ಗ್ರಾಮ ಪಂಚಾಯತ್ ಮಾಸಿಕ ಸಭೆಯಲ್ಲಿ ಸದಸ್ಯನ ಅಂಗಿ ಹರಿದ ಅಧ್ಯಕ್ಷೆ
ಕೊಡಗು, ಜನವರಿ 21: ಗ್ರಾಮ ಪಂಚಾಯಿತಿ ಮಾಸಿಕ ಸಭೆ ನಡೆಯುವಾಗ ಅಧ್ಯಕ್ಷೆ ಮತ್ತು ಸದಸ್ಯನ ನಡುವೆ ಮಾತಿನ ಚಕಮಕಿ ತಾರಕಕ್ಕೇರಿ ಅಧ್ಯಕ್ಷೆಯು ಸದಸ್ಯನ ಅಂಗಿಯನ್ನು ಹರಿದು ಹಾಕಿದ ಘಟನೆ ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಈ ಹಿಂದಿನ ಸಭೆಯ ನಡಾವಳಿಗಳನ್ನು ಕಾರ್ಯರೂಪಕ್ಕೆ ತರದಿರುವ ಬಗ್ಗೆ ಸಭೆಯಲ್ಲಿ ಕೆಲವು ಸದಸ್ಯರು ಅಧ್ಯಕ್ಷೆಯ ವಿರುದ್ಧ ಆರೋಪ ಮಾಡಿದ್ದಾರೆ. ಸಭೆಯನ್ನು ಸ್ಥಗಿತಗೊಳಿಸುವ ಸಂಬಂಧ ಚರ್ಚೆಗಳು ನಡೆಯುತ್ತಿರುವ ವೇಳೆ ಪಂಚಾಯಿತಿ ಅಧ್ಯಕ್ಷೆ ಭವ್ಯ ಮತ್ತು ಸದಸ್ಯ ಹರೀಶ್ ನಡುವೆ ಮಾತಿನ ಚಕಮಕಿ ನಡೆದಿದೆ.
ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ 40 ವರ್ಷ ಜೈಲು
ಇದೇ ಸಂದರ್ಭ ಉದ್ವೇಗಕ್ಕೆ ಒಳಗಾದ ಅಧ್ಯಕ್ಷೆ ಭವ್ಯ ಅವರು, ಹರೀಶ್ ಅವರ ಅಂಗಿಗೆ ಕೈ ಹಾಕಿದ್ದಾರೆ. ಸದಸ್ಯ ಹರೀಶ್ ಏರುಧ್ವನಿಯಲ್ಲಿ ಮಾತನಾಡುತ್ತಿದ್ದಕ್ಕೆ ಕೆರಳಿದ ಅಧ್ಯಕ್ಷೆ, ""ಯಾವಾಗಲೂ ನನ್ನನ್ನೇ ಟಾರ್ಗೆಟ್ ಮಾಡುತ್ತೀಯ. ಈಗೇನು ನನ್ನನ್ನು ಹೊಡೆಯುತ್ತೀಯ'' ಎಂದು ಪ್ರಶ್ನಿಸಿ ಸಭೆಯ ಸಭಾಂಗಣದಲ್ಲಿ ಎಲ್ಲರ ಮುಂದೆ ಶರ್ಟ್ ಹಿಡಿದು ಎಳೆದಿದ್ದಾರೆ ಎಂದು ಸದಸ್ಯ ಹರೀಶ್ ಆರೋಪಿಸಿದ್ದಾರೆ.
ಘಟನೆಯಲ್ಲಿ ಸದಸ್ಯ ಹರೀಶನ ಶರ್ಟ್ ಕೀಸೆ ಹರಿದು ಹೋಗಿದೆ. ಇದರಿಂದ ವಿಚಲಿತರಾದ ಇತರ ಸದಸ್ಯರು ಮರು ಮಾತನಾಡದೆ ಸುಮ್ಮನಾದರೆ, ಇತ್ತ ಹರೀಶ್ ಅಧ್ಯಕ್ಷೆಯ ವಿರುದ್ಧ ಹರಿಹಾಯ್ದಿದ್ದಾರೆ. ಸರ್ವ ಸದಸ್ಯರು ಮತ್ತು ಸಾರ್ವಜನಿಕರ ಎದುರೇ ತನಗೆ ಅವಮಾನ ಮಾಡಿದ್ದಾರೆ.
ಕುಡಿಯಲು ಹಣ ಕೊಟ್ಟಿಲ್ಲವೆಂದು ಮಡಿಕೇರಿಯಲ್ಲಿ ತಂದೆಯನ್ನೇ ಕೊಲೆಗೈದ ಮಗ
ಅಧ್ಯಕ್ಷೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹರೀಶ್ ಎಚ್ಚರಿಸಿದ್ದರು. ಬಳಿಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹಿರಿಯ ಸದಸ್ಯರು, ಮಹಿಳಾ ಸದಸ್ಯರ ರಾಜೀ ತೀರ್ಮಾನದ ಬಳಿಕ ಪ್ರಕರಣ ತಣ್ಣಗಾಯಿತು.