ವಿಶ್ವನಾಥ್ ರಾಜೀನಾಮೆ: ಕೊಡಗು ಕಾಂಗ್ರೆಸ್ ನಲ್ಲಿ ತಳಮಳ
ಮಡಿಕೇರಿ, ಜೂನ್ 22: ರಂಜಾನ್ ವೇಳೆಗೆ ಕಾಂಗ್ರೆಸ್ ಪಕ್ಷವನ್ನು ತೊರೆಯುವುದು ಖಚಿತ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಹೇಳಿದ ಬೆನ್ನಲ್ಲೇ ಅದರ ಪರಿಣಾಮ ಕೊಡಗಿನ ಕಾಂಗ್ರೆಸ್ ಮೇಲೆ ಬೀರಿರುವುದು ಇದೀಗ ಗೋಚರಿಸತೊಡಗಿದೆ.
ಹುಷಾರು, ಪ್ರಾಣ ತೆಗೆಯುತ್ತವೆ ಕೊಡಗಿನ ಜಲಪಾತಗಳು!
ಈಗಾಗಲೇ ಕೊಡಗಿನ ಜಿಲ್ಲಾ ಕಾಂಗ್ರೆಸ್ ಅತೃಪ್ತರ, ಭಿನ್ನಮತೀಯರ ಗೂಡಾಗಿದೆ. ಹೀಗಿರುವಾಗಲೇ ಕೆಲವು ದಿನಗಳ ಹಿಂದೆ ಮಡಿಕೇರಿಗೆ ಆಗಮಿಸಿದ ವಿಶ್ವನಾಥ್ ಅವರು ತಮ್ಮ ಬೆಂಬಲಿಗರ ಸಭೆ ಕರೆದಿದ್ದರು. ನಾನು ಕಾಂಗ್ರೆಸ್ನಲ್ಲೇ ಇದ್ದೇನೆ ಹಾಗಾಗಿ ತಾನು ಸಭೆ ನಡೆಸಿದ್ದಾಗಿ ಹೇಳಿಕೊಂಡಿದ್ದರು.
ಹಾರಂಗಿ ಜಲಾಶಯಕ್ಕೆ ಎದುರಾಗುತ್ತಿದೆಯೇ ಗಂಡಾಂತರ?
ವಿಶ್ವನಾಥ್ ಅವರು ಸಭೆ ಕರೆಯುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಡಿಸಿಸಿಯ ಪ್ರಭಾರ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಕಾಂಗ್ರೆಸ್ ಮುಖಂಡರು ಸೇರಿದಂತೆ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಳ್ಳದಂತೆ ಸೂಚನೆ ನೀಡಿದ್ದರು.
ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಮುದುಡಿದ 'ಕಮಲ' ಅರಳೋದ್ಯಾವಾಗ?
ಆದರೆ ಅಚ್ಚರಿಯ ವಿಷಯವೇನೆಂದರೆ ಅವತ್ತಿನ ಎಚ್.ವಿಶ್ವನಾಥ್ ಅವರು ಕರೆದ ಸಭೆಗೆ ನಿರೀಕ್ಷೆಗೆ ಮೀರಿ ಮುಖಂಡರು, ಕಾರ್ಯಕರ್ತರು ಬಂದಿದ್ದರು. ಅಷ್ಟೇ ಅಲ್ಲ ಮಡಿಕೇರಿ ನಗರಸಭೆಯ ಬಹುತೇಕ ಕಾಂಗ್ರೆಸ್ ಸದಸ್ಯರು ಪಾಲ್ಗೊಂಡಿದ್ದರು.
ಕಾಂಗ್ರೆಸ್ ನಾಯಕರನ್ನು ತೆಗಳಿದ್ದ ವಿಶ್ವನಾಥ್
ಸಭೆಯುದ್ದಕ್ಕೂ ತಮ್ಮ ಬೆಂಬಲಿಗರನ್ನುದ್ದೇಶಿಸಿ ಎಚ್.ವಿಶ್ವನಾಥ್ ಅವರು ಕಾಂಗ್ರೆಸ್ ಮುಖಂಡರನ್ನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಏಕವಚನದಲ್ಲೇ ತೆಗಳಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಹೇಳುವವರು ಅಥವಾ ಕೇಳುವವರಿಲ್ಲದ ಅನಿವಾರ್ಯ ಪರಿಸ್ಥಿತಿಯಲ್ಲಿ ತಾವು ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದು, ಈ ಕ್ಷೇತ್ರದ ಮಾಜಿ ಸಂಸದ ಹಾಗೂ ಓರ್ವ ಹಿರಿಯ ಕಾಂಗ್ರೆಸ್ಸಿಗನಾಗಿ ಸಭೆ ಕರೆದರೆ ಹೋಗಬೇಡಿ ಎನ್ನುವವರು ತಾವು ಎಲ್ಲಿಂದ ಬಂದು, ಯಾರಿಂದ ಅಧಿಕಾರ ಅನುಭವಿಸುತ್ತಿದ್ದೀರಿ ಎಂದು ನೋಡಿಕೊಳ್ಳಿ ಎಂದು ಪ್ರಭಾರ ಅಧ್ಯಕ್ಷ ಟಿ.ಪಿ.ರಮೇಶ್ ಗೆ ತಿರುಗೇಟು ನೀಡಿದ್ದರು.
ಯಾರ್ಯಾರಿದ್ದರು ಅಂದು?
