ಅರ್ಚಕ ಪುತ್ರಿಯರಿಗೆ ಚೆಕ್ ನೀಡಿದರೆ ಹೋರಾಟ ಅನಿವಾರ್ಯ: ರವಿ ಚಂಗಪ್ಪ
ಮಡಿಕೇರಿ, ಆಗಸ್ಟ್ 28: ಆಗಸ್ಟ್ ಮೊದಲ ವಾರದಲ್ಲಿ ತಲಕಾವೇರಿ ಕ್ಷೇತ್ರದಲ್ಲಿ ಭೂ ಸಮಾಧಿಯಾದ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್. ನಾರಾಯಣಾಚಾರ್ ಕುಟುಂಬಸ್ಥರಿಗೆ ಸರ್ಕಾರ ನೀಡಿರುವ ಪರಿಹಾರ ಮೊತ್ತದ ಚೆಕ್ ನ ವಿವಾದ ಸದ್ಯಕ್ಕೆ ಬಗೆ ಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಚೆಕ್ ಮೂಲಕ ನೀಡಿರುವ ಪರಿಹಾರ ಮೊತ್ತವನ್ನು ನಾರಾಯಣಾಚಾರ್ ಅವರ ಇಬ್ಬರು ಪುತ್ರಿಯರು ಪಡೆಯಲು ಅವರಿಗೆ ಯಾವುದೇ ಅರ್ಹತೆಯಿಲ್ಲ ಎಂದು ಕಾವೇರಿ ಸೇನೆ ಸಂಚಾಲಕ ರವಿ ಚಂಗಪ್ಪ ಹೇಳಿದ್ದಾರೆ.
Recommended Video
ಈ ಕುರಿತು ಹೇಳಿಕೆ ಮಾತನಾಡಿರುವ ಅವರು, "ಅರ್ಚಕ ನಾರಾಯಣಾಚಾರ್ ಪುತ್ರಿಯರು ಪರಿಹಾರ ಮೊತ್ತ ಪಡೆಯುವ ಉದ್ದೇಶದಿಂದಲೇ ಮತಾಂತರಗೊಂಡ ನಂತರ ನಿಯಮಾನುಸಾರ ಬದಲಾಯಿಸಿಕೊಂಡ ತಮ್ಮ ಹೆಸರನ್ನು ಮರೆಮಾಚಿ ಬ್ರಾಹ್ಮಣ ಸಂಪ್ರದಾಯದಂತೆ ನಾಮಕರಣ ಮಾಡಿದ ಶಾರದ ಆಚಾರ್ ಮತ್ತು ನಮಿತಾ ಆಚಾರ್ ಹೆಸರಿನಲ್ಲಿ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ತಮ್ಮ ತಂದೆ ಗಜಗಿರಿ ಬೆಟ್ಟ ಕುಸಿತದಲ್ಲಿ ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ" ಎಂದು ಆರೋಪಿಸಿದರು.
ಕಾವೇರಿ ಸೇನೆ ಸಂಚಾಲಕ ರವಿ ಚಂಗಪ್ಪ ಆರೋಪ
"ನಾರಾಯಣಾಚಾರ್ ಪುತ್ರಿಯರು ತಮ್ಮ ಮಾತೃ ಧರ್ಮವನ್ನು ತಿರಸ್ಕರಿಸಿ ಅನ್ಯ ಧರ್ಮೀಯರನ್ನು ವಿವಾಹವಾಗಿ ತಮ್ಮ ಶಾಲಾ ದಾಖಲೆಯಲ್ಲಿದ್ದ ಮೂಲ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಓರ್ವ ಪುತ್ರಿ ಇಸ್ಲಾಂ ಧರ್ಮೀಯನನ್ನು ಪ್ರೀತಿಸಿ ವಿವಾಹವಾಗಿ ನಮಿತಾ ನಜರತ್ ಎಂದು ಹಾಗೂ ಮತ್ತೋರ್ವ ಪುತ್ರಿ ಕ್ರೈಸ್ತ ಧರ್ಮೀಯನನ್ನು ಪ್ರೀತಿಸಿ ಶೆನೋನ್ ಫರ್ನಾಂಡೀಸ್ ಎಂದು ಹೆಸರು ಬದಲಾಯಿಸಿಕೊಂಡಿರುವುದನ್ನು ಜಿಲ್ಲಾಡಳಿತ ಹಾಗೂ ಮಡಿಕೇರಿ ತಹಶೀಲ್ದಾರ್ ದೃಢಪಡಿಸಿದ್ದಾರೆ"ಎಂದು ಹೇಳಿದರು.
