ಕೊಡಗಿನ ಕಲ್ಲಳ್ಳದಲ್ಲಿ ಇನ್ನೂ ಶಿಲಾಯುಗದ ಜೀವನ!
ಮಡಿಕೇರಿ, ಜುಲೈ 08 : ನಾವೆಲ್ಲರೂ ಆಧುನಿಕತೆಯ ನಾಗಾಲೋಟದಲ್ಲಿ ಬದುಕುತ್ತಿದ್ದೇವೆ. ಜಗತ್ತೇ ಅಂಗೈಯಲ್ಲಿದೆಯೇನೋ ಎಂಬಂತೆ ತಂತ್ರಜ್ಞಾನ ಮುಂದುವರೆದಿದೆ. ಪ್ರತಿಯೊಬ್ಬರೂ ಐಷಾರಾಮಿ ಜೀವನದತ್ತ ದಾಪುಗಾಲಿಡುತ್ತಿದ್ದಾರೆ.
ಹೀಗಿರುವಾಗ ಕೊಡಗಿನ ಕೆಲವು ಕಡೆಗಳಲ್ಲಿ ಅರಣ್ಯದಂಚಿನಲ್ಲಿ ತಾತ ಮುತ್ತಾತಂದಿರ ಕಾಲದಿಂದ ಜೀವನ ನಿರ್ವಹಿಸಿಕೊಂಡು ಬಂದಿರುವ ಆದಿವಾಸಿಗಳು ಇಂದಿಗೂ ಸೌಲಭ್ಯ ವಂಚಿತರಾಗಿ ಮುರುಕು ಗುಡಿಸಲಲ್ಲಿ ವಾಸಮಾಡುತ್ತಿರುವುದು ನಮ್ಮ ಹಳಸಿಹೋದ ಚಿತ್ರಾನ್ನವಾಗಿರುವ ವ್ಯವಸ್ಥೆಗೊಂದು ಕೈಗನ್ನಡಿಯಾಗಿದೆ.
ಮಡಿಕೇರಿಯಲ್ಲಿ ದುರ್ಬಲವಾಗುತ್ತಿದೆ ಮಳೆಗಾಲ
ಕೆಲವು ತಿಂಗಳ ಹಿಂದೆ ಎಲ್ಲಿಂದಲೋ ಬಂದವರು ದಿಡ್ಡಳ್ಳಿಯಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡು ಹೋರಾಟ ನಡೆಸಿ ಕೊನೆಗೂ ಸೂರು ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ನಿದರ್ಶನಗಳು ನಮ್ಮ ಮುಂದಿವೆ.
ಆದರೆ ನೂರಾರು ವರ್ಷಗಳಿಂದ ಕಾಡಿನಲ್ಲಿ ಸೌಲಭ್ಯವೇ ಇಲ್ಲದ ಸ್ಥಳದಲ್ಲಿ ಪುಟ್ಟ ಗುಡಿಸಲು ಕಟ್ಟಿಕೊಂಡು ಬದುಕುತ್ತಿರುವ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಮಾಲ್ದಾರೆ ಗ್ರಾಮಕ್ಕೊಳಪಡುವ, ಕಲ್ಲಳ್ಳ ಮೀಸಲು ಅರಣ್ಯದ ಚೆಕ್ ಪೋಸ್ಟಿನ ಸಮೀಪದ ಹೆದ್ದಾರಿಯ ಬಳಿಯ ಹಾಡಿಯ ಜನ ಇವತ್ತಿಗೂ ಯಾರ ಕಣ್ಣಿಗೂ ಬಿದ್ದಿಲ್ಲ. ಅವರಿಗೊಂದು ಸುಸಜ್ಜಿತ ಸೂರು ಕಲ್ಪಿಸಿಕೊಡಬೇಕೆಂಬ ಆಲೋಚನೆಯೂ ಬಂದಿಲ್ಲ.
