ಗಜಗಿರಿ ಬೆಟ್ಟ ಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿಯೇ ಕಾರಣ; ತಜ್ಞರ ವರದಿ
ಮಡಿಕೇರಿ, ಡಿಸೆಂಬರ್ 15: ರಾಜ್ಯದ ಪುಟ್ಟ ಪ್ರವಾಸಿ ಜಿಲ್ಲೆ ಕೊಡಗು ಕಳೆದ ಮೂರು ವರ್ಷಗಳಿಂದ ಭೀಕರ ಭೂ ಕುಸಿತ ಹಾಗೂ ಮಳೆಗೆ ಸಿಲುಕಿ ನಲುಗಿ ಹೋಗಿದೆ. ಈ ಮೂರು ವರ್ಷಗಳಲ್ಲಿ ಸಾವಿರಾರು ಜನರು ಮನೆ, ಕೃಷಿ ಭೂಮಿ ಕಳೆದುಕೊಂಡು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿ ಸಂತ್ರಸ್ಥರಾಗಿದ್ದಾರೆ.
ಮಳೆಗಾಲದಲ್ಲಿ ಗುಡ್ಡ, ಬೆಟ್ಟ ಕುಸಿತ ಎಂಬುದು ಕಳೆದ ನೂರಾರು ವರ್ಷಗಳಲ್ಲಿ ಇರಲೇ ಇಲ್ಲ. ಆದರೆ ಯಾವಾಗ ಕೊಡಗಿನಲ್ಲಿ ಲಂಗು-ಲಗಾಮಿಲ್ಲದೆ ಹೋಂಸ್ಟೇ ಗಳು ಆರಂಭಗೊಂಡವೋ, ಆಗ ಹಚ್ಚ ಹಸಿರಿನ ಹೊದಿಕೆ ಹೊದ್ದಿದ್ದ ಗುಡ್ಡಗಳನ್ನೆಲ್ಲ ಅವೈಜ್ಞಾನಿಕ ಕಾಮಗಾರಿ ಮಾಡಿ ಸಮತಟ್ಟು ಮಾಡಲಾಯಿತು. ಇದರಿಂದಾಗಿ ಭೂಮಿಯೊಳಗೆ ನೀರು ಹೋಗಲು ಆಸ್ಪದವಾಯಿತು. ಪರಿಣಾಮ ಬೆಟ್ಟ ಗುಡ್ಡಗಳ ಕುಸಿತವೂ ಸಂಭವಿಸಿದೆ.
ಮಡಿಕೇರಿ: ಅರಣ್ಯ ಇಲಾಖೆ ತೋಡಿದ ಇಂಗುಗುಂಡಿಯೇ ಗುಡ್ಡ ಕುಸಿತಕ್ಕೆ ಕಾರಣವಾಯಿತಾ?
ಬೆಟ್ಟದ ಮೇಲಿನ ಬಿರುಕುಗಳು, ಅರಣ್ಯ ಇಲಾಖೆಯ ಕಂದಕ, ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾಮಗಾರಿ, ಅನಗತ್ಯ ಮಾನವ ಹಸ್ತಕ್ಷೇಪ, ಸಾಮಾನ್ಯಕ್ಕಿಂತ ಅಧಿಕ ಮಳೆ ಇವುಗಳಿಂದಾಗಿಯೇ ಆಗಸ್ಟ್ ನಲ್ಲಿ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದಿದೆ ಎನ್ನುವ ಅಂಶವನ್ನು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರು ಬಹಿರಂಗಪಡಿಸಿದ್ದಾರೆ.
ದುರ್ಘಟನೆಗೆ ಕಾರಣವಾದ ಅಂಶಗಳು
ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಪ್ಪಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಜಿಲ್ಲಾಧಿಕಾರಿಗೆ ನೀಡಲಾದ ವರದಿಯಲ್ಲಿ ಸಲಹೆ ನೀಡಲಾಗಿದೆ. ತಲಕಾವೇರಿಯಲ್ಲಿ ಕಳೆದ ಅಕ್ಟೋಬರ್ 6 ರಂದು ಸಂಭವಿಸಿದ ಗಜಗಿರಿ ಬೆಟ್ಟ ಕುಸಿತ ಪ್ರದೇಶಕ್ಕೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರಾದ ಕಪಿಲ್ ಸಿಂಗ್ ಹಾಗೂ ಕಮಲ್ ಕುಮಾರ್ ಆಕ್ಟೋಬರ್ 14 ಮತ್ತು 15 ರಂದು ಭೇಟಿ ನೀಡಿದ್ದರು. ಜಿಲ್ಲಾಧಿಕಾರಿಗಳ ಕೋರಿಕೆ ಹಿನ್ನೆಲೆಯಲ್ಲಿ ಆಗಮಿಸಿದ್ದ ಅವರು, ಸ್ಥಳದಲ್ಲಿ ವಿಸ್ತೃತ ಅಧ್ಯಯನ ನಡೆಸಿ 16 ಪುಟಗಳ ಪ್ರಾಥಮಿಕ ವರದಿ ಸಲ್ಲಿಸಿದ್ದು, ದುರ್ಘಟನೆಗೆ ಕಾರಣವಾದ ಅಂಶಗಳು, ಈ ಹಿಂದಿನ ಇತಿಹಾಸ, ಮುಂದೆ ಇಂತಹ ದುರಂತಗಳು ಸಂಭವಿಸದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರ ಮಾಹಿತಿ ನೀಡಿದ್ದಾರೆ.