ತಲಕಾವೇರಿ ಭೂಕುಸಿತ ಪ್ರಕರಣ; ಪರಿಹಾರ ಪಡೆಯಲು ಮತಾಂತರ ಅಡ್ಡಿ
ಜಿಲ್ಲೆಯ ಪ್ರಜ್ಞಾವಂತ ಜನತೆಯನ್ನು ಸಂಘಟಿಸಿ ಹೋರಾಟ
ಅಲ್ಲದೇ ಈರ್ವರು ಪುತ್ರಿಯರು ಈಗ ಭಾರತೀಯ ಪೌರತ್ವವನ್ನೇ ಹೊಂದಿಲ್ಲ. ತಮ್ಮ ಮಕ್ಕಳಿಗೂ ಅನ್ಯ ಧರ್ಮದ ಹೆಸರನ್ನು ನಾಮಕರಣ ಮಾಡಿ ವಿದೇಶಿ ಪೌರತ್ವ ಒದಗಿಸಿದ್ದಾರೆ ಎಂದು ರವಿ ಚಂಗಪ್ಪ ಆರೋಪಿಸಿದ್ದಾರೆ.
ಕಾನೂನಿನ ಪ್ರಕಾರ ಎಫ್ಐಆರ್ ನಲ್ಲಿ ಯಾವ ಹೆಸರು ದಾಖಲಿಸಿದ್ದಾರೋ ಆ ಹೆಸರಿಗೆ ಪರಿಹಾರ ಚೆಕ್ ನೀಡಬೇಕು. ಇದೀಗ ಚೆಕ್ ನಲ್ಲಿ ನಮೂದಾಗಿರುವ ಹೆಸರನ್ನು ಬದಲಾಯಿಸುವ ಹುನ್ನಾರ ನಡೆಸುತ್ತಿರುವ ಮಾಹಿತಿ ಬಂದಿದ್ದು, ಲೋಪಗಳನ್ನು ಅಥವಾ ತಿದ್ದುಪಡಿಯನ್ನು ಮತ್ತೆ ಎಸಗಿದರೆ ಕಾವೇರಿ ಸೇನೆ ಹಾಗೂ ಜಿಲ್ಲೆಯ ಪ್ರಜ್ಞಾವಂತ ಜನತೆಯನ್ನು ಸಂಘಟಿಸಿ ಹೋರಾಟ ಹಮ್ಮಿಕೊಳ್ಳಲಾಗುವುದು ಮತ್ತು ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪುತ್ರಿಯರಿಗೆ ಪರಿಹಾರ ಲಭಿಸಲು ಸಾಧ್ಯವಿಲ್ಲ
ನಾರಾಯಣಾಚಾರ್ ಪುತ್ರಿಯರಿಗೆ ನಿಯಮ ಉಲ್ಲಂಘಿಸಿ ಚೆಕ್ ತಿರುಚಿ ಬರೆಯಲು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಾನೂನಾತ್ಮಕವಾಗಿ ಈರ್ವರು ಪುತ್ರಿಯರಿಗೆ ಪರಿಹಾರ ಲಭಿಸಲು ಸಾಧ್ಯವಿಲ್ಲ ಎಂದಾದ ಮೇಲೆ ಜಿಲ್ಲಾಧಿಕಾರಿ ಏಕೆ ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ ಎಂದು ರವಿ ಚಂಗಪ್ಪ ಪ್ರಶ್ನಿಸಿದ್ದಾರೆ.