ಆವತ್ತಿನ ಸಭೆಯಲ್ಲಿ ಘಟಾನುಘಟಿಗಳಾದ ಮಾಜಿ ಶಾಸಕ ಹೆಚ್.ಡಿ. ಬಸವರಾಜ್, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಎ. ಆದಂ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ನಗರಸಭೆಯ ಸದಸ್ಯ ಕೆ.ಎಂ. ಗಣೇಶ್, ನಗರಸಭೆಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಬಂಗೇರ, ಜುಲೇಕಾಬಿ, ಸದಸ್ಯೆ ವೀಣಾಕ್ಷಿ, ಕಾಂಗ್ರೆಸ್ ಮುಖಂಡರಾದ ಬಿ.ಟಿ. ನಂಜಪ್ಪ, ಬಿ.ಡಿ. ನಾರಾಯಣ ರೈ, ಕ್ಲಾಡಿ ಲೋಬೋ, ಕೆ.ಇ. ಮ್ಯಾಥ್ಯೂ, ಸುರಯ್ಯಾ ಅಬ್ರಾರ್, ಸುನಿಲ್ ನಂಜಪ್ಪ, ಬಿ.ಟಿ. ಸುಂದರ, ಜಾನ್ಸನ್, ಅಬ್ದುಲ್ ರೆಹಮಾನ್, ಶನಿವಾರಸಂತೆಯ ಸುರೇಶ್, ಸೂದನ ಈರಪ್ಪ, ಎಂ.ಕೆ. ಮಣಿ, ಕರೀಂ, ಸುನಿಲ್, ಸುಖೇಶ್, ನಗರಸಭೆ ಮಾಜಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ ಸೇರಿದಂತೆ ಹಲವರು ಇದ್ದರು.
ಕಾಂಗ್ರೆಸ್ ಸೂಚನೆ ಧಿಕ್ಕರಿಸಿದ್ದ ವಿಶ್ವನಾಥ್
ಜಿಲ್ಲಾ ಕಾಂಗ್ರೆಸ್ ಸೂಚನೆ ನೀಡಿದ್ದರೂ ಅದನ್ನು ಧಿಕ್ಕರಿಸಿ ವಿಶ್ವನಾಥ್ ಅವರು ಕರೆದ ಸಭೆಗೆ ತೆರಳಿದ ಕಾಂಗ್ರೆಸ್ ನ ಮುಖಂಡರಿಗೆ ಈಗ ನೋಟೀಸ್ ನೀಡಲಾಗಿದ್ದು, ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇದೀಗ ಇದರ ಪರಿಣಾಮ ನೇರವಾಗಿ ಮಡಿಕೇರಿ ನಗರಸಭೆಯ ಮೇಲೆ ಬೀರುವ ಸಾಧ್ಯತೆಯಿದೆ. ಜಿಲ್ಲೆಯಲ್ಲಿ ಎಲ್ಲ ಕಡೆಗಳಲ್ಲೂ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಮಡಿಕೇರಿ ನಗರಸಭೆಯಲ್ಲಿ ಅಧಿಕಾರ ಉಳಿಸಿಕೊಂಡಿದ್ದರೆ ಅದಕ್ಕೆ ಕಾರಣ ಮಾಜಿ ಸಂಸದ ಎಚ್.ವಿಶ್ವನಾಥ್ ಅವರು ಎಸ್ಡಿಪಿಐ ಜೊತೆಗೆ ಮಾತುಕತೆ ನಡೆಸಿ ಅವರ ಸಹಕಾರದೊಂದಿಗೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡಿದ್ದರು.
ಜಿಲ್ಲಾ ಕಾಂಗ್ರೆಸ್ ನಾಯಕರ ಮೇಲೆ ಅಸಮಧಾನ
ಒಂದು ವೇಳೆ ಈಗ ಕಾಂಗ್ರೆಸ್ ನ ಕೆಲವು ಸದಸ್ಯರು ತಿರುಗಿ ಬಿದ್ದರೆ ಮತ್ತೆ ಮಡಿಕೇರಿ ನಗರ ಸಭೆಯ ಅಧಿಕಾರ ಕಾಂಗ್ರೆಸ್ ನ ಕೈ ತಪ್ಪಿಹೋಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲ. ಈಗಾಗಲೇ ಬಹಳಷ್ಟು ಮುಖಂಡರು ಜಿಲ್ಲಾ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಇದೆಲ್ಲದರ ಪರಿಣಾಮ ವಿಶ್ವನಾಥ್ ಅವರು ಕಾಂಗ್ರೆಸ್ ತೊರೆದು ಮುಂದೆ ಯಾವ ಪಕ್ಷವನ್ನು ಸೇರುತ್ತಾರೆ ಎಂಬುದರ ಮೇಲೆ ನಿಂತಿದೆ.
ವ್ಯತಿರಿಕ್ತ ಪರಿಣಾಮವಾಗೋದು ಖಚಿತ
ವಿಶ್ವನಾಥ್ ಅವರು ಕಾಂಗ್ರೆಸ್ ತೊರೆದರೆ ನಮಗೇನು ಆಗಲ್ಲ ಎಂದು ಕೆಪಿಸಿಸಿ ನಾಯಕರು ತಲೆಕೆಡಿಸಿಕೊಳ್ಳದೆ ಸುಮ್ಮನಿರಬಹುದು. ಆದರೆ ಮೈಸೂರು ಮತ್ತು ಕೊಡಗಿನ ಕಾಂಗ್ರೆಸ್ ನಲ್ಲಿ ಒಂದಷ್ಟು ಏರುಪೇರುಗಳಾಗುವುದಂತೂ ಖಚಿತ. ಅದರಲ್ಲೂ ಕೊಡಗಿನಲ್ಲಿ ಹೆಚ್ಚಿನ ಪರಿಣಾಮವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.