ಕೊಡಗಿನಲ್ಲಿ ಕೃಷಿಕರಿಗೆ ಸಂಕಷ್ಟ ತಂದೊಡ್ಡುತ್ತಿರುವ ಕಾಡಾನೆಗಳು
ಪ್ಲಾಸ್ಟಿಕ್ ಹೊದಿಕೆಯ ಗುಡಿಸಲೇ ಅರಮನೆ
ಜೋರು ಮಳೆಗಾಳಿ ಬಂದರೆ ಕಿತ್ತುಹೋಗುವಂತಿರುವ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲನ್ನೇ ಅರಮನೆ ಎಂದುಕೊಂಡು ಬದುಕುವ ಕಲ್ಲಳ್ಳ ಹಾಡಿಯ ನಿವಾಸಿಗಳು ಕೂಲಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇವರ ಹಾಡಿಗೆ ಸರಿಯಾದ ರಸ್ತೆ, ವಿದ್ಯುತ್, ನೀರು, ಶೌಚಾಲಯ ಹೀಗೆ ಯಾವ ಮೂಲಭೂತ ಸೌಲಭ್ಯವೂ ಇಲ್ಲದಾಗಿದೆ.
ಮತ ಪಡೆದು ಹೋದವರು ಪತ್ತೆಯಿಲ್ಲ
ಇಲ್ಲಿನವರು ಮತದಾನದ ಹಕ್ಕು ಪಡೆದಿದ್ದು, ಭರವಸೆ ನೀಡಿ ಇವರಿಂದ ಮತ ಪಡೆದವರು ಬಳಿಕ ಇವರಿಗೆ ಸೌಲಭ್ಯ ಕಲ್ಪಿಸಿಕೊಡುವಲ್ಲಿ ವಿಫಲರಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮತ ಪಡೆದು ಹೋದವರು ಇನ್ನೂ ಪತ್ತೆಯಿಲ್ಲ. ಹೀಗಾಗಿ ಇವರು ಮುರುಕಲು ಗುಡಿಸಲನ್ನೇ ಅರಮನೆ ಎಂಬ ಭ್ರಮೆಯಲ್ಲಿ ಕಷ್ಟದ ಜೀವನ ಸಾಗಿಸುತ್ತಿದ್ದಾರೆ.
ಗಂಜಿಯೋ? ನೀರೋ ಕುಡಿದು ಬದುಕುತ್ತಿದ್ದಾರೆ
ಇಲ್ಲಿ ಎಲ್ಲರೂ ಬಡವರು, ಅನಕ್ಷರಸ್ಥರು. ಇವರಿಗೆ ಸರ್ಕಾರ ನೀಡುವ ಸೌಲಭ್ಯವನ್ನು ತಿಳಿ ಹೇಳುವ ಜನರಿಲ್ಲ. ಅದಕ್ಕಿಂತ ಹೆಚ್ಚಾಗಿ ಸರ್ಕಾರದ ಹಲವಾರು ಯೋಜನೆಯ ಲಾಭವನ್ನು ಪಡೆದುಕೊಳ್ಳುವ ಶಕ್ತಿಯೂ ಇಲ್ಲದಾಗಿದೆ. ಹೀಗಾಗಿ ಕೂಲಿ ಮಾಡಿ ಸಿಗುವ ಹಣದಲ್ಲಿ ಇರುವ ಗುಡಿಸಲಲ್ಲೇ ಗಂಜಿಯೋ? ನೀರೋ ಕುಡಿದು ಬದುಕುತ್ತಿದ್ದಾರೆ.
ಜೇನುಕುರುಬರು ಮತ್ತು ಸೋಲಿಗರು ಹೆಚ್ಚು
ಕಲ್ಲಳ್ಳ ಹಾಡಿಯಲ್ಲಿ ವಾಸವಿರುವ ಜನರ ಪೈಕಿ ಜೇನುಕುರುಬರು ಮತ್ತು ಸೋಲಿಗರು ಇದ್ದು ಇವರಿಗೆ ಸೂರು ಹಾಗೂ ವ್ಯವಸಾಯಕ್ಕೆ ಒಂದಷ್ಟು ಜಾಗವನ್ನು ನೀಡಿದ್ದು ಸರ್ಕಾರದಿಂದ ಪಟ್ಟೆಯೂ ದೊರೆತಿದೆ. ಹೀಗಿರುವಾಗ ಸರ್ಕಾರಿ ಸೌಲಭ್ಯ ಪಡೆದು ಮನೆ ನಿರ್ಮಿಸಿಕೊಳ್ಳಲು ಅಡ್ಡಿಯಿಲ್ಲ. ಆದರೆ ಬಡತನದಲ್ಲೇ ಬದುಕು ಸಾಗಿಸುವ ಇವರಿಗೆ ಮನೆ ನಿರ್ಮಿಸುವುದು ಗಗನಕುಸುಮವಾಗಿದೆ.
