ಭರ್ತಿಯಾಗದ ಹಾರಂಗಿ: ಚಿಂತಾಕ್ರಾಂತರಾದ ರೈತರು!
ಮಡಿಕೇರಿ, ಜುಲೈ 11: ಕೊಡಗಿನಲ್ಲಿ ಮಳೆ ಕ್ಷೀಣಿಸಿದೆ. ಕಳೆದ ಜನವರಿಯಿಂದ ಇಲ್ಲಿವರೆಗಿನ ಮಳೆಯ ಪ್ರಮಾಣವನ್ನು ಗಮನಿಸಿದರೆ ಪ್ರಸಕ್ತ ಸುರಿದ ಮಳೆ ಕಳೆವ ವರ್ಷಕ್ಕಿಂತ ಕಡಿಮೆ ಇರುವುದು ಗೋಚರಿಸಿದೆ. ಪರಿಣಾಮ ಮಡಿಕೇರಿ ಜಿಲ್ಲೆಯ ಹಾರಂಗಿ ಜಲಾಶಯದ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿಲ್ಲ.
ಕರ್ನಾಟಕದ ಜಲಾಶಯಗಳ ನೀರಿನಮಟ್ಟ ಮತ್ತು ಮಳೆ ವಿವರ
ಹಾರಂಗಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಇದರಿಂದ ಇದೇ ಜಲಾಶಯವನ್ನು ನಂಬಿ ಕೃಷಿ ಚಟುವಟಿಕೆ ಕೈಗೊಳ್ಳುತ್ತಿದ್ದ ರೈತರು ಚಿಂತಾಕ್ರಾಂತರಾಗಿದ್ದಾರೆ. ಇಷ್ಟರಲ್ಲೇ ಭತ್ತದ ಕೃಷಿಯನ್ನು ಕೈಗೊಳ್ಳಬೇಕಾಗಿತ್ತು. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಜಲಾಶಯ ಭರ್ತಿಯಾಗುತ್ತಾ? ಎಂಬ ಚಿಂತೆ ಕೃಷಿಕರನ್ನು ಕಾಡುತ್ತಿದೆ.
'ಮುಗಿಲುಪೇಟೆ'ಯಲ್ಲಿ ಕೊಂಡ ಆ ಮಂಜಿನ ಹನಿಗಳು..!
ಜಲಾಶಯಕ್ಕೆ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣ ಹೆಚ್ಚಾದರೆ ಮಾತ್ರ ಕೃಷಿಗಾಗಿ ನಾಲೆಗೆ ನೀರು ಬಿಡಲು ಸಾಧ್ಯ. ಇಲ್ಲದೆ ಹೋದರೆ ನೀರು ಸಿಗುವುದು ಕಷ್ಟವೇ. ಒಂದು ವೇಳೆ ತಡವಾಗಿ ಮಳೆ ಬಂದು ಜಲಾಶಯ ಭರ್ತಿಯಾಗಿ ಬಳಿಕ ನೀರು ಬಿಟ್ಟರೂ ಭತ್ತದ ಕೃಷಿ ಮಾಡುವ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ.
ಮಡಿಕೇರಿ: ದುಬಾರೆಯ ರಿವರ್ ರಾಫ್ಟಿಂಗ್ ಗೆ ಲಗಾಮು ಸರಿಯೇ?
ಕಳೆದ ವರ್ಷ ಇದೇ ವೇಳೆಯಲ್ಲಿ ಇಲ್ಲಿ ಉತ್ತಮ ಮಳೆಯಾಗಿತ್ತು ಹೀಗಾಗಿ ಜುಲೈ ಮೊದಲನೇ ವಾರದಲ್ಲಿ ಜಲಾಶಯದಿಂದ ಸಾಮರ್ಥ್ಯಕ್ಕನುಗುಣವಾಗಿ ನೀರನ್ನು ಸಂಗ್ರಹಿಸಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗಿತ್ತು. ಅದರಿಂದ ರೈತರು ಬೆಳೆ ಬೆಳೆಯಲು ಸಾಧ್ಯವಾಗಿತ್ತು. ಆದರೆ ಇವತ್ತಿನ ಪರಿಸ್ಥಿತಿ ತೀವ್ರ ಬಿಗಡಾಯಿಸಿದ್ದು, ರೈತರು ಬೆಳೆ ಬೆಳೆಯಲಾರದ ಹಂತಕ್ಕೆ ಬಂದು ತಲುಪಿದ್ದಾನೆ. ಇದರಿಂದ ಈಗಾಗಲೇ ರೈತರು ಕಂಗಾಲಾಗಿದ್ದಾರೆ.
