ಕಲ್ಲು ತೂರಾಟ, ಪ್ರತಿಭಟನೆ ನಡುವೆ ಕೊಡಗಿನಲ್ಲಿ ಟಿಪ್ಪು ಜಯಂತಿ
ಮಡಿಕೇರಿ, ನವೆಂಬರ್ 10: ಪರ ಹಾಗೂ ವಿರೋಧದ ನಡುವೆಯೂ ವ್ಯಾಪಕ ಕಟ್ಟೆಚ್ಚರ, ಭದ್ರತೆ, ಪೊಲೀಸ್ ಬಂದೋಬಸ್ತ್ ನಡುವೆ ಹಜರತ್ ಟಿಪ್ಪು ಜಯಂತಿ ಆಚರಣೆ ಕೊಡಗಿನಲ್ಲಿ ನಡೆಯಿತು. ಜತೆಗೆ ಟಿಪ್ಪು ಜಯಂತಿಯನ್ನು ವಿರೋಧಿಸಿ ಕೊಡಗು ಬಂದ್ ಕೂಡ ಯಶಸ್ವಿ ಹಾಗೂ ಶಾಂತಿಯುತವಾಗಿ ನಡೆಯಿತು.
ವ್ಯಾಪಕ ಕಟ್ಟೆಚ್ಚರ, ಭದ್ರತೆ ಹಾಗೂ ಪೊಲೀಸರ ಸರ್ಪಗಾವಲಿನಡಿ ನಡೆದ ಸರಕಾರದ ಟಿಪ್ಪು ಜಯಂತಿ ಆಚರಣೆಗೆ ಶಾಸಕದ್ವಯರು, ಜಿ.ಪಂ ಅಧ್ಯಕ್ಷ ಸಹಿತ ತಾಲೂಕು ಪಂಚಾಯಿತಿ ಮತ್ತು ನಗರಸಭಾ ಬಿಜೆಪಿ ಕೆಲ ಸದಸ್ಯರುಗಳು ಅಡ್ಡಿ ಪಡಿಸಲು ಯತ್ನಿಸಿದರು.
In Pics : ಟಿಪ್ಪು ಸುಲ್ತಾನ್ ಯಾರಂತ ಗೊತ್ತಾ ಪುಟ್ಟಾ?
ಹೀಗಾಗಿ ಬಿಜೆಪಿ ಶಾಸಕರು ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಸೇರಿ ಒಟ್ಟು 172 ಜನರನ್ನು 2 ಕೆಎಸ್ ಆರ್ಟಿಸಿ ಬಸ್, 1 ಪೊಲೀಸ್ ಬಸ್, ವ್ಯಾನ್ ಹಾಗೂ ಜೀಪಿನಲ್ಲಿ ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.
ರಸ್ತೆಗಿಳಿಯದ ವಾಹನಗಳು
ಬೆಳಗ್ಗಿನಿಂದಲೇ ಸರಕಾರಿ ಬಸ್ಗಳನ್ನು ಹೊರತು ಪಡಿಸಿ, ಖಾಸಗಿ ಬಸ್ಗಳ, ಆಟೋ ರಿಕ್ಷಾ, ಕಾರು ಜೀಪ್, ಲಾರಿ ಹೀಗೆ ಯಾವುದೇ ವಾಹನಗಳು ರಸ್ತೆಗಿಳಿಯಲಿಲ್ಲ. ಅಂಗಡಿ ಮುಂಗಟ್ಟುಗಳು ತೆರೆಯಲಿಲ್ಲ. ನಗರ ಪ್ರದೇಶಗಳು ಬಿಕೋ ಅನ್ನುವಂತಿತ್ತು. ಕೇವಲ ಕೆಲವು ಆಟೋ ರಿಕ್ಷಾಗಳು ಮತ್ತು ದ್ವಿಚಕ್ರ ವಾಹನಗಳು ಅತ್ತಿಂದಿತ್ತ ಸಂಚರಿಸುತ್ತಿದ್ದವು.
