ಲಾಕ್ಡೌನ್ ಮಧ್ಯೆ ಕೊಡಗಿನಲ್ಲಿ ಮಕ್ಕಳೊಂದಿಗೆ ರಾಣಿಯ ಸ್ವಚ್ಛಂದ ತಿರುಗಾಟ!
ಬೆಂಗಳೂರು, ಮೇ 14: ಕೊರೊನಾ ವೈರಸ್ ಭಯದಿಂದ ಇಡೀ ದೇಶದಲ್ಲಿ ಲಾಕ್ಡೌನ್ ಜಾರಿಯಲ್ಲಿದೆ. ಮನೆಯಿಂದ ಹೊರೆಗೆ ಬಂದರೆ ಕೊರೊನಾ ಸೋಂಕಿನ ಆತಂಕ ಹಾಗೂ ಪೊಲೀಸರ ಭಯ ಎಲ್ಲರನ್ನು ಕಾಡುತ್ತಿದೆ. ಆದರೆ ಅವರಿಗೆ ಮಾತ್ರ ಯಾರ ಭಯವೂ ಇಲ್ಲ.
ಮೊನ್ನೆಯಷ್ಟೇ ರಾಜಕಾರಣಿಯೊಬ್ಬರ ಪುತ್ರ ಲಾಕ್ಡೌನ್ ಇದ್ದರೂ ಕುದುರೆ ಸವಾರಿ ಮಾಡಿ ಕಾನೂನು ಉಲ್ಲಂಘನೆ ಮಾಡಿದ್ದು ಸುದ್ದಿಯಾಗಿತ್ತು. ಆದರೆ ಇವರಿಗೆ ಕಾನೂನು ಉಲ್ಲಂಘನೆ ಭಯವೂ ಇಲ್ಲ. ರಾಜ ಪರಿವಾರಕ್ಕೆ ಯಾರ ಭಯ? ಅವರನ್ನು ಕೇಳುವುದಕ್ಕೆ ಯಾರಿಗೆ ಧೈರ್ಯವಿದೆ?
ಹೌದು ಲಾಕ್ಡೌನ್ ಅವರಿಗೆ ವರವಾಗಿ ಪರಿಣಮಿಸಿದೆ. ಎಲ್ಲರಿಗೂ ಲಾಕ್ಡೌನ್ ಆತಂಕವಿದ್ದರೆ ಅವರಿಗೆ ಮಾತ್ರ ಯಾವುದೇ ಭಯವಿಲ್ಲ. ಅವರು ಬೇರೆ ಯಾರೂ ಅಲ್ಲ. ಕಾಡಿನ ಕಾಡಿನ ಹುಲಿರಾಣಿ. ಹುಲಿಯೊಂದು ತನ್ನ ಮರಿಗಳೊಂದಿಗೆ ಮುಖ್ಯ ರಸ್ತೆಯಲ್ಲೇ ಹೆಜ್ಜೆ ಹಾಕುತ್ತಾ ಕಾಲ ಕಳೆಯುತ್ತಿರುವ ದೃಶ್ಯಗಳು ವಿರಾಜಪೇಟೆ ತಾಲೂಕಿನ ಆನೆಚೌಕೂರು ಗೇಟ್ ಬಳಿ ಕಂಡು ಬಂದಿವೆ.
3 ಮರಿಗಳೊಂದಿಗೆ ಪ್ರತ್ಯಕ್ಷವಾಗಿರುವ ಹುಲಿ ತಾಲೂಕಿನ ಆನೆಚೌಕೂರು ಗೇಟ್ ಬಳಿ ಹಾಗೆಯೇ ಮರಿಗಳೊಂದಿಗೆ ಕೆರೆಯಲ್ಲಿ ನೀರು ಕುಡಿಯುತ್ತ ಸ್ವಚ್ಛಂದವಾಗಿ ತಿರುಗಾಡುತ್ತಿದೆ. ಜನರಲ್ಲಿ ಆತಂಕ ಮನೆ ಮಾಡಿದೆ. ಆದರೆ ಕೊರೊನಾ ವೈರಸ್, ಲಾಕ್ಡೌನ್, ಸೋಂಕು, ಸಾವಿನ ಭಯ ಇವ್ಯಾವು ಇಲ್ಲದೆ ಹುಲಿ ತನ್ನ ಮರಿಗಳೊಂದಿಗೆ ಅಡ್ಡಾಡುತ್ತಿದೆ ಎಂಬ ವಿಡಿಯೊ ಹಾಗೂ ಚಿತ್ರಗಳು ಸೊಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ. ಆದರೆ ಈ ಕುರಿತು ಸತ್ಯಾಸತ್ಯತೆ ಹೊರಗೆ ಬರಬೇಕಿದೆ.