ಕೊಡಗಿನಲ್ಲಿ 21 ದಿನಗಳ ಕಾಲ ಪ್ರವಾಸೋದ್ಯಮ ಬಂದ್
ಮಡಿಕೇರಿ, ಜೂನ್ 25: ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಪ್ರವಾಸಿಗರಿಗೆ ವಾಸ್ತವ್ಯ ಕಲ್ಪಿಸದಿರಲು ಜಿಲ್ಲಾ ಹೊಟೇಲ್, ರೆಸಾರ್ಟ್ ಹಾಗೂ ಹೋಂ ಸ್ಟೇಗಳು ತೀರ್ಮಾನ ಕೈಗೊಂಡಿವೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಹೊಟೇಲ್, ರೆಸಾರ್ಟ್ ಮತ್ತು ರೆಸ್ಟೋರೆಂಟ್ ಅಸೋಸಿಯೇಶನ್ ಅಧ್ಯಕ್ಷ ಬಿ. ಆರ್. ನಾಗೇಂದ್ರ ಪ್ರಸಾದ್ ಹಾಗೂ ಹೋಂ ಸ್ಟೇ ಅಸೋಸಿಯೇಷನ್ ನ ಅಧ್ಯಕ್ಷ ಬಿಜಿ ಅನಂತಶಯನ, ಸರ್ಕಾರ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಿದ್ದರೂ, ಜಿಲ್ಲೆಯ ಹಿತದೃಷ್ಟಿಯಿಂದ ಮುಂದಿನ 21 ದಿನಗಳ ಕಾಲ ಪ್ರವಾಸಿಗರಿಗೆ ವಾಸ್ತವ್ಯ ಒದಗಿಸದೆ ಇರಲು ತೀರ್ಮಾನಿಸಲಾಗಿದೆ. ಈ ತೀರ್ಮಾನಕ್ಕೆ ಸಂಸ್ಥೆಗಳ ಸದಸ್ಯರು ಕೈಜೋಡಿಸಬೇಕು ಎಂದು ಮನವಿ ನೀಡಿದರು.
ಇದ್ದಕ್ಕಿದ್ದಂತೆ ಹೆಚ್ಚಾದ ಪ್ರಕರಣ; ಕೊಡಗಿನ 6 ಪ್ರದೇಶಗಳು ಸೀಲ್ ಡೌನ್
ಜೂನ್ 8ರಿಂದ ಪ್ರವಾಸೋದ್ಯಮ ಕ್ಷೇತ್ರವನ್ನು ತೆರೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಮತಿ ನೀಡಿದ್ದರೂ, ಜಿಲ್ಲೆಯಲ್ಲಿ ಶೇ.98ರಷ್ಟು ರೆಸಾರ್ಟ್, ವಸತಿಗೃಹಗಳು ಹಾಗೂ ಹೋಂಸ್ಟೇಗಳು ಕಾರ್ಯನಿರ್ವಹಿಸದೆ ಜನತೆಯ ಭಾವನೆಗಳಿಗೆ ಬೆಲೆ ಕೊಟ್ಟಿದ್ದನ್ನು ಸ್ಮರಿಸಿದ ಅಧ್ಯಕ್ಷರು ಕಾನೂನಾತ್ಮಕವಾಗಿ ತಮ್ಮ ವೃತ್ತಿಯನ್ನು ಮುಂದುವರಿಸಬಹುದಾದರೂ ಜಿಲ್ಲೆಯ ಜನತೆಯ ಆರೋಗ್ಯ ದೃಷ್ಟಿಯಿಂದ ಈ ತೀರ್ಮಾನ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ನೋಂದಾಯಿತ ಸಂಸ್ಥೆಗಳು ಮುಚ್ಚಲಾದರೂ, ಅನಧಿಕೃತ ಹೋಂ ಸ್ಟೇ ಹಾಗೂ ವಸತಿಗೃಹಗಳು ಅತಿಥಿಗಳಿಗೆ ವಾಸ್ತವ್ಯ ನೀಡಿದರೆ ಆಯಾ ಊರಿನ ನಾಗರಿಕರು ಜಿಲ್ಲಾಡಳಿತದ ಗಮನ ಸೆಳೆಯುವಂತೆಯೂ ಮನವಿ ಮಾಡಿದ್ದು, ಪ್ರವಾಸೋದ್ಯಮ ಇಲಾಖೆ ಕೂಡ ಈ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಒತ್ತಾಯಿಸಿದ್ದಾರೆ.
ಕೆಲ ದಿನಗಳ ಕಾಲ ಪ್ರವಾಸೋದ್ಯಮ ಕ್ಷೇತ್ರವನ್ನು ಮುಚ್ಚಲು ಶಾಸಕ ಅಪ್ಪಚ್ಚು ರಂಜನ್ ಅವರು ಕೂಡ ದೂರವಾಣಿ ಮೂಲಕ ಮನವಿ ಮಾಡಿದ್ದರು. ವಾಸ್ತವ್ಯ ಕೇಂದ್ರಗಳು ಮುಂದಿನ 21 ದಿನಗಳವರೆಗೆ ಮುಚ್ಚಲ್ಪಟ್ಟರೂ ಸರ್ಕಾರ ಅನುಮತಿ ನೀಡಿರುವ ರೆಸ್ಟೋರೆಂಟ್ ಗಳು ಎಂದಿನಂತೆ ಸರ್ಕಾರದ ನಿಯಮಗಳನ್ನು ಪಾಲಿಸಿ ಕಾರ್ಯನಿರ್ವಹಿಸಲಿವೆ ಎಂದು ಹೇಳಿದ್ದಾರೆ.