ಕೊಡಗಿನ ಪ್ರವಾಸಿ ತಾಣಗಳ ಅಭಿವೃದ್ಧಿ ಮಾಡ್ತಾರಾ ಪ್ರವಾಸೋದ್ಯಮ ಸಚಿವರು?
ಮಡಿಕೇರಿ, ಸೆಪ್ಟೆಂಬರ್ 13: ಈಗಾಗಲೇ ಪ್ರವಾಹ ಮತ್ತು ಭೂಕುಸಿತದಿಂದ ಆಸ್ತಿಪಾಸ್ತಿ ಕಳೆದುಕೊಂಡು ಕೊಡಗಿನ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದು, ಆರ್ಥಿಕವಾಗಿ ಚೇತರಿಕೆ ಕಾಣಬೇಕಾದರೆ ಪ್ರವಾಸೋದ್ಯಮವೊಂದೇ ಇಲ್ಲಿನವರಿಗೆ ದಾರಿದೀಪವಾಗಿದೆ. ಇದನ್ನರಿತ ಪ್ರವಾಸೋದ್ಯಮ ಸಚಿವರಾದ ಸಿ.ಟಿ.ರವಿ ಜಿಲ್ಲೆಗೆ ಭೇಟಿ ನೀಡಿ ಪ್ರವಾಸಿ ತಾಣಗಳ ಅಭಿವೃದ್ಧಿ ಮಾಡುವ ಭರವಸೆ ನೀಡುವುದರೊಂದಿಗೆ ಶಕ್ತಿ ತುಂಬುವ ಪ್ರಯತ್ನ ಮಾಡಿದ್ದಾರೆ.
ಮಡಿಕೇರಿಯಲ್ಲಿ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆದು ಯೋಜನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈಗಿರುವ ಪ್ರವಾಸಿ ತಾಣಗಳಲ್ಲಿ ಕುಡಿಯುವ ನೀರು, ಶೌಚಾಲಯ, ರಸ್ತೆ ಸಂಪರ್ಕ ಮತ್ತಿತರ ಮೂಲ ಸೌಲಭ್ಯಗಳು ಹಾಗೂ ಮಾಹಿತಿ ಕೇಂದ್ರ ತೆರೆದು, ಅಗತ್ಯ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದರ ಕುರಿತು ಸ್ಥಳೀಯರ ಜೊತೆ ಚರ್ಚಿಸಿ ಪ್ರಸ್ತಾವನೆ ಸಲ್ಲಿಸುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗೆ ನಿರ್ದೇಶನ ನೀಡಿದ್ದಾರೆ.
ಮಡಿಕೇರಿ: ಭಾರಿ ಮಳೆ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು
ಜಿಲ್ಲೆಯಲ್ಲಿರುವ 296 ದಾಖಲೆ ಗ್ರಾಮಗಳ ಬಗ್ಗೆ ಮಾಹಿತಿ ಪಡೆದು, ಈ ಗ್ರಾಮಗಳ ಇತಿಹಾಸದ ದಾಖಲೀಕರಣ ಮಾಡುವಂತೆ ಹಾಗೂ ಗ್ರಾಮದ ಐತಿಹಾಸಿಕ ಹಿನ್ನೆಲೆ, ಸಾಮಾಜಿಕ ವ್ಯವಸ್ಥೆ, ಕಾಲಘಟ್ಟ ಮಾಹಿತಿ ಹೀಗೆ ಸಮಗ್ರ ಗ್ರಾಮ ಅಧ್ಯಯನ ಮಾಡಿ ವರದಿ ನೀಡುವಂತೆ ಸಲಹೆ ನೀಡಿದ್ದಾರೆ.
