ದಣಿದು ಮನೆ ಬಾಗಿಲಿಗೆ ಬಂದ ಈ ಪ್ರಾಣಿಗೆ ನೀರು ಕುಡಿಸಿದ ಜನ
ಮಡಿಕೇರಿ, ಜನವರಿ 8: ದಕ್ಷಿಣ ಕೊಡಗಿನ ಭಾಗದಲ್ಲಿ ಭತ್ತದ ಗದ್ದೆ, ಕಾಫಿ ತೋಟಗಳಲ್ಲಿ ಕಂಡು ಬರುತ್ತಿದ್ದ, ವನ್ಯ ಜೀವಿಗಳ ಸಾಲಿಗೆ ಸೇರಿದ ಚಿರತೆ ಮಾದರಿಯ ಪ್ರಾಣಿ ದರ್ಗುಲಿ, ಪೆರ್ಪಣ (ಆಡು ಭಾಷೆ) ನೀರನ್ನು ಅರಸುತ್ತ ಕಾಫಿ ತೋಟದ ಮಧ್ಯೆ ಇರುವ ರೈತನ ಮನೆಯ ಬಳಿ ತೆರಳಿದ್ದು, ಈ ವೇಳೆ ಮನೆಯವರು ಧೈರ್ಯಗುಂದದೇ ದಣಿದು ಬಂದಿದ್ದ ಪೆರ್ಪಣದ ಬಾಯಾರಿಕೆ ತಣಿಸಿದ್ದಾರೆ.
ಶ್ರೀಮಂಗಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರೈತರೊಬ್ಬರ ಕಾಫಿ ತೋಟದ ಮಧ್ಯೆ ಇರುವ ಮನೆಗೆ, ಸಮೀಪದ ಬ್ರಹ್ಮಗಿರಿ ಅರಣ್ಯ ಪ್ರದೇಶದಿಂದ ಬಾಯಾರಿಕೆ ನಿವಾರಿಸಿಕೊಳ್ಳಲು ನೀರು ಹುಡುಕುತ್ತ ಅಂದಾಜು 2 ವರ್ಷದ ಪ್ರಾಯದ ಈ ಪ್ರಾಣಿ ಹೆಜ್ಜೆ ಹಾಕುತ್ತಾ ಬಂದಿದೆ. ಮನೆಯೊಡತಿ ಈ ವಿಶೇಷ ಅತಿಥಿಯನ್ನು ನೀರು ಕೊಡುವ ಮೂಲಕ ಸತ್ಕರಿಸಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮನಕಲಕುವ ಚಿತ್ರಕ್ಕೆ ಸ್ನೇಹಿತರ ಅದ್ಭುತ ಪ್ರತಿಸ್ಪಂದನೆ
ತನ್ನ ಮೇಲೆ ಅಪಾಯದ ಈ ಪ್ರಾಣಿ ಎರಗಬಹುದೆಂಬ ಭಯವಿದ್ದರೂ ಭಯವನ್ನು ಲೆಕ್ಕಿಸದೆ ಧೈರ್ಯದಿಂದ ಬಿಂದಿಗೆಯಲ್ಲಿದ್ದ ನೀರನ್ನು ಪಾತ್ರೆಗೆ ಸುರಿದು ದಣಿದು ಬಂದಿದ್ದ ಈ ಪ್ರಾಣಿಯ ಬಾಯಾರಿಕೆ ತಣಿಸಿದ್ದಾರೆ. ಹೊಟ್ಟೆ ತುಂಬ ನೀರು ಕುಡಿದ ಈ ಪ್ರಾಣಿಯು ಕಾಫಿ ತೋಟದಲ್ಲಿ ಮಾಯವಾಗುತ್ತ ಸಮೀಪದ ಅರಣ್ಯವನ್ನು ಪ್ರವೇಶಿಸಿದೆ.
ಈ ಪ್ರಾಣಿಯು ಚಿರತೆ ಮಾದರಿಯದ್ದಾಗಿದ್ದು, ನಾಯಿ, ಕೋಳಿಗಳನ್ನು ಹೆಚ್ಚಾಗಿ ಬೇಟೆಯಾಡುತ್ತ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಕಪ್ಪು ನಾಯಿಯನ್ನು ಇಷ್ಟ ಪಡುವ ಈ ಪ್ರಾಣಿಯು ನಾಯಿಯ ಕುತ್ತಿಗೆ ಭಾಗಕ್ಕೆ ಕಚ್ಚುವ ಮೂಲಕ ಇದನ್ನು ದೂರದ ಸ್ಥಳಕ್ಕೆ ಎಳೆದೊಯ್ದು ಯಾರೂ ಇಲ್ಲದ ಪ್ರದೇಶದಲ್ಲಿ ತಿಂದು ಮುಗಿಸುತ್ತದೆ.