ವೀಕೆಂಡ್ ಪಿಕ್ನಿಕ್ ಬಂದಿದ್ದ ಯುವಕ-ಯುವತಿ ಜಲಪಾತದಿಂದ ಬಿದ್ದು ಸಾವು
ಮಡಿಕೇರಿ, ಏಪ್ರಿಲ್ 18: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಳಿ ಜಲಪಾತಕ್ಕೆ ಬಿದ್ದು ಇಬ್ಬರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಭಾನುವಾರ ನಡೆದಿದೆ.
ಮೃತರನ್ನು ಶಶಿಕುಮಾರ್ (32) ಮತ್ತು ದಿವ್ಯ (20) ಎಂದು ಗುರುತಿಸಲಾಗಿದೆ. ಮೃತ ಶಶಿಕುಮಾರ್ ಸುಂಟಿಕೊಪ್ಪದ ಗುತ್ತಿಗೆದಾರ ರಾಮ ಎಂಬುವವರ ಪುತ್ರನಾಗಿದ್ದು, ಅನೇಕ ವರ್ಷಗಳಿಂದ ಬೆಂಗಳೂರಿನ ಶ್ರೀರಾಂಪುರದಲ್ಲಿ ನೆಲೆಸಿದ್ದಾರೆ. ತನ್ನ ಪತ್ನಿಯ ಜತೆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ರಜೆಗೆ ಊರಿಗೆ ಬಂದಿದ್ದ ಈತ ತನ್ನ ಹತ್ತಿರದ ಸಂಬಂಧಿಯೇ ಆಗಿರುವ ಸುಂಟಿಕೊಪ್ಪದ ಸೂಪರ್ ಮಾರ್ಕೆಟ್ನಲ್ಲಿ ಕೆಲಸ ಮಾಡುತ್ತಿರುವ ದಿವ್ಯಾ ಹಾಗೂ ಇತರ ನಾಲ್ವರ ಜತೆ ಜಲಪಾತ ವೀಕ್ಷಣೆಗೆ ಹೋಗಿದ್ದರು.
ಸೋಮವಾರಪೇಟೆ ತಾಲೂಕಿನ ಮಲ್ಲಳ್ಲಿ ಜಲಪಾತದಲ್ಲಿ ಇಂದು ಬೆಳಗ್ಗೆ 9.30 ಗಂಟೆ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ವೀಕೆಂಡ್ ಹಿನ್ನೆಲೆಯಲ್ಲಿ ಆರು ಜನರ ತಂಡ ಜಲಪಾತಕ್ಕೆ ಪ್ರವಾಸಕ್ಕೆ ಬಂದಿದ್ದರು. ಆಗ ಆಕಸ್ಮಿಕವಾಗಿ ಜಲಪಾತದ ಕೆಳಗೆ ಬೀಳುತ್ತಿದ್ದ ದಿವ್ಯಾಳನ್ನು ರಕ್ಷಿಸಲು ಹೋಗಿ ಶಶಿಕುಮಾರ್ ಸಹ ಮೃತಪಟ್ಟಿದ್ದಾರೆ. ಅನಿರೀಕ್ಷಿತ ಸಾವಿನಿಂದ ಎರಡು ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಮೃತ ದೇಹಗಳನ್ನು ಮುಳುಗು ತಜ್ಞರು ಹಾಗೂ ಗ್ರಾಮಸ್ಥರು ನೀರಿನಿಂದ ಹೊರ ತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಸೋಮವಾರಪೇಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Recommended Video
ಕಳೆದ ೫ ವರ್ಷಗಳಲ್ಲಿ ಮಲ್ಲಳ್ಳಿಯಲ್ಲಿ ಕೇವಲ ತಮ್ಮ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ ಹತ್ತಕ್ಕಿಂತ ಹೆಚ್ಚಾಗಿದೆ. ಎಚ್ಚರದಿಂದಿರಿ, ನೀರಿಗೆ ಇಳಿಯಲು ಹೋಗಬೇಡಿ ಎಂದು ಬೋರ್ಡ್ ಅಳವಡಿಸಿದ್ದರೂ ಸಹ ಪ್ರವಾಸಿಗರು ಕ್ಯಾರೇ ಮಾಡುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಜಲಪಾತಕ್ಕೆ ಬಿದ್ದು ಮೃತಪಟ್ಟಿರುವವರಲ್ಲಿ ಬಹುತೇಕರು ಯುವ ವಯಸ್ಸಿನವರೇ ಆಗಿದ್ದಾರೆ.