ಕೊಡಗಿನಲ್ಲೀಗ ಪ್ರವಾಸೋದ್ಯಮದ ಅಭಿವೃದ್ಧಿಯತ್ತ ಚಿತ್ತ
ಮಡಿಕೇರಿ, ಮೇ 15: ಪ್ರವಾಸೋದ್ಯಮದಿಂದ ಆರ್ಥಿಕ ಚೇತರಿಕೆ ಕಂಡುಕೊಂಡಿದ್ದ ಕೊಡಗು, ಎರಡು ವರ್ಷದ ಹಿಂದೆ ಸಂಭವಿಸಿದ ಭೂಕುಸಿತದಂತಹ ಪ್ರಕೃತಿ ವಿಕೋಪದಿಂದ ಪ್ರವಾಸಿಗರಿಲ್ಲದೆ ಭಾರೀ ನಷ್ಟ ಅನುಭವಿಸುವಂತಾಗಿತ್ತು. ಎಲ್ಲವೂ ಸರಿಹೋಗುತ್ತಿದೆ ಎಂದುಕೊಳ್ಳುವಾಗಲೇ ಕೊರೊನಾ ಹೊಡೆತ ನೀಡಿದೆ.
ಜಿಲ್ಲೆಯಲ್ಲಿ ಯಾವುದೇ ಉದ್ದಿಮೆಗಳಿಲ್ಲ. ಕೃಷಿಯನ್ನೇ ನಂಬಿಕೊಂಡು ಬದುಕುತ್ತಿದ್ದ ಬೆಳೆಗಾರರಿಗೆ ನೆರವಿಗೆ ಬಂದಿದ್ದು ಪ್ರವಾಸೋದ್ಯಮ. ಹೊರ ರಾಜ್ಯ, ಹೊರ ದೇಶಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇತ್ತ ಬರತೊಡಗಿದ್ದರಿಂದ ಪ್ರವಾಸೋದ್ಯಮ ಚೇತರಿಕೆ ಕಂಡುಕೊಂಡಿತು. ಅದರ ಸುತ್ತಲೂ ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳಂತಹ ಉದ್ಯಮಗಳು ಬೆಳೆದು ನಿಂತವು.
ಮತ್ತೆ ಪ್ರವಾಸೋದ್ಯಮ ಗಟ್ಟಿಗೊಳ್ಳುವ ನಿರೀಕ್ಷೆ
ರಸ್ತೆ ಬದಿಯಿಂದ ಆರಂಭವಾಗಿ ಮಹಲ್ ಗಳ ತನಕ ವ್ಯಾಪಾರೋದ್ಯಮ ಆರಂಭವಾದವು. ಹೊರಗಿನಿಂದ ಬರುವ ಪ್ರವಾಸಿಗರನ್ನೇ ಆಶ್ರಯಿಸಿ ಕೆಲವೊಂದು ಉದ್ಯಮ ಸ್ಥಾಪನೆಯಾದವು. ಜತೆಜತೆಗೆ ಕೆಲವರು ಒಂದಷ್ಟು ಬಂಡವಾಳವನ್ನು ಸುರಿದು ಹೊಸ ಉದ್ಯಮಗಳನ್ನು ಆರಂಭಿಸಿದರು. ಅವು ಪ್ರಗತಿಯ ಹಂತದಲ್ಲಿರುವಾಗಲೇ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳು ನಡೆದವು. ಅದನ್ನು ನಿಭಾಯಿಸಿ ಹೇಗೋ ಮೇಲೇಳುವ ಎನ್ನುವಾಗಲೇ ಕೊರೊನಾ ಅಡರಿಕೊಂಡು ಎಲ್ಲವೂ ಮೇಲೆ ಕೆಳಗು ಮಾಡಿದೆ. ಆದರೂ ಎಲ್ಲವೂ ಸರಿ ಹೋಗಿ ಕೊಡಗಿನಲ್ಲಿ ಮತ್ತೆ ಪ್ರವಾಸೋದ್ಯಮ ಗಟ್ಟಿಗೊಳ್ಳಬಹುದೆಂಬ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದಾರೆ.
ಲಾಕ್ಡೌನ್ ಮಧ್ಯೆ ಕೊಡಗಿನಲ್ಲಿ ಮಕ್ಕಳೊಂದಿಗೆ ರಾಣಿಯ ಸ್ವಚ್ಛಂದ ತಿರುಗಾಟ!
