ಮಳೆಗಾಲದಲ್ಲಿ ಕೊಡಗಿನ ಜಲಪಾತಗಳತ್ತ ಹೋಗ್ತಿರಾ?
ಮಡಿಕೇರಿ, ಜುಲೈ 10; ನಗರ ಪ್ರದೇಶಗಳಲ್ಲಿ ವಾರದ 5 ದಿನಗಳ ಕಾಲ ಹೊರ ಜಗತ್ತನ್ನು ಮರೆತು ದುಡಿಯುವವರು ವೀಕೆಂಡ್ಗಾಗಿ ಕಾಯುತ್ತಾರೆ. ವಾರಾಂತ್ಯದಲ್ಲಿ ಎಲ್ಲವನ್ನು ಮರೆತು ಎರಡು ದಿನಗಳ ಕಾಲ ದೂರದ ಊರುಗಳಿಗೆ ತೆರಳಿ ಒಂದಷ್ಟು ಸಮಯವನ್ನು ಕಳೆದು ಬರುವುದು ಇತ್ತೀಚೆಗಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ.
ಅದರಲ್ಲೂ ಮಾನ್ಸೂನ್ ಟ್ರಿಪ್ ಹೊಸ ಟ್ರೆಂಡ್ ಆಗಿದೆ. ಮಲೆನಾಡಿನ ಬೆಟ್ಟಗುಡ್ಡಗಳ ತಿರುವಿನ ರಸ್ತೆಯಲ್ಲಿ ಸುರಿವ ಮಳೆಗೆ ತಮ್ಮ ಪಾಡಿಗೆ ತಾವು ಸಾಗುತ್ತಾ ಧಾರಾಕಾರ ಮಳೆಗೆ ಮೈಯೊಡ್ಡಿ ಖುಷಿಪಡುವುದು ಇದರಲ್ಲಿ ಸೇರಿದೆ. ಅದರಲ್ಲೂ ಈಗ ಮಲೆನಾಡು, ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಸಿಗರ ಆಗಮನವೂ ಹೆಚ್ಚಾಗುತ್ತಿದೆ.
ಆರಿದ್ರಾ ಮಳೆ ಅಬ್ಬರಕ್ಕೆ ಕೊಡಗು ತಲ್ಲಣ, ಭೂಕುಸಿತದ ಆತಂಕ
ಅಲ್ಲದೇ ಜಲಪಾತಗಳ ಮುಂದೆ ತಮ್ಮನ್ನು ತಾವೇ ಮರೆತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು, ಮೈಕೊರೆಯುವ ಚಳಿಗೆ ಮೈಯೊಡ್ಡಿ ಕುಪ್ಪಳಿಸುವುದು ಹೆಚ್ಚಾಗಿ ಕಂಡು ಬರುತ್ತದೆ. ಒಬ್ಬರನ್ನು ನೋಡಿ ಮತ್ತೊಬ್ಬರು ಎಂಬಂತೆ ಮಳೆಗಾಲದಲ್ಲಿ ಮಲೆನಾಡಿನತ್ತ ಹೊರಡಲು ಹಾತೊರೆಯುತ್ತಿರುತ್ತಾರೆ.
ಕೊಡಗು ಜಿಲ್ಲೆಯಲ್ಲಿ ತಗ್ಗಿದ ವಾರ್ಷಿಕ ಮಳೆ ಪ್ರಮಾಣ
ಒಂದೆರಡು ದಶಕಗಳ ಹಿಂದೆ ಮಳೆಗಾಲದಲ್ಲಿ ಕೊಡಗಿನಲ್ಲಿ ಪ್ರವಾಸಿಗರು ಕಾಣಿಸುತ್ತಿರಲಿಲ್ಲ. ಆದರೆ ಈಗ ಜನರು ಬದಲಾಗಿದ್ದಾರೆ. ಕೊಡಗು, ಚಿಕ್ಕಮಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಾವಿರಾರು ಜನರು ವೀಕೆಂಡ್ನಲ್ಲಿ ಆಗಮಿಸುತ್ತಾರೆ.
ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂಕಂಪನ: ಆತಂಕದಲ್ಲಿ ಜನ
ಒಂದೆರಡು ದಶಕಗಳ ಹಿಂದೆ ಹೀಗಿರಲಿಲ್ಲ
ಮೊದಲೆಲ್ಲ ಹೆಚ್ಚಿನವರು ದೇವಸ್ಥಾನಗಳಿಗೆ, ಬೀಚ್ಗಳತ್ತ ಹೋಗುತ್ತಿದ್ದರು. ಯುವಕರು ಟ್ರಕ್ಕಿಂಗ್ ಅಂಥ ಬೆಟ್ಟ ಗುಡ್ಡಗಳತ್ತ ಮುಖ ಮಾಡುತ್ತಿದ್ದರು. ಪ್ರವಾಸದ ಕಲ್ಪನೆಗಳು ಇದ್ದರೂ ಅವು ಶಾಲಾ ಕಾಲೇಜುಗಳಿಂದ ಕೆಲವೊಂದು ನಿಗದಿತ ಪ್ರವಾಸಿ ತಾಣಗಳಿಗೆ ಹೋಗಿ ಬರುತ್ತಿದ್ದರು. ಕೆಲವರು ಕುಟುಂಬ ಸಮೇತ ಪ್ರವಾಸ ಹೋಗುತ್ತಿದ್ದವರು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುತ್ತಿರಲಿಲ್ಲ.
ಈಗ ಎಲ್ಲವೂ ಬದಲಾಗಿದೆ. ದುಡಿಮೆಗೆ ಒತ್ತು ನೀಡುವ ಮಂದಿ ಪ್ರವಾಸಕ್ಕೂ ಒತ್ತು ನೀಡುತ್ತಿದ್ದಾರೆ. ವಾರಾಂತ್ಯ ದಿನಗಳನ್ನು ದೂರದ ಊರುಗಳಲ್ಲಿ ಕಳೆಯಲು ಇಷ್ಟಪಡುತ್ತಾರೆ. ಹೀಗಾಗಿ ಎಲ್ಲ ಸಮಯಗಳಲ್ಲಿಯೂ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಕಾಣಸಿಗುತ್ತಿದ್ದಾರೆ. ಒಂದೆರಡು ದಶಕಗಳ ಹಿಂದೆ ಮಳೆಗಾಲದಲ್ಲಿ ಕೊಡಗಿನಲ್ಲಿ ಪ್ರವಾಸಿಗರ ಕಾಣಿಸುತ್ತಿರಲಿಲ್ಲ.
ಮರುಹುಟ್ಟು ಪಡೆಯುವ ಜಲಪಾತಗಳು
ಈಗ ಹಾಗಿಲ್ಲ ಕೊಡಗಿನ ಮಳೆಯನ್ನು ಎಂಜಾಯ್ ಮಾಡಲೆಂದೇ ಪ್ರವಾಸಿಗರು ಬರುತ್ತಿದ್ದಾರೆ. ಅದಕ್ಕೆ ಕಾರಣವೂ ಮಳೆಗಾಲದಲ್ಲಿ ಇಲ್ಲಿ ಬೆಟ್ಟಗುಡ್ಡಗಳು, ಕಾಡುಗಳು ಮತ್ತು ಕಾಫಿ ತೋಟಗಳ ನಡುವೆ ಇರುವ ಜಲಪಾತಗಳೆಲ್ಲವೂ ಜೀವ ಪಡೆದುಕೊಳ್ಳುತ್ತವೆ. ಅವುಗಳು ರೌದ್ರವಾತಾರ ತಾಳಿ ಧುಮುಕುವುದನ್ನು ನೋಡುವುದೇ ಒಂಥರಾ ಮಜಾ.
ಪ್ರತಿವರ್ಷವೂ ಮಳೆಗಾಲ ಬಂತೆಂದರೆ, ಬೇಸಿಗೆಯ ಬಿರು ಬಿಸಿಲಿನ ಹೊಡೆತಕ್ಕೆ ಸಿಲುಕಿ ಸೊರಗಿ ಹೋದ ಜಲಧಾರೆಗಳು ಮರು ಹುಟ್ಟು ಪಡೆಯುತ್ತವೆ. ಅವು ಹೇಗಿರುತ್ತವೆ ಎಂದರೆ ಥೇಟ್ ಮೈಕೈ ತುಂಬಿಕೊಂಡ ಬೆಡಗಿಯರಂತೆ ಥಕಥೈ ಎನ್ನುತ್ತವೆ.