ಪ್ರವಾಸಿ ತಾಣಗಳ ಪಟ್ಟಿ, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದರಲ್ಲದೆ, ನನೆಗುದಿಗೆ ಬಿದ್ದಿರುವ ಕೊಡವ ಹೆರಿಟೇಜ್ ಕಟ್ಟಡ ನಿರ್ಮಾಣ, ಕನ್ನಡ ಸಾಂಸ್ಕೃತಿಕ ಸಮುಚ್ಚಯ ಭವನ ಮತ್ತಿತರ ವಿವಿಧ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸುವಂತೆ ನಿರ್ದೇಶಿಸಿದ್ದಾರೆ. ಅಲ್ಲದೆ, ಪ್ರವಾಸಿ ಟ್ಯಾಕ್ಸಿಗಳನ್ನು ಅರ್ಹರಿಗೆ ವಿತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕೊನೆಯದಾಗಿ ಸಿಟಿ ರವಿ ಏನಂದ್ರು? ಅಸಮಾಧಾನವಿದೆಯೋ, ಇಲ್ಲವೋ?
ಇದೇ ವೇಳೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ರಾಘವೇಂದ್ರ ಮಾತನಾಡಿ, ರಾಜಾಸೀಟು ಸಮಗ್ರ ಅಭಿವೃದ್ಧಿ, ಕೆಂಪುರಾಶಿ ಮೊಟ್ಟೆಯಿಂದ ಮಂಟೆಕಲ್ಲು ಶಾಲೆವರೆಗೆ ರಸ್ತೆ ಅಭಿವೃದ್ಧಿ, ದುಬಾರೆ ಬಳಿ ಕಾವೇರಿ ನದಿ ತೀರದ ಬಳಿ ಪಾರ್ಕಿಂಗ್ ಅಭಿವೃದ್ಧಿ, ನಾಲ್ಕುನಾಡು ಅರಮನೆ ಸಂಪರ್ಕ ರಸ್ತೆ ಅಭಿವೃದ್ಧಿ, ದುಬಾರೆ ಬಳಿ ಕಾವೇರಿ ನದಿಗೆ ಅಡ್ಡಲಾಗಿ ತೂಗುಸೇತುವೆ ನಿರ್ಮಾಣ, ಕೊಡವ ಹೆರಿಟೇಜ್ ಸೆಂಟರ್ ಕಾಮಗಾರಿ, ಮಲ್ಲಳ್ಳಿ ಜಲಪಾತ ಬಳಿ ಮೆಟ್ಟಿಲುಗಳ ನಿರ್ಮಾಣ, ಕುಶಾಲನಗರದ ತಾವರೆಕೆರೆ ಹತ್ತಿರ ಪ್ರವಾಸಿ ಮೂಲ ಸೌಕರ್ಯ ಅಭಿವೃದ್ಧಿ, ಓಂಕಾರೇಶ್ವರ ದೇವಸ್ಥಾನದ ಬಳಿ ಬಟ್ಟೆ ಬದಲಿಸುವ ಕೊಠಡಿ ನಿರ್ಮಾಣ, ಇರ್ಪು ಜಲಪಾತದಲ್ಲಿ ಪ್ರವಾಸಿ ಸೌಲಭ್ಯ ಮತ್ತು ಉದ್ಯಾನವನ ನಿರ್ಮಾಣ, ರಾಜಾಸೀಟುಗೆ ತೆರಳುವ ರಸ್ತೆಯಲ್ಲಿ ಬ್ಯಾರಿಕೇಡ್, ಪಾಥ್ವೇ, ರೈಲಿಂಗ್ಸ್ ನಿರ್ಮಾಣ, ಮಾಂದಲ್ ಪಟ್ಟಿಗೆ ರೈಲಿಂಗ್ಸ್, ಮೆಟ್ಟಿಲುಗಳ ನಿರ್ಮಾಣ, ಪಾರ್ಕಿಂಗ್ ಸೌಲಭ್ಯ, ಶೌಚಾಲಯ, ಕುಡಿಯುವ ನೀರು ಸೌಲಭ್ಯ, ಅಬ್ಬಿ ಜಲಪಾತಕ್ಕೆ ಸಿಸಿ ರಸ್ತೆ ಮತ್ತಿತರ ಕಾಮಗಾರಿಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ನೀಡಿದ ಭರವಸೆ ಈಡೇರಿದ್ದೇ ಆದರೆ ಕೊಡಗಿನ ಜನರು ಚೇತರಿಸಿಕೊಳ್ಳಬಹುದು. ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