ಟಿಪ್ಪು ಹೆಸರೆತ್ತಿದರೆ ಕೊಡಗು ಕೆಂಡವಾಗುವುದೇಕೆ?
ಮಡಿಕೇರಿ, ನವೆಂಬರ್ 9: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ 2015ರಲ್ಲಿ ಜಾರಿಗೆ ತಂದ ಮೈಸೂರಿನ ಅರಸ ಟಿಪ್ಪು ಸುಲ್ತಾನನ ಜಯಂತಿ ರಾಜ್ಯದ ಎಲ್ಲೆಡೆ ಶಾಂತಿಯಿಂದಲೇ ಆಚರಿಸಲ್ಪಟ್ಟರೂ ಕೊಡಗಿನಲ್ಲಿ ಮಾತ್ರ ಸಾಮಾನ್ಯ ಎಂಬಂತೆ ನಡೆಯುವುದಿಲ್ಲ. ಇದೇ ಕಾರಣವಾಗಿ ಎರಡು ಅಮೂಲ್ಯ ಜೀವಗಳು ಬಲಿಯಾಗಿ ಇಂದಿಗೆ ನಾಲ್ಕು ವರ್ಷ ಸರಿದಿವೆ. ಟಿಪ್ಪು ಜಯಂತಿ ಆಚರಿಸುವ ಸಲುವಾಗಿ ಪರ ವಿರೋಧಗಳ ಚರ್ಚೆಗಳ ನಡುವೆ, ಕೊಡಗಿನಲ್ಲಿ ಜಯಂತಿ ನೆಪದಲ್ಲಿ ನಡೆದಿರುವ ಅಹಿತಕರ ಘಟನೆಗಳು ಇನ್ನೂ ಜನಮಾನಸದಿಂದ ಮಾಸಿಲ್ಲ.
ಇಂದಿಗೂ ದುಃಖ ಮರೆ ಮಾಚಿಲ್ಲ
ವಿಶ್ವ ಹಿಂದೂ ಪರಿಷತ್ನ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಕುಟ್ಟಪ್ಪ ಹಾಗೂ ಸಿದ್ದಾಪುರದ ಸಾಹುಲ್ ಹಮೀದ್ ಕುಟುಂಬಗಳು ಇಂದಿಗೂ ದುಃಖತಪ್ತವಾಗೇ ಇವೆ. ಕುಟುಂಬ ಸದಸ್ಯರನ್ನು ಕಳೆದುಕೊಂಡ ಸಂಬಂಧಿಕರ ನೋವು ನವೆಂಬರ್ ತಿಂಗಳ ಎರಡನೇ ವಾರ ಬಂತೆಂದರೆ ಮತ್ತೆ ಮರುಕಳಿಸುತ್ತದೆ. ಜಿಲ್ಲೆಯಲ್ಲಿ ಟಿಪ್ಪು ಎಂದರೆ ಜನತೆ ಪಕ್ಷ ಬೇಧ ಮರೆತು ವಿರೋಧ ವ್ಯಕ್ತಪಡಿಸುತ್ತಾರೆ.
ಟಿಪ್ಪು ಜಯಂತಿ ಆಚರಣೆ ರದ್ದು: ಸರ್ಕಾರಕ್ಕೆ ಹೈಕೋರ್ಟ್ ಚಾಟಿ
ಮತಾಂತರ ಶಿಕ್ಷೆ ನೀಡಿದ ಆರೋಪ
ಕೊಡವರನ್ನು ಭಾಗಮಂಡಲ ಸಮೀಪದ ದೇವ್ಟ್ ಪರಂಬು ಎಂಬಲ್ಲಿಗೆ ಡಿಸೆಂಬರ್ 13, 1785ರಂದು ಸಂಧಾನಕ್ಕೆ ಟಿಪ್ಪು ಕರೆಸುತ್ತಾನೆ. ನಿರಾಯುಧರಾಗಿ ಬಂದ ಕೊಡವ ಪುರುಷರು, ಸ್ತ್ರೀಯರು ಮತ್ತು ಮಕ್ಕಳ ಮೇಲೆ ಅವಿತಿದ್ದ ಟಿಪ್ಪು ಮತ್ತು ಫ್ರೆಂಚ್ ಸೈನ್ಯ ದಾಳಿ ನಡೆಸಿ ಸಾವಿರಾರು ಜನರನ್ನು ಕೊಂದು ಸಾವಿರಾರು ಜನರನ್ನು ಶ್ರೀರಂಗ ಪಟ್ಟಣಕ್ಕೆ ಕರೆದೊಯ್ದು ಮತಾಂತರದ ಶಿಕ್ಷೆ ನೀಡಿದರು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್ ಯು ನಾಚಪ್ಪ ಆರೋಪಿಸುತ್ತಾರೆ.