ಬಸ್ಗೆ ಕಲ್ಲು ತೂರಾಟ
ಎಂದಿನಂತೆ ಶಾಲಾ-ಕಾಲೇಜು ಮಕ್ಕಳನ್ನು ಸೇರಿದಂತೆ ಪ್ರಯಾಣಿಕರನ್ನು ಮಡಿಕೇರಿಗೆ ಕರೆ ತರಲು ಬಸ್ಸೊಂದು ಕಾಲೂರಿನತ್ತ ತೆರಳಿತ್ತು. ಈ ಸರಕಾರಿ ಬಸ್ಗೆ ಕೆಲ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಬಸ್ನ ಎರಡೂ ಬದಿ ಹಾಗೂ ಮುಂಭಾಗದ ಗಾಜಿಗೆ ಕಲ್ಲು ತೂರಿದ್ದರಿಂದ ಬಸ್ನ ಎಲ್ಲಾ ಗಾಜುಗಳು ಒಡೆದು ನಷ್ಟವುಂಟಾಗಿದೆ.
ಅಪರಾಹ್ನ ನಂತರ 3 ಗಂಟೆ ವೇಳೆಗೆ ಕೆಲವೊಂದು ಅಂಗಡಿ ಮುಂಗಟ್ಟುಗಳು ತೆರೆಯಲಾರಂಭಿಸಿದವು. ನಂತರ ಹೀಗೆ ಒಂದೊಂದು ಹೋಟೆಲ್, ಅಂಗಡಿಗಳು ತೆರೆಯಲಾರಂಭಿಸಿದವು.
ಶಾಸಕರ ಬಂಧನ ಬಿಡುಗಡೆ
ಮಡಿಕೇರಿ ತಾಲೂಕಿನಲ್ಲಿ 102, ಸೋಮವಾರಪೇಟೆ ತಾಲೂಕಿನಲ್ಲಿ 40 ಹಾಗೂ ವಿರಾಜಪೇಟೆ ತಾಲೂಕಿನಲ್ಲಿ 30 ಮಂದಿ ಬಿಜೆಪಿ, ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರುಗಳನ್ನು ಬಂಧಿಸಲಾಗಿದೆ ಎಂದು ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಭಾಸ್ಕರ ರಾವ್ ತಿಳಿಸಿದ್ದಾರೆ.
ಶಾಸಕದ್ವಯರಾದ ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ ಇವರುಗಳನ್ನು ಬಂಧಿಸಿ ಕರ್ನಾಟಕ ಪೊಲೀಸ್ ಕಾಯ್ದೆ 71 ರಂತೆ ಪ್ರಕರಣ ದಾಖಲಿಸಿ ವಿಧಾನಸಭಾಧ್ಯಕ್ಷರ ಗಮನಕ್ಕೆ ತಂದಿರುವುದಾಗಿಯೂ ಈ ಸಂದರ್ಭ ತಿಳಿಸಿದರು.
ಗೊಂದಲಗಳ ಮಧ್ಯೆ ಶಾಂತಿಯುತ ಆಚರಣೆ
ಬಹಳಷ್ಟು ಒತ್ತಡಗಳಿದ್ದರೂ ಟಿಪ್ಪು ಜಯಂತಿ ಆಚರಣೆ ವೇಳೆ ಯಾವುದೇ ಘರ್ಷಣೆ, ಗೊಂದಲ, ಅಡ್ಡಿ ಆತಂಕಗಳು ನಡೆಯದಂತೆ ಕಾನೂನು ಸುವ್ಯವಸ್ಥೆಯಡಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೆವು. ಟಿಪ್ಪು ಜಯಂತಿ ಆಚರಣೆಗೆ ಕೊಡಗಿನಲ್ಲಿ ಪರ -ವಿರೋಧಗಳಿದ್ದರೂ ನಮ್ಮ ನಿರೀಕ್ಷೆಯಂತೆ ಜಯಂತಿ ಆಚರಣೆ ಶಾಂತಿಯುತವಾಗಿ ಯಶಸ್ವಿಯಾಗಿ ನಡೆಯಿತೆಂದು ತಿಳಿಸಿದರು.
