ದೆಹಲಿ ಗಣರಾಜ್ಯೋತ್ಸವ ಪೆರೇಡ್ಗೆ ಕೊಡಗಿನ ಇಬ್ಬರು ಆಯ್ಕೆ
ಮಡಿಕೇರಿ, ಡಿಸೆಂಬರ್ 28: ದೆಹಲಿಯಲ್ಲಿ ಜನವರಿ 26 ರಂದು ನಡೆಯುವ ರಾಷ್ಟ್ರಮಟ್ಟದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕೊಡಗು ಜಿಲ್ಲೆಯ ಇಬ್ಬರು ಎನ್ಸಿಸಿ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಸೀನಿಯರ್ ವಿಭಾಗದಿಂದ ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಇಬ್ಬರು ಕೆಡೆಟ್ಗಳು ಆಯ್ಕೆಯಾಗಿದ್ದಾರೆ.
ಎಂ.ಎಸ್.ಇಂದ್ರಜಿತ್ ಮತ್ತು ಸಿ.ಟಿ ಯಶಸ್ವಿ ಅವರು ಕೆ.ಎಂ.ಕಾರ್ಯಪ್ಪ ಕಾಲೇಜಿನ ಎನ್ಸಿಸಿ ಅಧಿಕಾರಿಯಾದ ಮೇಜರ್ ಡಾ.ರಾಘವ್ ಬಿ. ಹಾಗೂ 19ನೇ ಕರ್ನಾಟಕ ಬೆಟಾಲಿಯನ್ನ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆಯ್ಕೆಯಾಗಿದ್ದು, ಇವರು ಕರ್ನಾಟಕ-ಗೋವಾ ಡೈರೆಕ್ಟರೇಟ್ನ್ನು ಪ್ರತಿನಿಧಿಸಿದ 26 ಕೆಡೆಟ್ಗಳ ಪೈಕಿ ಕೇವಲ ಇಬ್ಬರಾಗಿದ್ದು, ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಭಾರತೀಯ ಸೇನೆ ನೇಮಕಾತಿ: ಬೆಳಗಾವಿ ವಲಯದಿಂದ ಅರ್ಜಿ ಆಹ್ವಾನ
ಪ್ರಸ್ತುತ ದ್ವಿತೀಯ ಬಿಬಿಎ ವಿದ್ಯಾರ್ಥಿಯಾದ ಇಂದ್ರಜಿತ್ ಅವರು ತಾಳತ್ ಮನೆಯ ನಿವಾಸಿಯಾದ ಎಂ.ಜಿ.ಸುಬ್ರಮಣಿ ಮತ್ತು ಸುಜಾತ ದಂಪತಿಗಳ ಪುತ್ರರಾಗಿದ್ದಾರೆ. ದ್ವಿತೀಯ ಬಿಎಸ್ಸಿಯ ಯಶಸ್ವಿ ಅವರು ಪಾರಾಣೆಯ ಕೊಣಂಜಗೇರಿ ನಿವಾಸಿಗಳಾದ ಚೌವ್ವಂಡ ಮನು ತಮ್ಮಯ್ಯ ಮತ್ತು ಸಮಿತ ದಂಪತಿ ಪುತ್ರಿಯಾಗಿದ್ದಾರೆ.
ಹಲವು ವರ್ಷಗಳಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಿಂದ ನಿರಂತರವಾಗಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಕೆಡೆಟ್ ಗಳು ಆಯ್ಕೆಯಾಗುತ್ತಿರುವುದಲ್ಲದೆ, ಸೇನೆಯ ಉನ್ನತ ಹುದ್ದೆಗಳನ್ನೊಳಗೊಂಡು, ವಿವಿಧ ಸ್ಥಾನಗಳಿಗೆ ಆಯ್ಕೆಯಾಗುತ್ತಿರುವುದಕ್ಕೆ ಕಾಲೇಜಿನ ಅಧ್ಯಾಪಕ ಅಧ್ಯಾಪಕೇತರ ವೃಂದ ಹರ್ಷ ವ್ಯಕ್ತಪಡಿಸಿದ್ದಾರೆ.
ಇದೀಗ ಈ ಇಬ್ಬರು ಕೆಡೆಟ್ಗಳು ಅದರ ಸರದಿಯಲ್ಲಿರುವುದಕ್ಕೆ ಕಾಲೇಜಿನ ಎಲ್ಲರ ಪರವಾಗಿ ಪ್ರಾಂಶುಪಾಲರಾದ ಡಾ.ಚೌರೀರ ಜಗತ್ ತಿಮ್ಮಯ್ಯ ಅವರು ಅಭಿನಂದನೆ ತಿಳಿಸಿದ್ದಾರೆ. ಜೊತೆಗೆ ಕೊಡಗು ಜಿಲ್ಲೆಗೂ ಇದು ಹೆಮ್ಮೆಯ ವಿಷಯವಾಗಿದೆ ಎಂದಿದ್ದಾರೆ.