ನಿರೀಕ್ಷೆ ಹುಟ್ಟಿಸಿ ಹೋದ ಮಳೆ
ಜೂನ್ ಆರಂಭದಲ್ಲಿ ಉತ್ತಮವಾಗಿ ಸುರಿದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದ ಮಳೆ, ಕ್ರಮೇಣ ಕಡಿಮೆಯಾಗುತ್ತ ಭವಿಷ್ಯದ ಕತೆಯೇನು ಎಂದು ರೈತರು ತಲೆಮೇಲೆ ಕೈಯಿಟ್ಟು ಕೂರುವಂಥ ಪರಿಸ್ಥಿತಿಯನ್ನು ತಂದಿಟ್ಟಿದೆ.
ಭರ್ತಿಯಾಗುವುದು ಯಾವಾಗ?
ಈಗ ಹಾರಂಗಿ ಜಲಾಶಯ ಅರ್ಧದಷ್ಟು ಮಾತ್ರ ಭರ್ತಿಯಾಗಿದೆ ಸದ್ಯ ಸುಮಾರು ಮೂರು ಟಿಎಂಸಿಯಷ್ಟು ಮಾತ್ರ ನೀರಿದೆ. ಈ ವೇಳೆಗೆ ಸುಮಾರು ನಾಲ್ಕೈದು ಸಾವಿರ ಕ್ಯೂಸೆಕ್ ನೀರು ಹರಿದು ಬರಬೇಕಿತ್ತು. ಆದರೆ ಈಗ ಹರಿದು ಬರುತ್ತಿರುವುದು ಕೇವಲ ಮೂನ್ನೂರೋ ನಾನೂರೋ ಕ್ಯೂಸೆಕ್ ಅಷ್ಟೆ. ಹೀಗಿರುವಾಗ ಜಲಾಶಯ ಭರ್ತಿಯಾಗುವುದು ಯಾವಾಗ ಎಂಬ ಚಿಂತೆ ಎಲ್ಲರನ್ನು ಕಾಡತೊಡಗಿದೆ.
ಮಡಿಕೇರಿಯಲ್ಲಿ ದುರ್ಬಲವಾಗುತ್ತಿದೆ ಮಳೆಗಾಲ
ಜೀವನ ನಡೆಸೋದು ಹೇಗೆ?
ಸರ್ಕಾರ ಕೂಡ ಜಲಾಶಯದ ನೀರನ್ನು ಯಾವುದೇ ಕಾರಣಕ್ಕೂ ನಾಲೆಗೆ ಹರಿಸಬಾರದೆಂದು ಆದೇಶಿಸಿದೆ. ಹೀಗಾಗಿ ರೈತರು ಆಕಾಶ ನೋಡುವಂತಾಗಿದೆ. ಕೃಷಿಯನ್ನು ನಂಬಿ ಬದುಕುತ್ತಿರುವ ರೈತರು ಬೆಳೆಬೆಳೆಯದಿದ್ದರೆ ಜೀವನ ಮಾಡುವುದಾದರೂ ಹೇಗೆ ಎಂದು ಆಲೋಚಿಸುವಂತಾಗಿದೆ.
ಜಲಾಶಯದಲ್ಲಿ ಎಷ್ಟಿದೆ ನೀರು?
2,859 ಅಡಿ ಸಾಮರ್ಥ್ಯದ ಜಲಾಶಯದಲ್ಲೀಗ ಕೇವಲ 2832 ಅಡಿಯಷ್ಟು ಮಾತ್ರ ನೀರಿದೆ. ಕಳೆದ ವರ್ಷ 2854.68 ಇದ್ದಿದ್ದನ್ನು ಗಮನಿಸಬಹುದಾಗಿದೆ. ಒಟ್ಟಾರೆ ಮಳೆ ಚೇತರಿಸಿಕೊಂಡು ಜಲಾಶಯ ಭರ್ತಿಯಾದರೆ ಮಾತ್ರ ಅಚ್ಚುಕಟ್ಟು ಪ್ರದೇಶದ ರೈತರು ನೆಮ್ಮದಿಯಿಂದ ಬದುಕಲು ಸಾಧ್ಯವಿದೆ. ಇಲ್ಲದೆ ಹೋದರೆ ಸಂಕಷ್ಟ ತಪ್ಪಿದಲ್ಲ.