ಈ ಕುರಿತಂತೆ ಮಾತನಾಡಿರುವ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ಅವರು, ಕೊರೊನಾ 19ನಿಂದಾಗಿ ಪ್ರವಾಸೋದ್ಯಮ ಕ್ಷೇತ್ರ ಸಂಕಷ್ಟಕ್ಕೆ ತುತ್ತಾಗಿದೆ. ಆದರೆ ಮುಂದಿನ ದಿನಗಳಲ್ಲಿ ನಿಯಂತ್ರಣಕ್ಕೆ ಬಂದು ಪ್ರವಾಸೋದ್ಯಮ ಗರಿಗೆದರಲಿದ್ದು ಅದಕ್ಕೆ ಪೂರಕ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕೊಡಗಿನಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿ
ಜತೆಗೆ ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳ ವಿವರಗಳ ಮಾಹಿತಿ ನೀಡಿದ್ದು, ಮಡಿಕೇರಿಯ ರಾಜಾಸೀಟ್ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಯೋಜನೆ, 2017-18ರ ಕಾಮಗಾರಿಯ ಅಂದಾಜು ಮೊತ್ತ ರೂ. 455 ಲಕ್ಷ ಆಗಿದ್ದು, ಕಾಮಗಾರಿಯ ನಿರ್ವಹಣಾ ಸಂಸ್ಥೆ ಲೋಕೋಪಯೋಗಿ ಇಲಾಖೆ ಮಡಿಕೇರಿ ಆಗಿದ್ದು, ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕೊಡಗು ಜಿಲ್ಲೆಯ ದುಬಾರೆ ಬಳಿ ಕಾವೇರಿ ನದಿ ತೀರದ ಬಳಿ ಪಾರ್ಕಿಂಗ್ ಸೌಲಭ್ಯ ಅಭಿವೃದ್ಧಿ 2016-17ರ ಕಾಮಗಾರಿಯ ಅಂದಾಜು ಮೊತ್ತ 102 ಲಕ್ಷ ರೂ. ಆಗಿದ್ದು, ಪ್ರಸ್ತುತ ಕಾಮಗಾರಿ ಪ್ರಗತಿಯಲ್ಲಿದೆ. ಸೋಮವಾರಪೇಟೆ ತಾಲೂಕು ದುಬಾರೆಯ ಬಳಿ ಕಾವೇರಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣ ಕಾಮಗಾರಿಯ ಅಂದಾಜು ಮೊತ್ತ 400 ಲಕ್ಷ ರೂ. ಆಗಿದ್ದು, 100 ಲಕ್ಷ ರೂ. ಬಿಡುಗಡೆಯಾಗಿದೆ. ಹೊಸದಾಗಿ 400 ಲಕ್ಷ ರೂ. ಗಳ ಅನುದಾನವನ್ನು ಬಿಡುಗಡೆ ಮಾಡಿ ಅನುದಾನವನ್ನು ಅರಣ್ಯ ಇಲಾಖೆಗೆ ನೀಡಿ ಅರಣ್ಯ ಇಲಾಖೆಯಿಂದ ಕಾಮಗಾರಿ ಕೈಗೊಳ್ಳಲು ತಿಳಿಸಲಾಗಿದೆ ಎಂದಿದ್ದಾರೆ.
ಕೊಡವ ಹೆರಿಟೇಜ್ ಸೆಂಟರ್ ಕಾಮಗಾರಿ
ಮಡಿಕೇರಿ ನಗರದ ಹೊರ ವಲಯದಲ್ಲಿ ಕೊಡವ ಹೆರಿಟೇಜ್ ಸೆಂಟರ್ ನಿರ್ಮಾಣ ಕಾಮಗಾರಿ 2013-14ರ ಅಂದಾಜು ಮೊತ್ತ 268 ಲಕ್ಷ ರೂ. ಆಗಿದೆ. 171.93 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಕಾಮಗಾರಿಯ ಆರ್ಥಿಕ ಬಿಡ್ ಪ್ರಗತಿಯಲ್ಲಿದೆ. ಜೊತೆಗೆ ಸೋಮವಾರಪೇಟೆ ತಾಲೂಕು ಮಲ್ಲಳ್ಳಿ ಜಲಪಾತ ಪ್ರದೇಶದಲ್ಲಿ ಮೆಟ್ಟಿಲುಗಳ ನಿರ್ಮಾಣ, ರೈಲಿಂಗ್ಸ್, ಪಾರ್ಕಿಂಗ್, ಮಳಿಗೆ ಮುಂತಾದ ಸೌಲಭ್ಯಗಳ ನಿರ್ಮಾಣ 2014-15ರ ಕಾಮಗಾರಿಯ ಅಂದಾಜು ಮೊತ್ತ 192.92 ಲಕ್ಷ ರೂ.ಗಳಾಗಿದ್ದು, 140 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ತಿಳಿಸಿದ್ದಾರೆ.
