ಕೊಡಗಿನ ರೆಸಾರ್ಟ್ ಗಳತ್ತ ಬರುವ ಪ್ರವಾಸಿಗರಿಗೆ ಎಚ್ಚರಿಕೆ!
ಮಡಿಕೇರಿ, ಜುಲೈ 2: ಕೊಡಗಿನ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಾಶಯ ವ್ಯಾಪ್ತಿಯ ಹೋಂ ಸ್ಟೇ ಗಳತ್ತ ಪ್ರವಾಸಿಗರು ಬಂದರೆ ಅವರನ್ನು ತಡೆದು ಹಿಂದಕ್ಕೆ ಕಳುಹಿಸುವ ಎಚ್ಚರಿಕೆಯನ್ನು ಸ್ಥಳೀಯ ಜನರು ನೀಡಿದ್ದಾರೆ.
Recommended Video
ಈ ನಡುವೆ ಕೊಡಗಿನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಹೋಂ ಸ್ಟೇ, ರೆಸಾರ್ಟ್, ಹೋಟೆಲ್ ಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಆದರೂ ಕೆಲವು ಹೋಂ ಸ್ಟೇ ಮತ್ತು ರೆಸಾರ್ಟ್ ಗಳಲ್ಲಿ ಪ್ರವಾಸಿಗರಿಗೆ ತಂಗಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಆಮೆಗತಿಯಲ್ಲಿ ಸಾಗುತ್ತಿದೆ ಮಡಿಕೇರಿ ಕೋಟೆಯ ದುರಸ್ತಿ ಕಾರ್ಯ
ಲಾಕ್ ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಕೊಡಗಿನಿಂದ ಹೊರಗೆ ಹೋಗಿ ಬದುಕು ಕಟ್ಟಿಕೊಂಡಿದ್ದ ಬಹಳಷ್ಟು ಮಂದಿ ತಮ್ಮ ಸ್ವಗ್ರಾಮಗಳಿಗೆ ಮರಳಿ ಬಂದಿದ್ದಾರೆ. ಕೆಲವರು ತಾವೇ ಸ್ವಪ್ರೇರಿತರಾಗಿ ಆಸ್ಪತ್ರೆಗಳಿಗೆ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇದರಿಂದ ಯಾವುದೇ ಅಪಾಯವಿಲ್ಲವಾದರೂ ಕೆಲವು ಮಾಲೀಕರು ಅನಧಿಕೃತವಾಗಿ ಹೋಂ ಸ್ಟೇಗಳನ್ನು ನಡೆಸುವುದರೊಂದಿಗೆ ಹಣದ ಆಸೆಗಾಗಿ ಹೊರಗಿನವರಿಗೆ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಸೋಂಕಿನ ಭಯವೂ ಜನರನ್ನು ಕಾಡತೊಡಗಿದೆ.
ಪ್ರವಾಸಿಗರಿಗೆ ಕೊಡಗಿನತ್ತ ಬರದಂತೆ ಎಚ್ಚರಿಕೆ
ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಂತಿರುವ ಸೋಮವಾರಪೇಟೆ ತಾಲೂಕಿನ ಗಡಿಯಂಚಿನ ಗ್ರಾಮಗಳಲ್ಲಿರುವ ಕೆಲವು ಹೋಂ ಸ್ಟೇಗಳಿಗೆ ಪ್ರವಾಸಿಗರು ಬರುತ್ತಿದ್ದಾರೆ ಎನ್ನಲಾಗಿದೆ. ಅದರಲ್ಲೂ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತದ ಬಳಿಯಿರುವ ರೆಸಾರ್ಟ್ ಒಂದರಲ್ಲಿ ಹೊರ ಭಾಗದ ಪ್ರವಾಸಿಗರು ಬರುತ್ತಿದ್ದಾರೆ ಎಂಬ ಆರೋಪವನ್ನು ಸುತ್ತಮುತ್ತಲಿನ ಜನರು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಈ ಸಂಬಂಧ ಸದ್ಯದ ಮಟ್ಟಿಗೆ ರೆಸಾರ್ಟ್ ನ್ನು ಜಿಲ್ಲಾಡಳಿತ ಬಂದ್ ಮಾಡಿಸುವಂತೆಯೂ ಒತ್ತಾಯ ಮಾಡುತ್ತಿದ್ದಾರೆ.