2 ಕಿಮೀ ದೂರದ ತನಕ ಭೂಕುಸಿತ ವಿಸ್ತಾರ
ತಲಕಾವೇರಿಯಲ್ಲಿ ಅಕ್ಟೋಬರ್ 6ರಂದು ಸಂಭವಿಸಿದ ಭೂಕುಸಿತಕ್ಕೂ ಮೊದಲು 3 ಬಾರಿ ಅಲ್ಲಿ ಇಂಥಹದ್ದೇ ಘಟನೆಗಳು ನಡೆದಿದೆ. ಮೊದಲ ಭೂಕುಸಿತ 2007ರ ಜೂ.30ಕ್ಕೆ ಸಂಭವಿಸಿದರೆ, 2ನೆಯದ್ದು 2018ರಲ್ಲಿ ಹಾಗೂ ಮೂರನೆಯದ್ದು 2019ರ ಆ.19ಕ್ಕೆ ನಡೆದಿದೆ. ಇದರ ಮುಂದುವರಿದ ಭಾಗವಾಗಿ ಈ ವರ್ಷ ಆ.6ಕ್ಕೆ ಗಜಗಿರಿ ಬೆಟ್ಟ ಕುಸಿದಿದೆ ಎನ್ನುವ ಅಂಶವನ್ನು ತಜ್ಞರು ವರದಿಯಲ್ಲಿ ವಿವರಿಸಿದ್ದಾರೆ. ಮುಂಜಾನೆಯ 2.30ರ ಸಮಯದಲ್ಲಿ 45 ಮೀ. ಎತ್ತರದಿಂದ 50 ಮೀ. ಅಗಲದಲ್ಲಿ 160 ಮೀ. ಉದ್ದಕ್ಕೆ ಭೂಕುಸಿತ ಆಗಿದ್ದು, 2 ಕಿಮೀ ದೂರದ ತನಕ ಭೂಕುಸಿತ ವಿಸ್ತಾರ ಆಗಿದೆ. ಘಟನೆಯಲ್ಲಿ ತಲಕಾವೇರಿಯ ಹಿರಿಯ ಅರ್ಚಕ ಟಿ.ಎಸ್. ನಾರಾಯಣಾಚಾರ್ ಸೇರಿ ಐವರು ಸಾವನ್ನಪ್ಪಿದ್ದು, 6 ಜಾನುವಾರು, 1 ನಾಯಿ ಕೂಡ ಮೃತಪಟ್ಟಿದೆ. 2 ಮನೆ, 1 ದನದ ಕೊಟ್ಟಿಗೆ ಮಣ್ಣಿನಡಿಗೆ ಸೇರಿದೆ. ಸ್ವಲ್ಪ ಅರಣ್ಯ ಪ್ರದೇಶಕ್ಕೂ ಹಾನಿಯಾಗಿರುವ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಅವೈಜ್ಞಾನಿಕ ನಿರ್ಮಾಣದಿಂದ ಬೆಟ್ಟ ದುರ್ಬಲ
ರಸ್ತೆ ನಿರ್ಮಾಣ ಸೇರಿ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಿತಿಮೀರಿದ ಮಾನವ ಹಸ್ತಕ್ಷೇಪ, ಅವೈಜ್ಞಾನಿಕ ನಿರ್ಮಾಣಗಳು ಬೆಟ್ಟವನ್ನು ದುರ್ಬಲಗೊಳಿಸಿದವು. ಕಳೆದ ವರ್ಷದ ಭೂ ಕುಸಿತ ಸಂದರ್ಭದಲ್ಲಿ ಬೆಟ್ಟದ ಮೇಲೆ ನಿರ್ಮಾಣವಾದ ಬಿರುಕುಗಳು, ಅರಣ್ಯ