ಕಾಫಿ ತೋಟಗಳ, ಬೆಟ್ಟಗುಡ್ಡಗಳ, ದಟ್ಟ ಅರಣ್ಯಗಳ ನಡುವೆ ನೆಲೆ ನಿಂತ ಜಲಧಾರೆಗಳೆಲ್ಲವೂ ಹಾಲ್ನೊರೆಯುಕ್ಕಿಸುತ್ತಾ ವಯ್ಯಾರಿಗಳಂತೆ ಬಳುಕುತ್ತಾ ರೌರವತೆಯನ್ನು ಪ್ರದರ್ಶಿಸುತ್ತವೆ. ಆ ಸುಂದರ ದೃಶ್ಯಗಳನ್ನು ನೋಡಿ ಕಣ್ತುಂಬಿಸಿಕೊಳ್ಳುವುದು ಮರೆಯಲಾಗದ ಅನುಭವ ಎಂದರೆ ತಪ್ಪಾಗಲಾರದು.
ನಡೆದು ನೋಡು ಕೊಡಗಿನ ಬೆಡಗು
ಅವತ್ತು ಸಮರ್ಪಕ ರಸ್ತೆಯಾಗಲೀ, ಸಂಚಾರದ ವ್ಯವಸ್ಥೆಯೇ ಇಲ್ಲದ ಕೊಡಗನ್ನು ಮತ್ತು ಕೊಡಗಿನ ನಿಸರ್ಗ ಸೌಂದರ್ಯವನ್ನು ನೋಡಿದ ಕವಿಯೊಬ್ಬರು "ನಡೆದು ನೋಡು ಕೊಡಗಿನ ಬೆಡಗು" ಎಂದು ಹೇಳಿದ್ದರು. ಆದರೆ ಇವತ್ತು ಬಹಳಷ್ಟು ಅಭಿವೃದ್ಧಿ ಕಂಡಿದ್ದರೂ ಜಲಧಾರೆಗಳನ್ನು ವೀಕ್ಷಿಸಲು ಹೊರಡುವ ನಿಸರ್ಗ ಪ್ರೇಮಿಗಳು ಕವಿವಾಣಿಯಂತೆಯೇ ಹೆಜ್ಜೆಹಾಕುವುದು ಅನಿವಾರ್ಯವಾಗಿದೆ.
ಏಕೆಂದರೆ ಕೊಡಗಿನಲ್ಲಿರುವ ಬಹುತೇಕ ಜಲಪಾತಗಳು ನಗರ ನಾಗರೀಕತೆಯ ಗಂಧಗಾಳಿಗೆ ಒಳಗಾಗದೆ ದಟ್ಟ ಕಾಡಿನ ನಡುವೆ. ಮತ್ಯಾರದೋ ಕಾಫಿ, ಏಲಕ್ಕಿ ತೋಟಗಳಲ್ಲಿ. ತಮ್ಮ ಪಾಡಿಗೆ ತಾವು ಎಂಬಂತೆ ಭೋರ್ಗರೆದು ಧುಮುಕುತ್ತವೆ. ಈ ಜಲಪಾತಗಳನ್ನು ಹತ್ತಿರ ಹೋಗಿ ವೀಕ್ಷಿಸುವುದು ಹಾಗೂ ಕ್ಯಾಮರಾದಲ್ಲಿ ಸೆರೆ ಹಿಡಿಯವುದು ಅಷ್ಟು ಸುಲಭದ ಕೆಲಸವಲ್ಲ. ಹತ್ತಾರು ಕಿ. ಮೀ. ದೂರವನ್ನು ಕಾಲ್ನಡಿಗೆಯಲ್ಲಿಯೇ ಕ್ರಮಿಸುವ, ಬೆಟ್ಟಗುಡ್ಡಗಳನ್ನೇರುವ, ಅಷ್ಟೇ ಅಲ್ಲ ರಕ್ತ ಹೀರಲು ಬರುವ ಜಿಗಣೆಗಳೊಂದಿಗೆ ಹೋರಾಡಲು ಸಿದ್ಧರಾಗಿರಬೇಕು.
ಮಳೆಗಾಲದ ಬೆಡಗಿಯರು ಈ ಜಲಪಾತಗಳು
ಹಾಗೆ ನೋಡಿದರೆ ಪಶ್ಚಿಮ ಘಟ್ಟಗಳು ಜಲಪಾತಗಳ ತವರು ಎಂದರೆ ತಪ್ಪಾಗಲಾರದು. ಇಲ್ಲಿನ ಬೆಟ್ಟಗುಡ್ಡಗಳಲ್ಲಿ ಮಳೆಗಾಲದ ದಿನಗಳಲ್ಲಿ ಅಸಂಖ್ಯಾತ ಜಲಧಾರೆಗಳು ಸೃಷ್ಟಿಯಾಗಿ ಯಾರ ಗಮನವನ್ನೂ ಸೆಳೆಯದೆ ತಮ್ಮ ಪಾಡಿಗೆ ತಾವು ಎಂಬಂತೆ ಅಜ್ಞಾತ ಜಲಧಾರೆಗಳಾಗಿ ಉಳಿದು ಬಿಡುತ್ತವೆ. ಇವುಗಳ ಜಾಡು ಹುಡುಕಿ ಸನಿಹಕ್ಕೆ ತೆರಳುವುದು ಅಷ್ಟು ಸುಲಭವಲ್ಲ.
