ಪುಟ್ಟ ಪ್ರವಾಸಿ ಜಿಲ್ಲೆಯಲ್ಲಿ ಕೋವಿಡ್ 19 ನಿಯಮ ಉಲ್ಲಂಘನೆಯಿಂದ ವಸೂಲಾದ ದಂಡ ಎಷ್ಟು?
ಕೊಡಗು, ನವೆಂಬರ್ 11: ಈ ಶತಮಾನದ ಭೀಕರ ಮಾರಕ ಕಾಯಿಲೆ ಎಂದೇ ಪರಿಗಣಿಸಲ್ಪಟ್ಟಿರುವ ಕೋವಿಡ್ 19 ಸಾಂಕ್ರಾಮಿಕದಿಂದಾಗಿ ಇಡೀ ಜಗತ್ತೆ ತಲ್ಲಣಗೊಂಡಿದೆ. ಆರ್ಥಿಕ ವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ. ಲಕ್ಷಾಂತರ ಉದ್ಯೋಗಗಳೂ ನಾಶವಾಗಿವೆ. ಸೋಂಕು ಹರಡುವಿಕೆಯನ್ನು ತಡೆಯಲು ಸರ್ಕಾರವೇ ಲಾಕ್ ಡೌನ್ ಘೋಷಿಸಿತ್ತು.
ಅಲ್ಲದೆ ಜನರು ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡದಿರುವಂತೆ ಪದೇ ಪದೇ ಮನವಿ ಮಾಡಿಕೊಂಡು ನಿಯಮ ಉಲ್ಲಂಘಿಸುವವರ ಮೇಲೆ ದುಬಾರಿ ದಂಡದ ಜತೆಗೆ ಮೊಕದ್ದಮೆಯನ್ನೂ ದಾಖಲಿಸಿತ್ತು. ಆದರೆ ಸಾರ್ವಜನಿಕರು ಸರ್ಕಾರದ ಸೂಚನೆಯನ್ನು ಧಿಕ್ಕರಿಸಿ ಲಾಕ್ ಡೌನ್ ನಿಯಮಗಳನ್ನೂ ಉಲ್ಲಂಘಿಸಿ ಅಪಾರ ಪ್ರಮಾಣದ ದಂಡ ಕಟ್ಟಿದ್ದು ಈ ಮೂಲಕ ಬೊಕ್ಕಸಕ್ಕೆ ಆದಾಯ ನೀಡಿದ್ದಾರೆ. ಮುಂದೆ ಓದಿ...
ಮಡಿಕೇರಿಯಲ್ಲಿ ಸಂಗ್ರಹಿಸಿದ ದಂಡದ ಮೊತ್ತವೆಷ್ಟು?
ಪುಟ್ಟ ಪ್ರವಾಸಿ ಜಿಲ್ಲೆಯಲ್ಲಿ ಕಳೆದ ಮಾರ್ಚ್ 22ರಿಂದ ಅಕ್ಟೋಬರ್ 31ರವರೆಗೆ ಪೊಲೀಸರು ಕೊರೊನಾ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದವರಿಂದ ವಸೂಲಿ ಮಾಡಿರುವ ದಂಡ 7,75,800 ರೂಪಾಯಿಗಳಾಗಿವೆ. ನಿಯಮ ಉಲ್ಲಂಘಿಸಿದ 7461 ಪ್ರಕರಣಗಳಿಂದ ಈ ದಂಡ ವಸೂಲಿ ಮಾಡಲಾಗಿದೆ. ಇದರಲ್ಲಿ ಮುಖ ಗವುಸು ಧರಿಸದ ಪ್ರಕರಣಗಳು 6231 ಆಗಿದ್ದರೆ, ಸಾಮಾಜಿಕ ಅಂತರ ಕಾಪಾಡದಿರುವ ಪ್ರಕರಣಗಳು 1238 ಆಗಿವೆ.
ಲಾಕ್ ಡೌನ್ ನಿಯಮ ಉಲ್ಲಂಘನೆ: ಮೈಸೂರಲ್ಲಿ ದಂಡದ ರೂಪದಲ್ಲಿ ಸಂಗ್ರಹಿಸಿದ ಮೊತ್ತವೆಷ್ಟು?
