ಮಡಿಕೇರಿಯಲ್ಲಿ ಭೂಕುಸಿತಕ್ಕೆ ಇಬ್ಬರು ಮಹಿಳೆಯರು ಬಲಿ, ಹೊಣೆಗಾರರು ಯಾರು?
ಮಡಿಕೇರಿ, ನವೆಂಬರ್.07: ಆಗಸ್ಟ್ನಲ್ಲಿ ಸುರಿದ ಮಹಾಮಳೆಯಿಂದಾಗಿ ಮಡಿಕೇರಿ ನಗರ ಅಕ್ಷರಶಃ ನರಕವಾಗಿ ಪರಿಣಮಿಸಿತ್ತು. ಯಾವಾಗ ಎಲ್ಲಿ ಭೂ ಕುಸಿತ ಸಂಭವಿಸಿ ಬಿಡುತ್ತದೆಯೋ ಎಂಬ ಭಯದಲ್ಲೇ ಜನ ಬದುಕುತ್ತಿದ್ದರು. ಈಗ ಮಳೆ ಕಡಿಮೆಯಾಗಿದ್ದು, ಜನ ಕೂಡ ಆ ಕರಾಳ ದಿನವನ್ನು ಮರೆತು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.
ಆದರೆ ಮಳೆಯಿಂದಾಗಿ ಮಣ್ಣು ಸಂಪೂರ್ಣ ಸಡಿಲಗೊಂಡಿದ್ದು, ಮೊದಲಿನಂತೆ ನೆಲವನ್ನು ಅಗೆದರೆ ಕುಸಿದು ಬೀಳುವ ಅಪಾಯ ತಿಳಿದಿದ್ದರೂ ಜನ ಎಚ್ಚೆತ್ತುಕೊಳ್ಳದ ಕಾರಣ ಇದೀಗ ಎರಡು ಜೀವ ಬಲಿಯಾಗಿದೆ.
ಕೊಡಗಿನಲ್ಲಿ ಕಾಡು ಕುರಿ ಎಂದುಕೊಂಡು ತನ್ನ ಜೊತೆಯಲ್ಲಿ ಬಂದವನಿಗೆ ಗುಂಡಿಕ್ಕಿದ!
ಮಡಿಕೇರಿ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪಿ.ರಮೇಶ್ ಎಂಬುವವರಿಗೆ ಸೇರಿದ ಮನೆಯ ಮುಂಭಾಗ ತಡೆಗೋಡೆ ನಿರ್ಮಿಸಲು ಅಡಿಪಾಯ ತೋಡುತ್ತಿದ್ದ ಸಂದರ್ಭ ಮಣ್ಣು ಕುಸಿದು ಬಿದ್ದ ಪರಿಣಾಮ ಕಾರ್ಮಿಕರಿಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಸಾವನ್ನಪ್ಪಿದವರು ಹಾಸನದ ಬೇಲೂರು ಸಮೀಪವಿರುವ ಯಲಹಂಕದ ನಿವಾಸಿ ಗೌರಮ್ಮ ಮತ್ತು ಚಿಕ್ಕಮಗಳೂರುವಿನ ಮಾದೇರಹಳ್ಳಿ ನಿವಾಸಿ ಯಶೋಧ ಎಂದು ತಿಳಿದು ಬಂದಿದೆ. ಆದರೆ ಗೌರಮ್ಮನ ಪತಿ ಮಾಷ ಬೋವಿಯನ್ನು ರಕ್ಷಿಸಲಾಗಿದ್ದು, ಗಂಭೀರ ಗಾಯಗೊಂಡಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಮೇಶ್ ಅವರು ಮನೆಗೆ ತಡೆಗೋಡೆ ನಿರ್ಮಿಸುತ್ತಿದ್ದು, ಈ ಕೆಲಸವನ್ನು ಸುಮಾರು ಆರು ಮಂದಿ ಕಾರ್ಮಿಕರು ಮಾಡುತ್ತಿದ್ದರು ಎನ್ನಲಾಗಿದೆ. ತಡೆಗೋಡೆ ನಿರ್ಮಿಸುವ ಸಲುವಾಗಿ ಅಡಿಪಾಯ ಹಾಕಲು ಭೂಮಿಯನ್ನು ಅಗೆಯುತ್ತಿದ್ದರು. ಈ ವೇಳೆ ಗಂಡಸರು ಅಗೆಯುತ್ತಿದ್ದರೆ ಮಹಿಳೆಯರು ಮಣ್ಣನ್ನು ತೆಗೆದು ಹೊರಗೆ ಹಾಕುತ್ತಿದ್ದರು ಎನ್ನಲಾಗಿದೆ.
ಮಂಟಿಬಿಳಗುಲಿಯಲ್ಲಿ ಸ್ನಾನಕ್ಕೆಂದು ಕೆರೆಗಿಳಿದ ಯುವಕರು ಶವವಾದರು
ತಡೆಗೋಡೆ ನಿರ್ಮಿಸುವ ಸ್ಥಳದಲ್ಲಿ ಅಂದಾಜು 20 ಅಡಿ ಎತ್ತರದ ಬರೆಯಿದ್ದು ಮಣ್ಣು ತೆಗೆದ ಕಾರಣ ಭೂಮಿ ಸಡಿಲಗೊಂಡಿದ್ದು, ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆಯೇ ಇದ್ದಕ್ಕಿದ್ದಂತೆ ಬರೆ ಕುಸಿದಿದೆ. ಈ ಪರಿಣಾಮ ಅದರಡಿಯಲ್ಲಿ ಸಿಲುಕಿ ಗೌರಮ್ಮ ಮತ್ತು ಯಶೋಧ ಸಾವನ್ನಪ್ಪಿದರೆ, ಗೌರಮ್ಮನ ಗಂಡ ಮಾಷ ಬೋವಿ ಮತ್ತು ನಂಜುಂಡ ಎಂಬಿಬಬ್ರು ಮಣ್ಣಿನಡಿಯಲ್ಲಿ ಸಿಲುಕಿದ್ದು, ಆತನನ್ನು ರಕ್ಷಿಸಿ ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ.
ಗಂಭೀರ ಗಾಯಗೊಂಡಿರುವ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಎಸ್ಪಿ ಡಾ. ಸುಮನ, ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ನಗರ ಸಭಾ ಪೌರಾಯುಕ್ತ ರಮೇಶ್ ಆಗಮಿಸಿ ಪರಿಶೀಲನೆ ನಡೆಸಿದರು. ಮಡಿಕೇರಿ ನಗರ ಪೊಲೀಸರು ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಮನೆ ಮಾಲೀಕ ರಮೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.