ಕೆಲವೇ ಮನೆಗಳು ನಿರ್ಮಾಣವಾಗಿವೆ
ಸರ್ಕಾರವೇ ಹಾಡಿವಾಸಿಗಳಿಗೆ ಆಶ್ರಯ ಮನೆ ನಿರ್ಮಿಸಿಕೊಟ್ಟರೆ ನೆಮ್ಮದಿಯಾಗಿ ಬದುಕಲು ಸಾಧ್ಯವಿದೆ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಮನಸ್ಸು ಮಾಡಬೇಕಿದೆ. ಐಟಿಡಿಪಿ ಹಾಗೂ ಪಂಚಾಯಿತಿ ವತಿಯಿಂದ ವಸತಿ ಯೋಜನೆಯಡಿ ಇಲ್ಲಿನ ಬುಡಕಟ್ಟು ಜನಾಂಗಕ್ಕೆ ವಸತಿ ಕಲ್ಪಿಸಲು ಮುಂದಾಗಿದ್ದರೂ ಇಲ್ಲಿವರೆಗೆ ಕೆಲವೇ ಕೆಲವು ಮನೆಗಳನ್ನು ಮಾತ್ರ ನಿರ್ಮಿಸಲಾಗಿದ್ದು, ಉಳಿದಂತೆ ಎಲ್ಲರಿಗೂ ಗುಡಿಸಲೇ ಗತಿಯಾಗಿದೆ.
ಗ್ರಾಪಂ ಮನೆ ನಿರ್ಮಿಸಿ ಕೊಡಬೇಕು
ಇನ್ನು ಸರ್ಕಾರದ ಯೋಜನೆಯಡಿ ಮನೆ ನಿರ್ಮಿಸಲು ಸಹಾಯಧನ ನೀಡಲಾಗುತ್ತಿದ್ದರೂ ಬಂಡವಾಳ ಹಾಕಿ ಹಂತ ಹಂತವಾಗಿ ಮನೆ ನಿರ್ಮಿಸಿ ಹಣ ಪಡೆಯುವ ಪರಿಸ್ಥಿತಿಯಲ್ಲಿ ಹಾಡಿಯ ಜನರಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿ ಮನೆ ನಿರ್ಮಿಸಿ ನೀಡಿದರಷ್ಟೆ ಇಲ್ಲಿನವರು ಗುಡಿಸಲು ಬಿಟ್ಟು ಸುಸಜ್ಜಿತ ಮನೆಯತ್ತ ತೆರಳಲು ಸಾಧ್ಯವಾಗಬಹುದು.
ಕೆಜಿ ಬೋಪಯ್ಯನವರೇ ಇಲ್ಲಿ ಬಂದು ಸ್ವಲ್ಪ ನೋಡಿ
ಆಡಳಿತಾರೂಢರು ಬಡವರ ಉದ್ಧಾರಕ್ಕಾಗಿ ಮಾಡಿದ ಯೋಜನೆಗಳ ದೊಡ್ಡ ಪಟ್ಟಿಯನ್ನೇ ಭಾಷಣಗಳಲ್ಲಿ ಬಿಚ್ಚಿಡುತ್ತಾರೆ. ಇನ್ನು ಅಲ್ಪಸಂಖ್ಯಾತರನ್ನು ಓಲೈಸಲು ಹಲವಾರು ಭಾಗ್ಯಗಳನ್ನು ನೀಡಲಾಗಿದೆ. ಆದರೆ ಈ ಬಡವರು ಉದ್ಧಾರವಾಗಿದ್ದಾರಾ ಎಂಬುವುದು ಕಲ್ಲಳ್ಲ ಹಾಡಿಗೆ ಹೋಗಿ ನೋಡಿದರೆ ಗೊತ್ತಾಗಿ ಬಿಡುತ್ತದೆ. ಕೆಜಿ ಬೋಪಯ್ಯನವರೇ, ಇಲ್ಲಿ ಬಂದು ಸ್ವಲ್ಪ ನೋಡ್ತೀರಾ?