ಇಲಾಖೆಯ ಕಂದಕಗಳ ಮೂಲಕ ನೀರು ಭೂಮಿಯೊಳಕ್ಕೆ ಇಳಿಯಿತು. ಭಾರಿ ಮಳೆಯಿಂದಲೂ ನೀರು ಭೂಮಿಗೆ ಸೇರಿ ಒತ್ತಡ ನಿರ್ಮಾಣವಾಯಿತು. ಹಳೆಯ ಭೂಕುಸಿತದ ಸಂದರ್ಭದಲ್ಲಿ ನಿರ್ಮಾಣ ಆಗಿದ್ದ ಬಿರುಕುಗಳು ಕೂಡ ಭೂಮಿಯೊಳಗೆ ನೀರು ಇಂಗಿಸಲು ಸಹಕಾರಿ ಆದವು. ಇದು ಕೂಡ ಭೂ ಕುಸಿತಕ್ಕೆ ಪ್ರಮುಖ ಕಾರಣ ಆಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನೀರು ಹರಿದು ಹೋಗುವಂತೆ ಚರಂಡಿ ವ್ಯವಸ್ಥೆ ಬೇಕು
ಈ ವ್ಯಾಪ್ತಿಯಲ್ಲಿ ಸುರಿಯುವ ಭಾರಿ ಮಳೆಯನ್ನು ತಡೆಯುವ ರೀತಿಯಲ್ಲಿ ಉತ್ತಮ ರಸ್ತೆ ನಿರ್ಮಾಣ ಆಗಬೇಕು. ಸರಾಗವಾಗಿ ನೀರು ಹರಿದು ಹೋಗುವಂತೆ ಚರಂಡಿ ವ್ಯವಸ್ಥೆ ಮಾಡಬೇಕು. ಬೆಟ್ಟದ ಮೇಲೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ತಡೆಗೋಡೆ ಕಟ್ಟುವ ಸಂದರ್ಭದಲ್ಲಿ ಆಳವಾದ ಮತ್ತು ಗಟ್ಟಿಯಾದ ತಳಪಾಯ ಹಾಕಬೇಕು. ಆಳಕ್ಕೆ ಬೇರಿಳಿಸುವ ಗಿಡ, ಮರಗಳನ್ನು ಬೆಳೆಸುವಂತಾಗಬೇಕು. ಬೆಟ್ಟದ ಮೇಲೆ ಬಿರುಕುಗಳು, ತೆರೆದ ಸ್ಥಳಗಳು ಕಂಡು ಬಂದರೆ ಅವುಗಳನ್ನು ನೀರು ಭೂಮಿಯೊಳಗೆ ಒಳ ಸೇರದಂತೆ ಕೂಡಲೇ ಮುಚ್ಚುವ ಕೆಲಸ ಆಗಬೇಕು ಎನ್ನುವ ಸಲಹೆ ನೀಡಿದ್ದಾರೆ.
Recommended Video
ಭೂಕುಸಿತ ಸಂಭವಿಸಿದ ದಿನ 478 ಮಿ.ಮೀ ಮಳೆ
ತಲಕಾವೇರಿ ವಿಭಾಗವು ಕೊಡಗಿನಲ್ಲೇ ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು, ಜಿಲ್ಲೆಯ ಸರಾಸರಿ ವಾರ್ಷಿಕ ಮಳೆಯ ಪ್ರಮಾಣ 80 ಇಂಚುಗಳಷ್ಟು ಇದ್ದರೆ, ತಲಕಾವೇರಿಯಲ್ಲಿ ವಾರ್ಷಿಕ 250 ಇಂಚುಗಳಷ್ಟು ಮಳೆ ಆಗುತ್ತದೆ. ಅಂದು ಭೂಕುಸಿತ ಸಂಭವಿಸಿದ ದಿನ 478 ಮಿ.ಮೀ ಮಳೆಯಾಗಿದ್ದು, ಇಡೀ ಗುಡ್ಡವೇ ಕುಸಿಯಲು ಕಾರಣವಾಯಿತು ಎಂದು ಭೂ ತಜ್ಞರು ಅಭಿಪ್ರಾಯ ದಾಖಲಿಸಿದ್ದಾರೆ. ಇನ್ನಾದರೂ ಸರ್ಕಾರ ಅವೈಜ್ಞಾನಿಕ ಗುಡ್ಡ ಅಗೆತವನ್ನು ನಿಲ್ಲಿಸಿದರೆ ಭೂಕುಸಿತವನ್ನು ತಪ್ಪಿಸಬಹುದಾಗಿದೆ.