ಕೊಡಗಿನಲ್ಲಿ ಹೆಚ್ಚುತ್ತಿದೆ ಕೊರೊನಾ; ಆದರೂ ಲಾಕ್ಡೌನ್ ಯಾಕಿಲ್ಲ?
ಮಡಿಕೇರಿ, ಜುಲೈ 18: ಕೊಡಗಿನಲ್ಲಿ ಮಳೆಯ ಆರ್ಭಟ ಹೆಚ್ಚುತ್ತಿದ್ದಂತೆಯೇ ಇತ್ತ ಕೊರೊನಾ ಸೋಂಕಿತ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಹೀಗಿದ್ದರೂ ಲಾಕ್ ಡೌನ್ ಏಕೆ ಮಾಡುತ್ತಿಲ್ಲ ಎಂಬ ಸಾರ್ವಜನಿಕರ ಪ್ರಶ್ನೆಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಲಾಕ್ಡೌನ್ ಶಾಶ್ವತ ಪರಿಹಾರವಲ್ಲ ಎಂದು ಹೇಳಿದ್ದಾರೆ.
Recommended Video
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೊದಲ ಬಾರಿಗೆ ಜಿಲ್ಲಾಡಳಿತದಿಂದ ನಡೆದ ಫೇಸ್ಬುಕ್ ಲೈವ್ನಲ್ಲಿ ಮಾತನಾಡಿದ ಅವರು, "ಕೊರೊನಾ ವೈರಸ್ ವಿರುದ್ಧದ ಹೋರಾಟ ಮ್ಯಾರಥಾನ್ ಇದ್ದಂತೆ. ಸ್ಪಲ್ಪ ಓಡಿದ ಕೂಡಲೇ ನಾವೇ ಗೆದ್ದೆವು ಎಂದು ಹೇಳಿಕೊಳ್ಳುವಂತಿಲ್ಲ. ಹೀಗಿರುವಾಗ ವ್ಯಾಪಾರ ವಹಿವಾಟನ್ನೂ ಹೆಚ್ಚು ದಿನ ಬಂದ್ ಮಾಡಲು ಸಾಧ್ಯವಿಲ್ಲ. ಸಾಕಷ್ಟು ಮಂದಿಗೆ ಸೋಂಕಿನ ಲಕ್ಷಣವಿರುವುದೇ ಇಲ್ಲ. ಕೋವಿಡ್ ನಿಂದಾಗಿ ಬಹುತೇಕರಿಗೆ ಆರೋಗ್ಯ ಸಂಬಂಧಿತ ಸಮಸ್ಯೆಯೇ ಉಂಟಾಗಿಲ್ಲ. ಆದರೆ, ಸೋಂಕಿತರನ್ನು ಗ್ರಾಮಸ್ಥರು ಸಂಶಯದಿಂದ ನೋಡುವಂತಾಗಿದೆ. ಇದರಿಂದಾಗಿ ಸೋಂಕಿತರು ಮುಜುಗರಕ್ಕೀಡಾಗುತ್ತಿದ್ದಾರೆ. ಆದ್ದರಿಂದ ನಾವು ಕೊರೊನಾ ವಿರುದ್ಧ ಹೋರಾಡಬೇಕು. ಕೊರೊನಾ ಸೋಂಕಿತ ವ್ಯಕ್ತಿಯೊಂದಿಗೆ ಅಲ್ಲ ಎಂದು ಹೇಳಿದರು.
ಕೊಡಗಿನಲ್ಲಿ ಸದ್ಯ ಕೊರೊನಾ ಪ್ರಕರಣಗಳು ಎಷ್ಟಿವೆ? ಕಂಟೈನ್ಮೆಂಟ್ ವಲಯಗಳೆಷ್ಟು?
ಕೊಡಗು ಇತರೆ ಜಿಲ್ಲೆಗಿಂತ ಭಿನ್ನ
ಕೊಡಗು ಜಿಲ್ಲೆಗೂ ಇತರೆ ಜಿಲ್ಲೆಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಖಾಸಗಿ ಆಸ್ಪತ್ರೆಗಿಂತಲೂ ಸರ್ಕಾರಿ ವೈದ್ಯಕೀಯ ಕೇಂದ್ರಗಳನ್ನೇ ಜಿಲ್ಲೆಯ ಜನ ಹೆಚ್ಚಾಗಿ ಅವಲಂಬಿಸಿದ್ದಾರೆ. ಜಿಲ್ಲೆಯಲ್ಲಿ 250 ಹಾಸಿಗೆ ಸಾಮರ್ಥ್ಯದ 1 ಕೋವಿಡ್ ಜಿಲ್ಲಾಸ್ಪತ್ರೆ ಇದೆ. ಇದರಲ್ಲಿ 31 ಐಸಿಯು ಬೆಡ್ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ 25 ವೆಂಟಿಲೇಟರ್ಗಳನ್ನು ಸಹ ಸಿದ್ಧಪಡಿಸಲಾಗಿದೆ. ಜಿಲ್ಲೆಯ ಮಡಿಕೇರಿ, ವಿರಾಜಪೇಟೆ ಮತ್ತು ಕುಶಾಲನಗರದಲ್ಲಿ ವ್ಯವಸ್ಥಿತವಾಗಿ ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆಯಲಾಗಿದೆ. ಒಟ್ಟಾರೆ ಕೋವಿಡ್-19 ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ 2 ಸಾವಿರ ಹಾಸಿಗೆ ಸಿದ್ಧಪಡಿಸಲಾಗಿದೆ.
ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತಮ ವ್ಯವಸ್ಥೆ
ಕೋವಿಡ್ 19ರ ನಿಯಮಾವಳಿಯಂತೆ ಹೊರ ದೇಶಗಳಿಂದ ಬರುವವರು 7 ದಿನ ಸಾಂಸ್ಥಿಕ ಸಂಪರ್ಕ ತಡೆ ಮತ್ತು 7 ದಿನ ಕಡ್ಡಾಯ ಗೃಹ ಸಂಪರ್ಕ ತಡೆಯಲ್ಲಿರಬೇಕು. ಹೊರ ರಾಜ್ಯಗಳಿಂದ ಆಗಮಿಸುವವರು 14 ದಿನಗಳ ಕಡ್ಡಾಯ ಗೃಹ ಸಂಪರ್ಕ ತಡೆಯಲ್ಲಿರಬೇಕು. ಹೊರ ಜಿಲ್ಲೆಗಳಿಂದ ಆಗಮಿಸುವವರೂ ಸಹ 7 ದಿನಗಳ ಗೃಹ ಸಂಪರ್ಕ ತಡೆಯಲ್ಲಿರಬೇಕು. ಜಿಲ್ಲೆಯಲ್ಲಿ ಸೌಲಭ್ಯಗಳಿಲ್ಲ ಎಂಬ ವದಂತಿಗಳು ಹರಡುತ್ತಿದ್ದು ಇದು ಸುಳ್ಳಾಗಿದೆ. ಆಸ್ಪತ್ರೆಯಲ್ಲಿ ಎಲ್ಲ್ಲ ಸೌಕರ್ಯಗಳೂ ಸುಸಜ್ಜಿತವಾಗಿವೆ. ಜಿಲ್ಲೆಯ ವೈದ್ಯರು ಸೋಂಕಿತ ಗರ್ಭಿಣಿ ಮಹಿಳೆಗೆ ಹೆರಿಗೆ ಮಾಡಿಸಿ ಮಗುವಿನ ಸುರಕ್ಷತೆಗೆ ಕ್ರಮ ಕೈಗೊಂಡಿದ್ದಾರೆ. ಹೀಗಿರುವಾಗ ಸೌಲಭ್ಯಗಳಿಲ್ಲ ಎಂದು ಹೇಳುವುದು ಸರಿಯಲ್ಲ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮಲ್ಲಿ ಅತ್ಯುತ್ತಮ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಸೇವೆಗೆ ವೈದ್ಯರೇ ಬರುತ್ತಿಲ್ಲ
ಕೊಡಗಿಗೆ ಸರ್ಕಾರ ಎಲ್ಲಾ ರೀತಿಯ ಮೂಲಸೌಲಭ್ಯಗಳನ್ನು ನೀಡಿದೆ. ಆದರೆ, ಕೊಡಗು ಜಿಲ್ಲೆಯಲ್ಲಿ ವೈದ್ಯರ ಕೊರತೆಯಿದೆ. ವಾಕ್ ಇನ್ ನೇರ ಸಂದರ್ಶನಕ್ಕೆ ಕೂಡ ಮೆಡಿಕಲ್ ಕಾಲೇಜಿನಲ್ಲಿ ಕರೆ ನೀಡಿದ್ದೇವೆ. ಹೀಗಿದ್ದರೂ ವೈದ್ಯರು ನೇಮಕಾತಿಗೆ ಬರುತ್ತಿಲ್ಲ. ತಿಂಗಳಿಗೆ 60 ಸಾವಿರ ಸಂಬಳ ನೀಡಿದರೂ ವೈದ್ಯರೂ ಬರುತ್ತಿಲ್ಲ. ಕೊಡಗಿನ ಮೂಲದ ವೈದ್ಯರು ಬೇರೆ ಬೇರೆ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ತವರಿಗೆ ಆಗಮಿಸಿ ಕಾರ್ಯ ನಿರ್ವಹಿಸಬೇಕು. ತವರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲು ಇದೊಂದು ಉತ್ತಮ ಅವಕಾಶ ಎಂದು ಮನವಿ ಮಾಡಿದರು.
ಅಧಿಕಾರಿ, ಸಿಬ್ಬಂದಿಯಿಂದ ವಿರಾಮವಿಲ್ಲದೆ ಕರ್ತವ್ಯ
ಕಳೆದ ಫೆಬ್ರವರಿಯಿಂದಲೇ ಜಿಲ್ಲೆಯ ಅಧಿಕಾರಿಗಳು ವಿರಾಮವಿಲ್ಲದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ರೀತಿ ಸುಳ್ಳು ಮಾಹಿತಿ ಹರಡುವ ಮೂಲಕ ಅಧಿಕಾರಿ, ಸಿಬ್ಬಂದಿಗಳ ಮಾನಸಿಕ ಸ್ಥೈರ್ಯ ಕುಸಿಯುವಂತೆ ಮಾಡಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ ಅವರು, ಯಾವುದೇ ಸಮಸ್ಯೆಯಿದ್ದರೂ ಜಿಲ್ಲಾಧಿಕಾರಿ ಅವರ ಕಚೇರಿಯ ಕಂಟ್ರೋಲ್ ರೂಮ್ ಸಂಖ್ಯೆ 1077ಗೆ ವಿಚಾರ ತಿಳಿಸಿ. ಈ ಕಂಟ್ರೋಲ್ ರೂಂ ವಾರದ 7 ದಿನ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ. ಸಮಸ್ಯೆಯ ಪ್ರಕರಣವಿದ್ದಲ್ಲಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸುವುದಕ್ಕಿಂತ ಮುಂಚೆ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ಇದೇ ವೇಳೆ ತಿಳಿಸಿದರು.