ಕೊಡಗು-ಮೈಸೂರು ನಡುವೆ ಸಂಚರಿಸುವವರಿಗೆ ಸೂಚನೆ
ಜಿಲ್ಲೆಯ ಕುಶಾಲನಗರದ ಮಡಿಕೇರಿ ರಸ್ತೆಯಲ್ಲಿರುವ ತಾವರೆ ಕೆರೆ ಹತ್ತಿರ ಪ್ರವಾಸಿ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಯ ಅಂದಾಜು ಮೊತ್ತ 50 ಲಕ್ಷ ರೂ. ಆಗಿದ್ದು, 20 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ.
ಪ್ರವಾಸಿಗರ ಸೆಳೆಯಲು ಸಾಧ್ಯನಾ?
ಇರ್ಪು ಜಲಪಾತ ಪ್ರವಾಸ ತಾಣದಲ್ಲಿ ಪ್ರವಾಸಿ ಸೌಲಭ್ಯ ಅಭಿವೃದ್ಧಿ 2015-16ರ ಕಾಮಗಾರಿಯ ಅಂದಾಜು ಮೊತ್ತ 50 ಲಕ್ಷ ರೂ. ಆಗಿದ್ದು, ಅರಣ್ಯ ಇಲಾಖೆಯು ಈ ಕಾಮಗಾರಿಯನ್ನು ನಿರ್ವಹಿಸುತ್ತಿದೆ. ಇರ್ಪು ಜಲಪಾತ ಪ್ರವಾಸಿ ತಾಣದಲ್ಲಿ ಪಾರ್ಕಿಂಗ್ ಹಾಗೂ ಉದ್ಯಾನವನ ನಿರ್ಮಾಣ 2018-19ರ ಕಾಮಗಾರಿಯ ಅಂದಾಜು ಮೊತ್ತ 50 ಲಕ್ಷ ರೂ. ಆಗಿದ್ದು ಅರಣ್ಯ ಇಲಾಖೆ ಕಾಮಗಾರಿಯನ್ನು ನಿರ್ವಹಿಸುತ್ತಿದೆ. ಈ ಅನುದಾನದಲ್ಲಿ 15 ಲಕ್ಷ ರೂ. ಗಳನ್ನು ಮಾತ್ರ ಉದ್ಯಾನವನ ಅಭಿವೃದ್ಧಿಗಾಗಿ ಬಳಸಲು ಅರಣ್ಯ ಇಲಾಖೆಯವರು ಕೋರಿದ್ದು, ಉಳಿದ 35 ಲಕ್ಷ ರೂ. ಗಳನ್ನು ದುಬಾರೆಯಲ್ಲಿ ಹೈಟೆಕ್ ಶೌಚಾಲಯವನ್ನು ನಿರ್ಮಿಸಲು ತೀರ್ಮಾನಿಸಿದ್ದು ಈಗಾಗಲೇ ಅನುದಾನವನ್ನು ಜಿಲ್ಲಾ ಅಭಿವೃದ್ಧಿ ಸಮಿತಿಗೆ ಬಿಡುಗಡೆ ಮಾಡಲು ಕೋರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಒಂದು ವೇಳೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ಅವರು ನೀಡಿರುವ ಮಾಹಿತಿಯಂತೆ, ಕಾಮಗಾರಿಗಳು ನಡೆದಿದ್ದೇ ಆದರೆ ಕೊಡಗಿನ ಪ್ರವಾಸಿ ತಾಣಗಳು ಇನ್ನಷ್ಟು ಅಭಿವೃದ್ಧಿಯಾಗುವುದರೊಂದಿಗೆ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಾಗ ಬಹುದೇನೋ? ಎಲ್ಲದಕ್ಕೂ ಕಾದು ನೋಡುವುದು ಅನಿವಾರ್ಯವಾಗಿದೆ.