ಕೊಡಗಿನಲ್ಲಿ ಜಿಂಕೆ ಬೇಟೆ: ಇಬ್ಬರ ಬಂಧನ
ಮಡಿಕೇರಿ, ಏಪ್ರಿಲ್ 28: ವಿರಾಜಪೇಟೆ ತಾಲ್ಲೂಕು ಕರಡಿಗೋಡು ಗ್ರಾಮದಲ್ಲಿ ಜಿಂಕೆಯನ್ನು ಬೇಟೆಯಾಡಿ, ಮಾಂಸ ವ್ಯಾಪಾರ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ವಿರಾಜಪೇಟೆ ಅರಣ್ಯ ವಿಭಾಗದ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕರಡಿಗೋಡು ಗ್ರಾಮದ ಹೊಸಗದ್ದೆ ಎಂಬ ಜಾಗದಲ್ಲಿ ರಾಜೇಶ ಹಾಗೂ ಹರೀಶ್ ರವರ ಮನೆಯಲ್ಲಿ ಬೇಟೆಯಾಡಿದ ಜಿಂಕೆಯ ಮಾಂಸವನ್ನು ದಾಸ್ತಾನು ಮಾಡಿರುವ ಖಚಿತ ಮಾಹಿತಿ ಮೇರೆಗೆ ವಿರಾಜಪೇಟೆ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ರವರ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಳಾದ ರೋಶಿಣಿ ರವರ ತಂಡ ಕಾರ್ಯಾಚರಣೆ ನಡೆಸಿದೆ.
ಹಸಿ ಮಾಂಸ, ಬೇಯಿಸಿದ ಮಾಂಸ ಹಾಗೂ ಜಿಂಕೆಯ ಕಾಲುಗಳನ್ನು ಹಾಗೂ ಬೈಕ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಬ್ಬರೂ ಅರೋಪಿಗಳಾದ ಕರಡಿಗೋಡು ಗ್ರಾಮದ ಹರೀಶ್ ಪಿ.ಕೆ (48) ಮತ್ತು ಮಣಿ (56) ಯನ್ನು ಅರಣ್ಯಾಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ವಿರಾಜಪೇಟೆ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ದೀಲಿಪ್ ಕುಮಾರ್, ಅಮ್ಮತ್ತಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಶಿವಕುಮಾರ್ ಹಾಗೂ ಇತರರು ಇದ್ದರು.