ಕೊಡಗಿನಲ್ಲೂ ಕೊರೊನಾ ವೈರಸ್ ಅಟ್ಟಹಾಸ
ಈ ರೆಸಾರ್ಟ್ ಗಳಲ್ಲಿಯೇ ಹೊರಜಿಲ್ಲೆ, ರಾಜ್ಯಗಳಿಂದ ಅಧಿಕ ಸಂಖ್ಯೆಯ ಪ್ರವಾಸಿಗರು ಬಂದು ತಂಗುತ್ತಿದ್ದಾರೆ. ಹೊರ ರಾಜ್ಯ-ಜಿಲ್ಲೆಗಳಂತೆ ಕೊಡಗಿನಲ್ಲೂ ಕೊರೊನಾ ವೈರಸ್ ನ ಅಟ್ಟಹಾಸ ಮಿತಿ ಮೀರುತ್ತಿದ್ದು, ಇಂತಹ ಸಂದರ್ಭದಲ್ಲಿ ರೆಸಾರ್ಟ್ ಯಾವುದೇ ಸಾಮಾಜಿಕ ಕಳಕಳಿಯಿಲ್ಲದೇ ಕಾರ್ಯನಿರ್ವಹಿಸುತ್ತಿದೆ. ರೆಸಾರ್ಟ್ ಗೆ ಹೊರ ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್ನಲ್ಲಿರಬೇಕಾದ ಮಂದಿಯೂ ಆಗಮಿಸುತ್ತಿರುವ ಬಗ್ಗೆ ಸಂಶಯ ಮೂಡಿದೆ.
ಕೊಡಗಿನಲ್ಲಿ 21 ದಿನಗಳ ಕಾಲ ಪ್ರವಾಸೋದ್ಯಮ ಬಂದ್
ಹೊರಗಿನವರಿಂದ ಕೊರೊನಾ ಹರಡುವ ಭಯ
ಜಿಲ್ಲೆಯ ಇತರೆಡೆ ಹೋಂ ಸ್ಟೇ, ರೆಸಾರ್ಟ್ ಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿದ್ದರೂ, ಕುಮಾರಳ್ಳಿ ಗ್ರಾಮ ವ್ಯಾಪ್ತಿಯಲ್ಲಿರುವ ಈ ರೆಸಾರ್ಟ್ ಮಾತ್ರ ಯಾವದೇ ಅಳುಕಿಲ್ಲದೇ ಕಾರ್ಯಾಚರಣೆ ನಡೆಸುತ್ತಿದೆ. ಇಲ್ಲಿಂದಲೇ ಸ್ಥಳೀಯರಿಗೆ ಕೊರೊನಾ ವೈರಸ್ ಹರಡುವ ಭೀತಿ ಎದುರಾಗಿದ್ದು, ತಕ್ಷಣ ಸಂಬಂಧಿಸಿದ ಇಲಾಖೆ ಇತ್ತ ಗಮನಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಬೆಟ್ಟದಳ್ಳಿ ಹಾಗೂ ಹಳ್ಳಿಯೂರು ಗ್ರಾಮಸ್ಥರು ಎಚ್ಚರಿಸಿದ್ದಾರೆ
ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬರುವ ಪ್ರವಾಸಿಗರನ್ನು ರಸ್ತೆಯಲ್ಲಿ ತಡೆದು ವಾಪಾಸ್ ಕಳುಹಿಸಲಾಗುವದು ಎಂದು ಬೆಟ್ಟದಳ್ಳಿ ಹಾಗೂ ಹಳ್ಳಿಯೂರು ಗ್ರಾಮಸ್ಥರು ಎಚ್ಚರಿಸಿದ್ದಾರೆ. ಮಲ್ಲಳ್ಳಿ ಜಲಪಾತ ಹಾಗೂ ಸುತ್ತಮುತ್ತಲಿನ ರೆಸಾರ್ಟ್ ಮತ್ತು ಹೋಂ ಸ್ಟೇಗಳಿಗೆ ಪ್ರವಾಸಿಗರು ಬರುತ್ತಿದ್ದಾರೆ. ಸೋಮವಾರಪೇಟೆ, ಯಡೂರು, ಶಾಂತಳ್ಳಿ, ಬೆಟ್ಟದಳ್ಳಿ, ಕುಂದಳ್ಳಿ, ಕುಮಾರಳ್ಳಿ ಮಾರ್ಗವಾಗಿ ಪ್ರತಿನಿತ್ಯ ಪ್ರವಾಸಿಗರ ಓಡಾಟವಿರುತ್ತದೆ. ಅದರಲ್ಲೂ ಶನಿವಾರ, ಭಾನುವಾರ ಹೆಚ್ಚಿನ ಪ್ರವಾಸಿಗರು ಆಗಮಿಸುವದರಿಂದ, ಅಂದು ಗ್ರಾಮಸ್ಥರೆಲ್ಲರೂ ಸೇರಿ ಪ್ರವಾಸಿಗರನ್ನು ರಸ್ತೆಯಲ್ಲೇ ತಡೆದು ವಾಪಾಸ್ ಕಳಿಸಲಾಗುವದು ಎಂದು ತಾಲೂಕು ತಹಶೀಲ್ದಾರ್ ಹಾಗೂ ಪೊಲೀಸ್ ಠಾಣೆಗೆ ಸಲ್ಲಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.