ಟಿಪ್ಪು ಜಯಂತಿ ಆಚರಣೆಗೆ ಅಡ್ಡಿ ಯತ್ನ
ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿತ್ತು. ಇನ್ನೇನು ಕಾರ್ಯಕ್ರಮವನ್ನು ಆರಂಭಿಸಬೇಕೆನ್ನುವಷ್ಟರಲ್ಲಿ ಶಾಸಕದ್ವಯರಾದ ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ಜಿ.ಪಂ ಅಧ್ಯಕ್ಷ ಬಿ.ಎ. ಹರೀಶ್, ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮತ್ತು ಇತರರು ಟಿಪ್ಪು ಜಯಂತಿಗೆ ನಮ್ಮ ವಿರೋಧವಿದೆ, ಆಚರಿಸಕೂಡದು ಎಂದು ವಿರೋಧ ವ್ಯಕ್ತಪಡಿಸಿದರು.
ಹೀಗೆ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಘೋಷಣೆಗಳನ್ನು ಕೂಗುತ್ತ, ಗಲಭೆ ಮಾಡಲೆತ್ನಿಸಿದಾಗ ಎಸ್ಪಿ ರಾಜೇಂದ್ರ ಪ್ರಸಾದ್ ಅವರು ಸೇರಿದಂತೆ ಸ್ಥಳದಲ್ಲಿ ನೆರೆದಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು.
ಕೇಸ್ ದಾಖಲು
ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಲು ಮೆರವಣಿಗೆ ಮೂಲಕ ಬರುತ್ತಿದ್ದ ಬಿಜೆಪಿ ಅಧ್ಯಕ್ಷ ಸಹಿತ ಪದಾಧಿಕಾರಿಗಳ, ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರುಗಳನ್ನು ಬಂಧಿಸಿ ಪೊಲೀಸ್ ಇಲಾಖಾ ವ್ಯಾನಿನಲ್ಲಿ ತುಂಬಿ ಸಾಗಿಸಲಾಗುತ್ತಿತ್ತು.
ಈ ವೇಳೆ ಪ್ರತಿಭಟನಾಕಾರರು ವ್ಯಾನಿನ ಹೊದಿಕೆ ಹಾಗೂ ಇತರ ವಸ್ತುಗಳನ್ನು ಹರಿದು ಹಾನಿ ಮಾಡಿದ ಘಟನೆ ನಡೆಯಿತು. ಈ ಸಂಬಂಧ ಆ ವ್ಯಾನಿನಲ್ಲಿದ್ದ ಎಲ್ಲರ ವಿರುದ್ದ ಸರಕಾರದ ಆಸ್ತಿಗೆ ಹಾನಿ ಮಾಡಿ ನಷ್ಟಪಡಿಸಿದ್ದಕ್ಕಾಗಿ ಪೊಲೀಸರು ಕಾನೂನು ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಐಪಿಸಿ ಸೆಕ್ಷನ್ 144ರ ಅನ್ವಯ ಕ್ರಮ
ಈ ಸಂದರ್ಭ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿ'ಸೋಜ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವ ಅಧಿಕಾರ ಎಲ್ಲರಿಗೂ ಇದೆ. ಕಾನೂನಿನ ವ್ಯಾಪ್ತಿ ಮೀರಿ, ನಿಷೇಧಾಜ್ಞೆ ಕಾಯ್ದೆ ಉಲ್ಲಂಘಿಸಿ ನಡೆದವರ ವಿರುದ್ದ 144 ನಿಷೇಧಾಜ್ಞೆ ಕಾಯ್ದೆ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಗ್ರಾಮಾಂತರ ಪ್ರದೇಶದಲ್ಲಿ ಸಹಜ ಜನಜೀವನ
ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸ್ವಲ್ಪ ಮಟ್ಟಿಗೆ ಅಡಚಣೆಯಾದರೂ ಗ್ರಾಮಾಂತರ ಪ್ರದೇಶಗಳಲ್ಲಿ ಎಂದಿನಂತೆ ಶಾಲೆ, ಕಾಲೇಜುಗಳು ಇಂದು ತೆರೆದಿದ್ದ ಬಗ್ಗೆ ವರದಿಯಾಗಿದೆ.
