ಕೃಷ್ಣರಾಜ 'ಸಾಗರ', ರಂಗನತಿಟ್ಟು- ಗೋಸಾಯ್ ಘಾಟ್ ಎಲ್ಲೆಲ್ಲೂ ನೀರೋನೀರು
ಮಂಡ್ಯ, ಆಗಸ್ಟ್ 14: ಮಲೆನಾಡು ವ್ಯಾಪ್ತಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಕೃಷ್ಣರಾಜ ಸಾಗರ (ಕೆಆರ್ ಎಸ್) ಜಲಾಶಯಕ್ಕೆ ಒಳಹರಿವು ಹೆಚ್ಚಾದ ಹಿನ್ನಲೆಯಲ್ಲಿ 1.20 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಕಾವೇರಿ ಜಲಾಯನ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಕೆಆರ್ ಎಸ್ ಜಲಾಶಯದ 37 ಗೇಟ್ ಗಳ ಮೂಲಕ ಮಂಗಳವಾರದಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದುಹೋಗುತ್ತಿರುವುದರಿಂದ ತಗ್ಗು ಪ್ರದೇಶ ಜಲಾವೃತಗೊಂಡಿದೆ. ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯ ಅಸ್ಥಿ ಬಿಡುವ ಸ್ಥಳಗಳು ಹಾಗೂ ಸಮುದಾಯ ಭವನ, ಛತ್ರಗಳು ಜಲಾವೃತಗೊಂಡಿದ್ದು, ಆತಂಕ ಎದುರಾಗಿದೆ.
ಕೆಆರ್ಎಸ್ನಿಂದ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ನದಿ ತೀರದ ಜನರಿಗೆ ಎಚ್ಚರಿಕೆ
ರಂಗನತಿಟ್ಟು, ಗಾಂಧೀಜಿ ಚಿತಾಭಸ್ಮ ವಿಸರ್ಜಿಸಿದ ಸ್ಥಳ, ಬಲಮುರಿ, ಎಡಮುರಿ, ಮಹದೇವಪುರ, ಗಂಜಾಂ, ಗೋಸಾಯ್ ಘಾಟ್, ನಿಮಿಷಾಂಭ ದೇವಸ್ಥಾನ, ಸ್ನಾನಘಟ್ಟಗಳಿಗೂ ನೀರು ನುಗ್ಗಿದೆ. ಇಲ್ಲಿನ ವೆಲ್ಲೆಸ್ಲಿ ಸೇತುವೆ ಮುಳುಗುವ ಸ್ಥಿತಿ ತಲುಪಿದ್ದು, ಸೇತುವೆ ಮೇಲೆ ಯಾವುದೇ ವಾಹನಗಳು ಸಂಚರಿಸದಂತೆ ಸೂಚಿಸಲಾಗಿದೆ. ರಂಗನತಿಟ್ಟಿನ ಪಕ್ಷಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ.
ಒಟ್ಟು 34 ದ್ವೀಪಗಳು ಮುಳುಗಿದ್ದು, ಇಲ್ಲಿನ ಮಣ್ಣು ಸವಕಳಿ ತಡೆಯಲು ಅಡ್ಡಲಾಗಿ ಹಾಕಲಾಗಿದ್ದ ಸಿಮೆಂಟ್ ಚೀಲಗಳು ಹಾಗೂ ಮರ-ಗಿಡಗಳು ಕೊಚ್ಚಿಹೋಗಿವೆ. ಅಷ್ಟೇ ಅಲ್ಲದೆ ನೆಲ ಮತ್ತು ಬಂಡೆಯ ಕೊರಕಿನಲ್ಲಿ ಪಕ್ಷಿಗಳು ಇಟ್ಟಿದ್ದ ಮೊಟ್ಟೆಗಳು ನೀರುಪಾಲಾಗಿವೆ. ಪ್ರವಾಹದಿಂದ ಸಮಸ್ಯೆ ಎದುರಾಗದಂತೆ ತಡೆಯಲು ಎನ್.ಡಿ.ಆರ್.ಎಫ್. ಪಡೆ ಕಳುಹಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಭರ್ತಿಯಾದ ಕೆಆರ್ಎಸ್ ಒಡಲು, 1 ಕೋಟಿಗೂ ಅಧಿಕ ಆದಾಯ
ಪ್ರವಾಸಿ ತಾಣದ ನದಿ ಪಾತ್ರಕ್ಕೆ ಪೊಲೀಸ್ ಸಿಬ್ಬಂದಿ ನಿಯೋಜಿಸಿ, ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲಾ ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ವಹಿಸಿದೆ. ಒಟ್ಟಾರೆ ಅಧಿಕ ಪ್ರಮಾಣದಲ್ಲಿ ನೀರು ಬಿಡುಗಡೆ ಆಗಿರುವ ಕಾರಣ ಆತಂಕದ ವಾತಾವರಣ ಎದುರಾಗಿದ್ದು, ಏನಾಗುತ್ತದೆಯೋ ಎಂಬ ಭಯ ಎಲ್ಲರನ್ನೂ ಆವರಿಸಿದೆ.