ಕಾವೇರಿ ಮಾತೆ ಪ್ರತಿಮೆ ತೆರವು ಪ್ರಯತ್ನಕ್ಕೆ ಕೊಡಗಿನಾದ್ಯಂತ ವ್ಯಾಪಕ ವಿರೋಧ
ಮಡಿಕೇರಿ, ಫೆಬ್ರವರಿ 3: ಮೈಸೂರು-ಕೊಡಗು ಜಿಲ್ಲೆಯ ಗಡಿ ಭಾಗವಾದ ಕುಶಾಲನಗರದ ಕಾವೇರಿ ನದಿ ಪಕ್ಕದಲ್ಲಿ ಸ್ಥಾಪಿತವಾಗಿರುವ ಕಾವೇರಿ ಮಾತೆಯ ಪ್ರತಿಮೆಯನ್ನು ತೆರವುಗೊಳಿಸಬೇಕಂದು ವಕೀಲರೊಬ್ಬರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿರುವುದಕ್ಕೆ ಜಿಲ್ಲಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಪ್ರತಿಮೆ ತೆರವುಗೊಳಿಸಲು ಮುಂದಾದಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ಸಂಘ-ಸಂಸ್ಥೆಗಳು ನೀಡಿವೆ.
ಕುಶಾಲನಗರದ ಬಾರವಿ ರವಿಚಂದ್ರನ್ ಕನ್ನಡ ಸಂಘದ ನೇತೃತ್ವದಲ್ಲಿ ಕಾವೇರಿ ನದಿ ಪಕ್ಕದಲ್ಲೆ 2013 ರಂದು 16 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕೊಡಗಿನ ಕುಲದೈವ ಕಾವೇರಿ ಮಾತೆಯ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು.
ರಾಷ್ಟ್ರಪತಿ ಭೇಟಿ; ಮಡಿಕೇರಿಯ ಹಲವು ಅಂಗಡಿ ಬಂದ್!
ಜಿಲ್ಲೆಯ ಜನ ಪ್ರತಿನಿಧಿಗಳು ಉನ್ನತ ಹುದ್ದೆ ಪಡೆದುಕೊಂಡಾಗ ಅವರನ್ನು ಸ್ವಾಗತಿಸಲು ಈ ಪ್ರತಿಮೆ ಸಮೀಪ ಜನರು ಸೇರುತ್ತಾರೆ. ಸ್ಥಾನ ಪಡೆದುಕೊಂಡವರು ಜಿಲ್ಲೆಗೆ ಪ್ರವೇಶಿಸುವುದಕ್ಕೂ ಮುನ್ನ ಕಾವೇರಿ ಪ್ರತಿಮೆಗೆ ಮಾಲಾರ್ಪಣೆ ಮಾಡುವುದು ವಾಡಿಕೆಯಾಗಿದೆ.
ಆದರೆ ಈ ಪ್ರತಿಮೆಯನ್ನು ತೆರವುಗೊಳಿಸಬೇಕೆಂದು ಕೋರಿ ಸೋಮವಾರಪೇಟೆ ಮೂಲದ ಬೆಂಗಳೂರಿನಲ್ಲಿ ನೆಲೆಸಿರುವ ವಕೀಲ ಎನ್.ಪಿ ಅಮೃತೇಶ್ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ. ಹೈಕೋರ್ಟ್ ಇತ್ತೀಚೆಗೆ ಸರ್ಕಾರಿ ಸ್ಥಳಗಳಲ್ಲಿರುವ ಧಾರ್ಮಿಕ ಸ್ಥಳಗಳನ್ನು ತೆರವುಗೊಳಿಸುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಇದನ್ನೂ ತೆರವುಗೊಳಿಸುವಂತೆ ಅರ್ಜಿದಾರರು ಕೋರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪಿರಿಯಾಪಟ್ಟಣ ತಹಸೀಲ್ದಾರ್ ಜಿ.ಎನ್ ಶ್ವೇತ ಅವರು, ಸರ್ಕಾರದಿಂದ ಈ ಬಗ್ಗೆ ವರದಿ ಸಲ್ಲಿಸಲು ಆದೇಶ ಬಂದಿದ್ದು, ಇದು ಧಾರ್ಮಿಕ ಸ್ಥಳವಲ್ಲ ಮತ್ತು ಇಲ್ಲಿ ಯಾವುದೇ ರೀತಿಯ ಪೂಜೆ ಪುರಸ್ಕಾರ ನಡೆಯುತ್ತಿಲ್ಲ ಎಂದರಲ್ಲದೆ ಇದನ್ನು ಕೋರ್ಟ್ ಗಮನಕ್ಕೆ ತರಲಾಗುವುದು ಎಂದರು.
ಈ ಕುರಿತು ಒನ್ ಇಂಡಿಯಾ ಕನ್ನಡ ಜತೆ ಮಾತನಾಡಿದ ಕೊಡವ ಸಮಾಜ ಒಕ್ಕೂಟದ ಯುವ ಘಟಕದ ಅದ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಅವರು, ಕಾವೇರಿ ಮಾತೆಯು ಕೊಡಗಿನ ಕುಲದೈವ ಆಗಿದ್ದು, ಇದು ಧಾರ್ಮಿಕ ಸ್ಥಳವಲ್ಲ. ಈ ಪ್ರತಿಮೆಗೆ ಎಲ್ಲರೂ ಜಾತಿ ಧರ್ಮದ ಬೇಧವಿಲ್ಲದೆ ನಮಿಸುತ್ತಾರೆ ಎಂದರು.
ರಾಜ್ಯಕ್ಕೆ ಕಾವೇರಿ ಮಾತೆ, ದೇಶಕ್ಕೆ ಭಾರತ ಮಾತೆ ಹೇಗೋ ಹಾಗೆ ಕೊಡಗಿನವರೆಲ್ಲರಿಗೂ ಕಾವೇರಿ ಮಾತೆ ಎಂದರು. ಅಲ್ಲದೆ ಪ್ರತಿಮೆಯು ಸೇತುವೆಯ ಪಕ್ಕ ಇರುವುದರಿಂದ ವಾಹನ ಸಂಚಾರಕ್ಕೆ ಯಾವುದೇ ಅಡಚಣೆ ಆಗುತ್ತಿಲ್ಲ, ಇದನ್ನು ತೆರವುಗೊಳಿಸುವ ಪ್ರಯತ್ನಕ್ಕೆ ಜನತೆಯ ತೀವ್ರ ವಿರೋಧ ಇದೆ ಎಂದು ಹೇಳಿದರು.
ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅವರು ಮಾತನಾಡಿ, ಈ ಹಿಂದೆ ಪ್ರತಿಮೆ ನಿರ್ಮಾಣ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆದೇ ನಿರ್ಮಾಣ ಮಾಡಲಾಗಿದೆ. ಈಗ ಇದನ್ನು ತೆರವುಗೊಳಿಸುವ ಪ್ರಯತ್ನ ಜನರ ಭಾವನೆಗೆ ಧಕ್ಕೆ ಆಗಲಿದೆ ಎಂದರಲ್ಲದೆ ಈ ಪ್ರಯತ್ನದ ವಿರುದ್ಧ ಸಂಘಟಿತ ಹೋರಾಟ ನಡೆಸುವುದಾಗಿ ತಿಳಿಸಿದರು.