ಪೊಲೀಸರು-ಪ್ರತಿಭಟನಾಕಾರರ ಮಧ್ಯೆ ಹೊಯ್ ಕೈ
ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಬೆಳಿಗ್ಗೆ ನಗರದ ಶ್ರೀ ಓಂಕಾರೇಶ್ವರ ಸನ್ನಿಧಿಯನ್ನು ಸಮಾವೇಶಗೊಂಡು ಪೂಜಾ ಕೈಂಕರ್ಯಗಳನ್ನು ನಡೆಸಿದರು. ನಂತರ ಮೆರವಣಿಗೆ ಮೂಲಕ ಜಿಲ್ಲಾ ಆರೋಗ್ಯ ಇಲಾಖೆ ಮುಂದೆ ಜನತಾ ಬಜಾರ್ನ ಮುಂಭಾಗ ಸಾಗುತ್ತ ಪ್ರತಿರೋಧ ವ್ಯಕ್ತಪಡಿಸಿದರು.
ಈ ಸಂದರ್ಭ ಡಿವೈಎಸ್ಪಿ ಸುಂದರ್ರಾಜ್ ಸಹಿತ ಇತರ ಪೊಲೀಸರು ತಡೆದು ಮನವೊಲಿಸಿದರು. ಈ ವೇಳೆ ಎರಡೂ ಕಡೆಯವರ ಮಧ್ಯೆ ಪರಸ್ಪರ ಮಾತಿನ ಚಕಮಕಿ, ಗೊಂದಲ ಹಾಗೂ ವಾಗ್ದಾಳಿ ನಡೆಯಿತು. ಈ ಸಂದರ್ಭ ಪರಸ್ಪರ ನೂಕಾಟ ಘರ್ಷಣೆ ನಡೆದರೂ ಪೊಲೀಸರು ಸಹನೆ ತೋರಿ ಶಾಂತಿಯುತವಾಗಿ ವರ್ತಿಸಿದ್ದರಿಂದ ಮುಂದಾಗುವ ಅನಾಹುತ ತಪ್ಪಿತು.
ಜಿಲ್ಲೆಯಾದ್ಯಂತ 249 ಸಿಸಿಟಿವಿ ಅಳವಡಿಕೆ
ಸಿ.ಆರ್.ಪಿ.ಎಫ್ ತುಕಡಿಗಳನ್ನು ಜಿಲ್ಲೆಯಾದ್ಯಂತ ನಿಯೋಜಿಸಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ 49 ಹಾಗೂ ಜಿಲ್ಲೆಯಾದ್ಯಂತ ಒಟ್ಟು 249 ಸಿಸಿಟಿವಿಗಳನ್ನು ಅಳವಡಿಸಿ ಪ್ರತಿಯೊಬ್ಬರ ಚಲನ-ವಲನಗಳ ಮೇಲೆ ನಿಗಾ ಇರಿಸಲಾಗಿತ್ತು.
ಜಿಲ್ಲೆಗೋರ್ವ ಪೊಲೀಸ್ ವರಿಷ್ಠಾಧಿಕಾರಿ, 8 ಡಿವೈಎಸ್ಪಿಗಳು, 23 ವೃತ್ತ ನಿರೀಕ್ಷಕರು, 68 ಸಬ್ ಇನ್ಸ್ ಪೆಕ್ಟರ್ ಗಳು, ಸಾವಿರ ಸಂಖ್ಯೆಯ ಪೊಲೀಸರನ್ನು ಸೂಕ್ತ ಬಂದೋಬಸ್ತ್ ಕರ್ತವ್ಯಕ್ಕಾಗಿ ನಿಯೋಜಿಸಲಾಗಿತ್ತು.
ಕಾನೂನು ಸುವ್ಯವಸ್ಥೆ ನಿರ್ವಹಿಸಿದ ಪೊಲೀಸರು
ಮೂರೂ ತಾಲೂಕುಗಳಲ್ಲಿ ಆಯಾ ತಾಲೂಕಿಗೆ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿಗಳು ಕಾನೂನು ಸುವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಇದರಿಂದ ಕೊಡಗಿನಲ್ಲಿ ಯಶಸ್ವೀ ಟಿಪ್ಪು ಜಯಂತಿ ಆಚರಣೆಯಾಗಿದೆ.