ಭಾರಿ ಬಂದೋಬಸ್ತ್ ನಲ್ಲಿ ನಡೆಯುತ್ತಿದ್ದ ಜಯಂತಿ
ಅದೇನೇ ಇರಲಿ ಕಳೆದ ನಾಲ್ಕು ವರ್ಷಗಳಿಂದ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದ್ದ ಟಿಪ್ಪು ಜಯಂತಿಯನ್ನು ಈ ವರ್ಷದಿಂದ ರದ್ದುಗೊಳಿಸಿರುವುದು ಜಿಲ್ಲೆಯ ಮಟ್ಟಿಗೆ ಶಾಂತಿ ಕಾಪಾಡಲು ಸಹಕಾರಿಯಾಗಿರುವುದಂತೂ ಸುಳ್ಳಲ್ಲ. ಏಕೆಂದರೆ ಪ್ರತೀ ವರ್ಷವೂ ಜಯಂತಿ ಆಚರಣೆಗೆ ಭಾರೀ ಬಂದೋ ಬಸ್ತ್ ಏರ್ಪಡಿಸಬೇಕು.
ಇದೀಗ ಸರ್ಕಾರ ಮಟ್ಟದಲ್ಲಿ ಟಿಪ್ಪು ಜಯಂತಿ ರದ್ದುಗೊಂಡಿದ್ದು, ಖಾಸಗಿಯಾಗಿ ಆಚರಣೆ ಮಾಡುವುದಕ್ಕೆ ರಾಜ್ಯದ ವಿವಿಧೆಡೆ ಹಲವು ಸಂಘಟನೆಗಳು ಮುಂದಾಗಿವೆ. ಆದರೆ ಕೊಡಗಿನಲ್ಲಿ ಖಾಸಗಿಯಾಗಿ ಆಚರಣೆ ಮಾಡುವುದಕ್ಕೂ ಜಿಲ್ಲಾಡಳಿತ ನಿರ್ಬಂಧ ಹೇರಿರುವುದು ಚರ್ಚೆಗೆ ಗ್ರಾಸವಾಗಿದೆ.
ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ತೆಗೆದುಹಾಕಲು ಮುಂದಾದ ಬಿಜೆಪಿ ಸರ್ಕಾರ
ಖಾಸಗಿಯಾಗಿಯೂ ಜಯಂತಿ ಆಚರಣೆಗೆ ಅವಕಾಶವಿಲ್ಲ
ಟಿಪ್ಪು ಜನ್ಮದಿನ, ಈದ್ ಮಿಲಾದ್, ಅಯೋಧ್ಯೆ ತೀರ್ಪು ಎಲ್ಲವೂ ಒಟ್ಟಿಗೆ ಇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆಗೆ ಸವಾಲಾಗಿದೆ. ಹೀಗಾಗಿ ಕಟ್ಟುನಿಟ್ಟಿನ ಸೂಚನೆಯನ್ನು ವಿವಿಧ ಸಂಘಟನೆಗಳಿಗೆ ನೀಡಲಾಗಿದೆ. ಖಾಸಗಿಯಾಗಿಯೂ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಿಲ್ಲ. ಸರ್ಕಾರದ ಆದೇಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಪಾಲನೆಯಲ್ಲಿ ಉಲ್ಲಂಘನೆ ಕಂಡುಬಂದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅನ್ನೀಸ್ ಕಣ್ಮಣಿ ಜಾಯ್ ಎಚ್ಚರಿಸಿದ್ದಾರೆ.