ಇನ್ನು ಕೊಡಗಿನಲ್ಲಿರುವ ಜಲಧಾರೆಗಳ ಪೈಕಿ ಹೆಚ್ಚಿನವುಗಳು ಅಲ್ಪಾಯುಷಿಗಳು. ಇವುಗಳು ಮಳೆಗಾಲದಲ್ಲಿ ಮಾತ್ರ ಭೋರ್ಗರೆದು ಧುಮುಕಿ ತಮ್ಮ ಚೆಲುವನ್ನು ಪ್ರದರ್ಶಿಸುತ್ತವೆಯಾದರೂ ಮಳೆಗಾಲ ಕಳೆದು ಬೇಸಿಗೆ ಬರುತ್ತಿದ್ದಂತೆಯೇ ತನ್ನ ಚೆಲುವು ಕಳೆದುಕೊಂಡು ಅದೃಶ್ಯವಾಗಿ ಬಿಡುತ್ತವೆ. ಹಾಗಾಗಿ ಈ ಜಲಪಾತಗಳು ಮಳೆಗಾಲದ ಬೆಡಗಿಯರಾಗಿ ಗಮನಸೆಳೆಯುತ್ತವೆ. ಇಂತಹ ಜಲಪಾತಗಳನ್ನು ನೋಡಲೆಂದೇ ಬಹಳಷ್ಟು ಪ್ರವಾಸಿಗರು ಮಳೆಯನ್ನು ಲೆಕ್ಕಿಸದೆ ಮಳೆಗಾಲದಲ್ಲಿಯೇ ಇತ್ತ ಬರುವ ಪ್ರಯತ್ನ ಮಾಡುತ್ತಿರುತ್ತಾರೆ.
ಪ್ರವಾಸಿಗರಿಗೆ ಒಂದಷ್ಟು ಕಿವಿಮಾತುಗಳು
ಹೀಗೆ ಬರುವ ಪ್ರವಾಸಿಗರಿಗೆ ಮಳೆಗಾಲದ ಈ ಸಂದರ್ಭಗಳಲ್ಲಿ ಕೆಲವೊಂದು ಕಿವಿಮಾತುಗಳನ್ನು ಹೇಳಲೇಬೇಕಾಗುತ್ತದೆ. ಪ್ರವಾಸಿಗರು ಮಳೆಗಾಲದಲ್ಲಿ ದಯವಿಟ್ಟು ಇತ್ತ ಬರಬೇಡಿ ಎನ್ನುವುದು ಸ್ಥಳೀಯರ ಮನವಿಯಾಗಿದೆ. ಜತೆಗೆ ಮಳೆಗಾಲದಲ್ಲಿ ಜಲಪಾತಗಳತ್ತ ತೆರಳುವ ಹುಚ್ಚು ಸಾಹಸ ಮಾಡಬೇಡಿ. ಯಾವಾಗ ಎಲ್ಲಿ ಗುಡ್ಡ ಕುಸಿತ ಸಂಭವಿಸುತ್ತದೆಯೋ? ರಸ್ತೆ ಇಕ್ಕೆಲಗಳಲ್ಲಿರುವ ಮರಗಿಡಗಳು ಯಾವ ಸಂದರ್ಭದಲ್ಲಿ ಮುರಿದು ಬೀಳುತ್ತೋ ಹೇಳಲಾಗದು.
ಇನ್ನು ಮಳೆ ಹೊತ್ತುಗೊತ್ತಿಲ್ಲದೆ ಸುರಿಯುವುದರಿಂದ ದಯವಿಟ್ಟು ಮಳೆಗಾಲದಲ್ಲಿ ಇತ್ತ ಬರುವ ಪ್ರಯತ್ನ ಮಾಡಲೇ ಬೇಡಿ. ಆಗಸ್ಟ್ ನಂತರದ ದಿನಗಳು ಪ್ರವಾಸಿಗರಿಗೆ ಅದರಲ್ಲೂ ಜಲಪಾತಗಳನ್ನು ವೀಕ್ಷಿಸಲು ಬಯಸುವವರಿಗೆ ಸೂಕ್ತವಾಗಿದೆ.