ಮಂಡ್ಯದಲ್ಲಿ ಮುಂದುವರೆದ ರೈತರ ಆತ್ಮಹತ್ಯೆ: 24 ಗಂಟೆಯೊಳಗೆ ಇಬ್ಬರ ಸಾವು
ಮಂಡ್ಯ, ಜೂನ್ 22: ಮಂಡ್ಯದಲ್ಲಿ ಕಳೆದ ವಾರವಷ್ಟೇ ರೈತರೊಬ್ಬರು ನಾಲೆಗೆ ನೀರು ಹರಿಸುವಂತೆ ಸಿಎಂಗೆ ಒತ್ತಾಯಿಸಿ ನೇಣಿಗೆ ಕೊರಳೊಡ್ಡಿದ್ದರು. ಇದಾದ ಬಳಿಕ ನಿನ್ನೆಯಿಂದ ಇಂದಿನವರೆಗೂ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಲಮನ್ನಾ ತಡವಾಗುತ್ತಿರುವುದಕ್ಕೆ ಕಾರಣ ಕೊಟ್ಟ ಕುಮಾರಸ್ವಾಮಿ
ದೊಡ್ಡತರ ಹಳ್ಳಿ ಗ್ರಾಮದ ಮಂಜಶೆಟ್ಟಿ (35) ಸಾಲಬಾಧೆ ತಾಳದೆ ನೇಣು ಹಾಕಿಕೊಂಡು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಉದ್ದೇಶಕ್ಕಾಗಿ ಆಕ್ಸಿಸ್ ಬ್ಯಾಂಕ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಖಾಸಗಿ ಲೇವಾದೇವಿದಾರರಿಂದ 2 ಲಕ್ಷ ಸಾಲ ಪಡೆದಿದ್ದರು. ಸಾಲ ತೀರಿಸಲಾಗದೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಪತ್ನಿ, ಮಗ, ಮಗಳು ಇದ್ದಾರೆ. ಕಿಕ್ಕೇರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಹೇತಕೋನಹಳ್ಳಿ ಗ್ರಾಮದಲ್ಲಿ 45 ವರ್ಷದ ಹನುಮಂತಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2 ಎಕರೆ ಜಮೀನು ಹೊಂದಿದ್ದು, ಕೃಷಿಗಾಗಿ 5 ಲಕ್ಷ ಸಾಲ ಮಾಡಿಕೊಂಡಿದ್ದ ಹನುಮಂತಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ಯಾಂಕ್ ಸೇರಿದಂತೆ ಇತರ ಸಂಘಗಳಿಂದ ಮತ್ತು ಕೆಲ ವ್ಯಕ್ತಿಗಳಿಂದ ಕೈ ಸಾಲ ಮಾಡಿದ್ದ ಇವರು ಕೆಲ ದಿನಗಳಿಂದ ಖಿನ್ನತೆಗೊಳಗಾಗಿದ್ದರು. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.