ಕೊಡಗು: ಆನಂದತೀರ್ಥ ಪರಿಹಾರ ಚೆಕ್ ಯಾರಿಗೆ ಕೊಡಬೇಕು ಗೊಂದಲ, ನಾರಾಯಣಾಚಾರ್ ಪುತ್ರಿಯರಿಂದ ಆಕ್ಷೇಪ
ಕೊಡಗು ಜಿಲ್ಲೆಯಲ್ಲಿ ಹಿಂದೂ ಧರ್ಮ, ಹಿಂದೂ ಧಾರ್ಮಿಕ ವಿಧಿ ವಿಧಾನಗಳನ್ನು ಪಾಲಿಸುತ್ತಿರುವ, ಹಿಂದೂ ಸಂಸ್ಕೃತಿ, ಸಂಸ್ಕಾರವನ್ನು ಪೋಷಿಸುತ್ತಿರುವ ಪ್ರಜ್ಞಾವಂತ ಬ್ರಾಹ್ಮಣ ಸಮುದಾಯದ ಪ್ರಮುಖರು ಬ್ರಾಹ್ಮಣತ್ವವನ್ನು ಉಲ್ಲಂಘಿಸಿ ಅನ್ಯ ಧರ್ಮದತ್ತ ಸೆಳೆತ ಹೊಂದಿರುವವರು ಕ್ಷೇತ್ರ ಮತ್ತು ಬ್ರಾಹ್ಮಣತ್ವದ ಹೆಸರಿನಲ್ಲಿ ಪರಿಹಾರಕ್ಕೆ ಕೈಯೊಡ್ಡುತ್ತಿರುವುದನ್ನು ಖಂಡಿಸಬೇಕು ಎಂದು ಆಗ್ರಹಿಸಿದರು.
ಅರ್ಚಕರ ಪುತ್ರಿಯರು ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು
ನಾರಾಯಣಾಚಾರ್ ಒಡೆತನದ ಕಾಫಿ ತೋಟ ಕೂಡ ಸರ್ಕಾರಿ ಮತ್ತು ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿರುವ ವ್ಯಾಜ್ಯದಲ್ಲಿದೆ. ಈ ಹಿಂದೆ ಸರ್ಕಾರ ನಾರಾಯಣಾಚಾರ್ ಅತಿಕ್ರಮಿಸಿಕೊಂಡಿರುವ ಸರ್ಕಾರಿ ಮತ್ತು ಅರಣ್ಯ ಭೂಮಿಯನ್ನು ಸುಪರ್ದಿಗೆ ಪಡೆಯಲು ಜಿಲ್ಲಾಡಳಿತಕ್ಕೆ ಸ್ಪಷ್ಟ ಆದೇಶ ಹೊರಡಿಸಿತ್ತು.
ಜಿಲ್ಲಾಡಳಿತದ ಜವಾಬ್ದಾರಿ ವಂಚಿತ ನಡೆ ಮತ್ತು ಕೆಲ ಜನಪ್ರತಿನಿಧಿಗಳ ಚಿತಾವಣೆಯಿಂದ ಜಾಗ ಅತಿಕ್ರಮಣ ವ್ಯಾಜ್ಯವನ್ನು ಸಮಾಧಿ ಮಾಡಲಾಗಿದೆ ಎಂದು ಆರೋಪಿಸಿದರು. ಈರ್ವರು ಪುತ್ರಿಯರೂ ಈ ಬಗ್ಗೆ ಆತ್ಮವಿಮರ್ಶೆ ಮಾಡಿಕೊಂಡು, ನ್ಯಾಯ ಮಾರ್ಗದಲ್ಲಿ ನಡೆಯಬೇಕು ಎಂದು ರವಿ ಚಂಗಪ್ಪ ಪುತ್ರಿಯರಿಗೆ ಕಿವಿಮಾತು ಹೇಳಿದ್ದಾರೆ.