ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ ದಿವ್ಯಾಂಗ ಯುವತಿ
ಮಡಿಕೇರಿ, ಏಪ್ರಿಲ್ 06: ಕೊರೊನಾ ವೈರಸ್ ವಿರುದ್ಧ ಹೋರಾಡಲು ಸ್ಥಾಪಿಸಲಾಗಿರುವ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಸಾವಿರ ರುಪಾಯಿಗಳ ಚೆಕ್ ನ್ನು ವಿಶೇಷ ಚೇತನ ಯುವತಿ ಸ್ವಾತಿ ನೀಡಿ ಇತರರಿಗೆ ಮಾದರಿ ಆಗಿದ್ದಾರೆ.
ಮಡಿಕೇರಿ ಸಮೀಪದ ತಿತಿಮತಿಯ ಸ್ವಾತಿ ಮೆಡಿಕಲ್ಸ್ ನ ಮಾಲೀಕರಾದ ಫಿಲೋಮಿನಾ ಅವರ ವಿಶೇಷ ಚೇತನ ಮಗಳು ಸ್ವಾತಿ ಅವರು, ಸೋಮವಾರ ತಮ್ಮ ಸ್ವಂತ ಉಳಿತಾಯದ ಹಣವಾದ ೫೦ ಸಾವಿರ ರುಪಾಯಿಗಳನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ ಬೋಪಯ್ಯ ಅವರಿಗೆ ಚೆಕ್ ಹಸ್ತಾಂತರಿಸುವ ಮೂಲಕ ಮಾನವೀಯತೆಯನ್ನು ಮೆರೆದರು.
ಎಲ್ಲಾ ಸೌಕರ್ಯ ಶ್ರೀಮಂತಿಕೆ ಇದ್ದವರೂ ಕೂಡ ಸಹಾಯ ಮಾಡುವ ಮನೋಭಾವವಿಲ್ಲದ ಸ್ವಾರ್ಥಪರ ಜನರೇ ಅಧಿಕವಾಗಿರುವ ಇಂದಿನ ಸಮಾಜದಲ್ಲಿ, ಸಾಮಾನ್ಯ ಮನುಷ್ಯರಂತೆ ಬದುಕುವ ಕನಿಷ್ಠ ಸೌಲಭ್ಯವನ್ನೂ ಕಳೆದುಕೊಂಡಿರುವ ಸ್ವಾತಿ ಅವರು ಸಮಾಜದ ನೋವಿಗೆ ಸ್ಪಂದಿಸುವ ಮನೋಭಾವ ಬಳಸಿಕೊಂಡಿರುವುದು ಬಹಳ ಹೆಮ್ಮೆ ಮತ್ತು ಸಂತೋಷವಾಗುತ್ತದೆ ಎಂದು ಶಾಸಕ ಬೋಪಯ್ಯ ಶ್ಲಾಘಿಸಿದರು.
ಪತ್ರಿಕೆಗಳಲ್ಲಿ ಬಂದ ವರದಿಗಳು ನೋಡಿ ಜನರ ಸಂಕಷ್ಟಕ್ಕೆ ಕಣ್ಣೀರು ಸುರಿಸಿ ಏನಾದರೂ ಒಂದು ಸಹಾಯ ಸಮಾಜಕ್ಕೆ ಮಾಡಬೇಕೆಂಬ ಮನೋಭಾವವನ್ನು ಹೊಂದಿ, ತನ್ನ ಉಳಿತಾಯದ ಹಣವನ್ನು ನೊಂದ ಜನರಿಗೆ ನೀಡಲು ಮುಂದಾಗಿರುವುದಾಗಿ ಸ್ವಾತಿಯ ತಾಯಿ ಫಿಲೋಮಿನ ಅವರು ಮಗಳ ಅಭಿಲಾಷೆಯವನ್ನು ತಿಳಿಸಿದರು. ಸ್ವಾತಿ ಅವರ ಕೊಡುಗೆಯನ್ನು ಜನತೆ ತುಂಬು ಕಂಠದಿಂದ ಶ್ಲಾಘಿಸಿದ್ದಾರೆ.