರವಾಸಿ ತಾಣದ ದೋಣಿವಿಹಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾವೇರಿ ಕೊಳ್ಳದ ಪ್ರದೇಶಗಳಲ್ಲಿ ಮತ್ತೆ ಮಳೆ ಪ್ರಭಾವ ಹೆಚ್ಚಾಗಿ ಕಾವೇರಿ ನದಿಗೆ ಹೆಚ್ಚಿನ ಒಳಹರಿವು ಬರುತ್ತಿರುವ ಹಿನ್ನಲೆ ಜಲಾಶಯದಿಂದ ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ರಂಗನತಿಟ್ಟು ಪಕ್ಷಿಧಾಮ ನೋಡಲು ಬಂದ ಪ್ರವಾಸಿಗರಿಗೆ ದೋಣಿ ವಿಹಾರ ಸ್ಥಗಿತಗೊಂಡಿದ್ದರೂ ಪ್ರವೇಶ ಪಡೆದು ವೀಕ್ಷಣೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ನೀರಾವರಿ ಇಲಾಖೆಯ ಸೂಚನೆ ಮೇರೆಗೆ ಕಳೆದ ವಾರದಿಂದ ಪ್ರಾರಂಭವಾಗಿದ್ದ ದೋಣಿವಿಹಾರವನ್ನು ಮತ್ತೆ ಸ್ಥಗಿತಗೊಳಿಸಲಾಗಿದೆ ಎಂದು ಉಪವಲಯಾರಣ್ಯಾಧಿಕಾರಿ ಪುಟ್ಟಮಾದೇಗೌಡ ತಿಳಿಸಿದ್ದಾರೆ.
ಕೊಯ್ನಾದಿಂದ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ; ಬೆಳಗಾವಿಯಲ್ಲಿ ಮತ್ತೆ ತಲ್ಲಣ
ಪ್ರಸ್ತುತ ಜಲಾಶಯದಲ್ಲಿ ಗರಿಷ್ಟ ಮಟ್ಟ 124.80 ಅಡಿಗಳಷ್ಟು ನೀರನ್ನು ಸಂಗ್ರಹಿಸಲಾಗಿದ್ದು, ಜಲಾಶಯಕ್ಕೆ 16,840 ಕ್ಯೂಸೆಕ್ ಹರಿದು ಬರುತ್ತಿದೆ. 17,809 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. 49.452 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದ್ದು, ನದಿ ಪಾತ್ರದ ಜನರು ಸುರಕ್ಷಿತ ಪ್ರದೇಶಕ್ಕೆ ತೆರಳಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕಳೆದ ಆಗಸ್ಟ್ ಮೊದಲ ವಾರದಲ್ಲಿ ಅಣೆಕಟ್ಟೆ ಭರ್ತಿಯಾಗಿದ್ದು, ನದಿ ಮೂಲಕ 2 ಲಕ್ಷ ಕ್ಯೂಸೆಕ್ಸ್ ವರೆಗೆ ನೀರನ್ನು ಹೊರಬಿಡಲಾಗಿತ್ತು. ಇದರಿಂದ ಶ್ರೀರಂಗಪಟ್ಟಣ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರವಾಹ ಎದುರಾಗಿತ್ತು. ಆ.೨೯ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ್ದರು.
ಲಿಂಗನಮಕ್ಕಿ ತುಂಬಲು ಬರೀ ಅರ್ಧ ಅಡಿ ಬಾಕಿ; ಹನ್ನೊಂದು ಗೇಟ್ ಗಳಿಂದಲೂ ನೀರು, ನೋಡಿ ಜೋಗದ ವೈಭವ
ಇದೀಗ ಮತ್ತೆ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಇದೇ ರೀತಿ ಮಳೆ ಮುಂದುವರೆದರೆ ಕೃಷ್ಣರಾಜ ಸಾಗರ ಅಣೆಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರಲಿದ್ದು, ಮತ್ತೆ ಪ್ರವಾಹ ಭೀತಿ ಎದುರಾಗುವ ಆತಂಕ ಜನರನ್ನು ಕಾಡುತ್ತಿದೆ.