ಗ್ರಾಮ ಪಂಚಾಯಿತಿ ಮಟ್ಟದಲ್ಲೂ ದಂಡ
ಇದಲ್ಲದೆ ಮಡಿಕೇರಿ ತಾಲ್ಲೂಕಿನ 26 ಗ್ರಾಮ ಪಂಚಾಯ್ತಿಗಳು ಮುಖಗವುಸು ಧರಿಸದಿದ್ದವರಿಂದ ಒಟ್ಟು 27,900 ರೂಪಾಯಿ ದಂಡ ವಸೂಲಿ ಮಾಡಿವೆ. ವಿರಾಜಪೇಟೆ ತಾಲ್ಲೂಕಿನ 38 ಗ್ರಾಮ ಪಂಚಾಯಿತಿಗಳು 52,100 ರೂಪಾಯಿ ಮತ್ತು ಸೋಮವಾರಪೇಟೆ ತಾಲ್ಲೂಕಿನ 40 ಗ್ರಾಮ ಪಂಚಾಯ್ತಿಗಳು ನಿಯಮ ಉಲ್ಲಂಘಿಸಿದವರಿಂದ 74,400 ರೂಪಾಯಿಗಳ ದಂಡವನ್ನು ವಸೂಲಿ ಮಾಡಿವೆ.
ಲಾಕ್ ಡೌನ್ ಅವಧಿಯಲ್ಲಿ ವಾಹನ ಸವಾರರಿಗೆ ದಂಡ
ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘನೆ ಮಾಡಿದ ವಾಹನ ಚಾಲಕರಿಂದ ಒಟ್ಟು 93,75,000 ರೂಪಾಯಿಗಳ ದಂಡ ವಸೂಲಿ ಮಾಡಲಾಗಿದೆ. ಒಟ್ಟು 18,404 ವಾಹನ ಸವಾರರು ಲಾಕ್ ಡೌನ್ ಅವಧಿಯಲ್ಲೂ ವಾಹನ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ಈ ವಾಹನ ಸವಾರರಲ್ಲಿ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಓಡಿಸಿರುವುದು, ಹೆಲ್ಮೆಟ್ ಧರಿಸದಿರುವುದು, ಸೀಟ್ ಬೆಲ್ಟ್ ಧರಿಸದಿರುವುದು ಮುಂತಾದವು ಸೇರಿವೆ.
ಮಾಸ್ಕ್ ನಿಯಮ ಉಲ್ಲಂಘನೆ; ದ.ಕ. ಜಿಲ್ಲೆಯಲ್ಲಿ ವಸೂಲಿಯಾದ ದಂಡವೆಷ್ಟು?
ಜಿಲ್ಲಾ ಪೊಲೀಸ್ ಅಧಿಕಾರಿ ಕ್ಷಮಾ ಮಿಶ್ರಾ ಮಾತು...
ಈ ಕುರಿತು ಒನ್ ಇಂಡಿಯಾ ಕನ್ನಡದೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ಅಧಿಕಾರಿ ಕ್ಷಮಾ ಮಿಶ್ರಾ ಅವರು, "ಪೊಲೀಸ್ ಇಲಾಖೆಯು ಎಲ್ಲ ಪೊಲೀಸ್ ಠಾಣೆಗಳ ವತಿಯಿಂದ ಹೆಚ್ಚು ಹೆಚ್ಚು ಜನ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ದಂಡ ವಿಧಿಸುವುದರಿಂದ ಮಾತ್ರ ಉಲ್ಲಂಘನೆ ಪ್ರಕರಣಗಳು ಕಡಿಮೆ ಆಗುವುದಿಲ್ಲ ಎಂದ ಅವರು, ಸಾರ್ವಜನಿಕರೂ ಸ್ವಯಂ ಪ್ರೇರಿತರಾಗಿ ಸರ್ಕಾರದ ಸೂಚನೆಗಳನ್ನು ಪಾಲಿಸಬೇಕು. ಮುಖಗವುಸು ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಎಲ್ಲರ ಸಹಕಾರ ಇದ್ದರೆ ಮಾತ್ರ ಕೊರೊನಾ ವಿರುದ್ಧ ಹೋರಾಟ ಯಶಸ್ವಿಯಾಗುತ್ತದೆ ಎಂದರು.
Recommended Video