ಕೊಡಗಿನಲ್ಲಿ ಕೊಂಚ ತಗ್ಗಿದೆ ಮಳೆ; ಮಣ್ಣಿನಡಿ ಸಿಲುಕಿದ್ದ ಎರಡು ಮೃತದೇಹ ಪತ್ತೆ
ಮಡಿಕೇರಿ, ಆಗಸ್ಟ್ 13: ಕೊಡಗು ಜಿಲ್ಲೆಯಲ್ಲಿ ಮಳೆ ಕೊಂಚ ಕಡಿಮೆಯಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೀರಿನ ಮಟ್ಟವೂ ಇಳಿಯುತ್ತಿದೆ. ಆದರೂ ರಸ್ತೆ ಸಂಪರ್ಕ ಕಡಿತ ಹಾಗೂ ಶಾಲೆಗಳಲ್ಲಿ ಪರಿಹಾರ ಕೇಂದ್ರಗಳನ್ನು ತೆರೆದಿರುವುದರಿಂದ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಆಗಸ್ಟ್ 13 ಮತ್ತು 14ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ.
ಇನ್ನೊಂದೆಡೆ ಪ್ರವಾಹದ ನೀರಿನ ಮಟ್ಟ ಕಡಿಮೆಯಾಗಿದ್ದು, ಮಣ್ಣಿನಲ್ಲಿ ಸಿಲುಕಿಕೊಂಡಿದ್ದ ಎರಡು ಮೃತದೇಹಗಳು ಪತ್ತೆಯಾಗಿವೆ.
ಚಿಕ್ಕಮಗಳೂರು, ಮಡಿಕೇರಿಯಲ್ಲಿ ಮುಂದುವರೆದ ಮಳೆ: 79 ಜಿಲ್ಲೆಗಳು ಪ್ರವಾಹ ಪೀಡಿತ
ಆಗಸ್ಟ್ 9ರಂದು ತೋರಾ ಗ್ರಾಮದಲ್ಲಿ ಮಣಿಪಾರೆ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ್ದ 8 ಮಂದಿಯಲ್ಲಿ ಪ್ರಭು ಎಂಬುವರ ಪತ್ನಿ ಅನುಸೂಯ (45) ಅವರ ಮೃತದೇಹವನ್ನು ಮಣ್ಣಿನಿಂದ ಹೊರತೆಗೆಯಲಾಗಿದೆ. ನಾಪತ್ತೆಯಾಗಿರುವ ಇತರ 7 ಮಂದಿ ಪತ್ತೆಗಾಗಿ ಎನ್ಡಿಆರ್ ಎಫ್, ಪೊಲೀಸ್ ಹಾಗೂ ಸೇನಾ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಪ್ರಭು ಅವರ ತಾಯಿ ದೇವಕ್ಕಿ, ಮಕ್ಕಳಾದ ಅಮೃತಾ ಮತ್ತು ಆದಿತ್ಯ, ಹರೀಶ್ ಎಂಬುವರ ಕುಟುಂಬ ಸದಸ್ಯರಾದ ಶಂಕರ, ಅಪ್ಪು ಮತ್ತು ಲೀಲಾ, ಗೃಹಿಣಿ ವೀಣಾ ಅವರ ಪತ್ತೆಕಾರ್ಯ ನಡೆಯುತ್ತಿದೆ.
ಮಡಿಕೇರಿ ಸಮೀಪ ಕಟ್ಟೆಮಾಡು ಗ್ರಾಮದ ಪರಂಬು ಪೈಸಾರಿಯಲ್ಲಿ ಮನೆಯೊಂದರಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಪ್ರವಾಹದಲ್ಲಿ ಮನೆ ಮುಳುಗಡೆಯಾಗಿದ್ದು, ನೀರಿನ ಹರಿವು ಕಡಿಮೆಯಾಗಿರುವುದರಿಂದ ಮೃತದೇಹ ಕಂಡು ಬಂದಿದೆ. ಸತ್ತವರನ್ನು ಕುಜ್ಞಣ್ಣ ಎಂದು ಗುರುತಿಸಲಾಗಿದೆ.
ಕೊಡಗಿನ ಭೀಕರ ಮಳೆಗೆ 7 ಮಂದಿ ಬಲಿ, 8 ಮಂದಿ ಕಣ್ಮರೆ
ಲಘು ವಾಹನಗಳಿಗೆ ಅವಕಾಶ: ಮಡಿಕೇರಿ-ವೀರಾಜಪೇಟೆ ರಾಜ್ಯ ಹೆದ್ದಾರಿಯ ಬೇತ್ರಿ ಸೇತುವೆಯಲ್ಲಿ ನೀರಿನ ಪ್ರಮಾಣ ತಗ್ಗಿದ್ದು, ಸೇತುವೆಯಲ್ಲಿ ಸಣ್ಣ ಪ್ರಮಾಣದ ಬಿರುಕು ಕಾಣಿಸಿಕೊಂಡಿರುವುದರಿಂದ ಲಘು ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.