ಜ.ತಿಮ್ಮಯ್ಯ ಬಗ್ಗೆ ಮ್ಯೂಸಿಯಂ ಡೈರಿಯಲ್ಲಿ ರಾಷ್ಟ್ರಪತಿ ಬರೆದಿದ್ದೇನು?
ಮಡಿಕೇರಿ, ಫೆಬ್ರವರಿ 6: ಕೊಡಗಿನ ವೀರಸೇನಾನಿ ಜನರಲ್ ಕೆ.ಎಸ್ ತಿಮ್ಮಯ್ಯ ಅವರ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈ ಕೆಳಗಿನಂತೆ ಬರೆದಿದ್ದಾರೆ.
ಪ್ರಕೃತಿಯ ಬೀಡು, ಸೈನಿಕರ ನಾಡೇ ಆಗಿರುವ ಕೊಡಗು ಜಿಲ್ಲೆಯ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ತಲೆ ಎತ್ತಿರುವ ವೀರ ಸೇನಾನಿ ಜ.ಕೆ.ಎಸ್. ತಿಮ್ಮಯ್ಯ ಅವರ ಮ್ಯೂಸಿಯಂ ಯುವ ಸಮೂಹಕ್ಕೆ ನಾಡಿನ ಸೈನಿಕ ಪರಂಪರೆಯನ್ನು ಮುನ್ನಡೆಸುವ ಪ್ರೇರಕ ಶಕ್ತಿಯಾಗಲಿದೆ.
ಜ.ತಿಮ್ಮಯ್ಯ ಮ್ಯೂಸಿಯಂ ಉದ್ಘಾಟಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್
ಜನರಲ್ ತಿಮ್ಮಯ್ಯ ಅವರು 1906 ಮಾರ್ಚ್ 31 ರಂದು ಸನ್ನಿಸೈಡ್ ಬಂಗಲೆಯನ್ನು ಯಥಾ ಸ್ಥಿತಿಯಲ್ಲಿ ನವೀಕರಣಗೊಳಿಸುವ ಮೂಲಕ ಅದನ್ನೆ ಮ್ಯೂಸಿಯಂ ಆಗಿ ಪರಿವರ್ತಿಸಿರುವುದು ವಿಶೇಷ. ಈ ಮನೆಯಲ್ಲೆ ತಿಮ್ಮಯ್ಯ ಅವರು ತಮ್ಮ ಬಾಲ್ಯದ ದಿನಗಳನ್ನು ಕಳೆದದ್ದು ಎನ್ನುವುದೇ, ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರಲ್ಲೂ ವಿಶೇಷ ಅನುಭೂತಿಯನ್ನು ನೀಡುತ್ತದೆ.
ಮ್ಯೂಸಿಯಂನ ಆವರಣದಲ್ಲಿ 1947 ರ ಬಳಿಕ ರಾಷ್ಟ್ರ ರಕ್ಷಣೆಗೆ ಬಲಿದಾನ ಗೈದ ಯೋಧರ ಸ್ಮರಣಾರ್ಥ ಸಜ್ಜುಗೊಳಿಸಿರುವ 'ಯುದ್ಧ ಸ್ಮಾರಕ' ಕಣ್ಮನ ಸೆಳೆಯುತ್ತದಾದರೆ, ರಷ್ಯಾ ನಿರ್ಮಿತ ಭಾರತೀಯ ಸೇನೆಯ ಹಲವಾರು ಯುದ್ಧಗಳಲ್ಲಿ ಬಳಸಲಾಗಿದ್ದ 'ಹಿಮ್ಮತ್' ಹೆಸರಿನ ಟಿ.50 ಯುದ್ಧ ಟ್ಯಾಂಕರ್, 'ಮಿಗ್-20' ಯುದ್ಧ ವಿಮಾನ ಗಮನ ಸೆಳೆಯುತ್ತದೆ.
ಮ್ಯೂಸಿಯಂನಲ್ಲಿ ಜನರಲ್ ತಿಮ್ಮಯ್ಯ ಅವರ ಬಾಲ್ಯ, ಸೇನಾ ಕ್ಷೇತ್ರದಲ್ಲಿನ ವಿವಿಧ ಛಾಯಾಚಿತ್ರಗಳು ಆಕರ್ಷಿಸುತ್ತವೆ. ಜನರಲ್ ತಿಮ್ಮಯ್ಯ ಅವರ ಬದುಕು, ಭಾರತೀಯ ಸೇನೆಯ ಇತಿಹಾಸವನ್ನು ವಸ್ತು ಸಂಗ್ರಹಾಲಯದಲ್ಲಿ ನೋಡಬಹುದಾಗಿದೆ.
ಭಾರತೀಯ ಸೇನಾಧಿಕಾರಿಯಾಗಿ ಜನರಲ್ ತಿಮ್ಮಯ್ಯ ಅವರು ನಡೆದು ಬಂದ ದಾರಿಯ ಇತಿಹಾಸ ಸಾರುವುದರ ಜೊತೆಗೆ ಭಾರತೀಯ ಸೇನಾ ಪರಂಪರೆಯ ಮಾಹಿತಿ ನೀಡುವ ಮಹತ್ವದ ಸಂದೇಶ ವಸ್ತುಸಂಗ್ರಹಾಲಯದಲ್ಲಿದೆ.
ವಸ್ತು ಸಂಗ್ರಹಾಲಯದಲ್ಲಿ ಯುದ್ಧದಲ್ಲಿ ಬಳಸಲಾಗುತ್ತಿದ್ದ ಬಂದೂಕುಗಳು ಗಮನ ಸೆಳೆಯುತ್ತವೆ. ತಿಮ್ಮಯ್ಯ ಅವರು ಸೇನಾಧಿಕಾರಿಯಾಗಿ ಸಲ್ಲಿಸಿದ ಸೇವೆಯ ಛಾಯಾಚಿತ್ರಗಳಿದ್ದು, ವಸ್ತು ಸಂಗ್ರಹಾಲಯದ ಪ್ರತೀ ಕೊಠಡಿಯು ಸೈನಿಕರ ಕಥೆ ಹೇಳುತ್ತದೆ ಎಂದು ರಾಷ್ಟ್ರಪತಿಗಳು ಡೈರಿಯಲ್ಲಿ ಬರೆದಿದ್ದಾರೆ.