ಮಡಿಕೇರಿ; ಹುಲಿ ದಾಳಿಗೆ ಹಸುಗಳು ಸಾವು, ಜನರಲ್ಲಿ ಆತಂಕ
ಮಡಿಕೇರಿ, ಮೇ30: ದಕ್ಷಿಣ ಕೊಡಗಿನಲ್ಲಿ ವ್ಯಾಘ್ರನ ಅಟ್ಟಹಾಸ ಮುಂದುವರಿದಿದೆ. ಹುಲಿ ದಾಳಿಗೆ ಮತ್ತೊಂದು ಹಸು ಬಲಿಯಾಗಿರುವ ಘಟನೆ ಬಿ. ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ.
ಈ ವಿಭಾಗದಲ್ಲಿ ನಿರಂತರವಾಗಿ ಹುಲಿ ಉಪಟಳ ನೀಡುತ್ತಿದ್ದು, ಹಲವು ಹಸುಗಳು ಬಲಿಯಾಗಿವೆ. ವ್ಯಾಘ್ರನನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಎಲ್ಲಾ ರೀತಿಯ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಕೆಲವು ದಿನಗಳ ಹಿಂದೆ ಸ್ಥಗಿತಗೊಳಿಸಲಾಗಿತ್ತು.
ಇದೀಗ ಮತ್ತೆ ಪ್ರತ್ಯಕ್ಷವಾಗಿರುವ ಹುಲಿ ಕೊಟ್ಟಗೇರಿ ಸಮೀಪದ ಅರಮಣಮಾಡ ಸುಬ್ಬಯ್ಯಗೆ ಸೇರಿದ ಹಸುವನ್ನು ಕೊಂದು ಹಾಕಿದೆ. ಮನೆಯ ಬಳಿಯಿಂದ 60 ಮೀ. ದೂರದವರಗೂ ಹಸುವನ್ನು ಎಳೆದುಕೊಂಡು ಹೋಗಿದೆ.
ಬಿ. ಶೆಟ್ಟಿಗೇರಿ ಗ್ರಾಮದ ಕೃಷಿಕ ಕಾಳೇಂಗಡ ಅಜಿತ್ಗೆ ಸೇರಿದ ಹಸುವನ್ನು ಶನಿವಾರ ರಾತ್ರಿ ಹುಲಿ ಕೊಂದು ಹಾಕಿದ್ದು, ಆ ಭಾಗದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಬಿ. ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ಬ್ರಹ್ಮಗಿರಿ ವನ್ಯಜೀವಿ ವಲಯ ಹಾಗೂ ಪೊನ್ನಂಪೇಟೆ ಮೀಸಲು ಅರಣ್ಯ ವ್ಯಾಪ್ತಿಯಿಂದ ನಿರಂತರ ಹುಲಿಗಳು ಗ್ರಾಮಕ್ಕೆ ನುಸುಳುತ್ತಿದ್ದು, ರೈತಾಪಿ ವರ್ಗ ತೀವ್ರ ಆತಂಕಕ್ಕೆ ಒಳಗಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಕೊಲ್ಲೀರ ಬೋಪಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ಎಚ್ಚರಿಕೆ; "ಹುಲಿ ಸೆರೆಗೆ ಬೋನನ್ನು ಇರಿಸಲಾಗಿದೆ. ಎಲ್ಲೆಡೆ ಇಲಾಖೆ ಕೂಂಬಿಂಗ್ ಮೂಲಕ ಹುಲಿ ಸೆರೆಗೆ ಮುಂದಾಗಬೇಕು. ಗ್ರಾಮಸ್ಥರು, ಕೂಲಿ ಕಾರ್ಮಿಕ ವರ್ಗ, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಗಲು ಹೊತ್ತಿನಲ್ಲೇ ಓಡಾಡಲು ಭಯ ಪಡುವಂತಾಗಿದ್ದು, ಹುಲಿಯನ್ನು ಶೀಘ್ರ ಸೆರೆ ಹಿಡಿಯಬೇಕು ಇಲ್ಲವೇ ಪೊನ್ನಂಪೇಟೆ ವಲಯಾರಣ್ಯ ಕಚೇರಿ ಪ್ರತಿಭಟನೆ ನಡೆಸಲಾಗುತ್ತದೆ" ಎಂದು ಕೊಡಗು ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ಎಚ್ಚರಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ ಆರೋಪ; ಬಿ. ಶೆಟ್ಟಿಗೇರಿ ಗ್ರಾಮದ ರೈತ ಸಂಘದ ಅಧ್ಯಕ್ಷ ಚೇರಂಡ ಜಗನ್ ಮಾತನಾಡಿ, "ಅಧಿಕಾರಿಗಳ ನಿರ್ಲಕ್ಷ್ಯವೇ ಹುಲಿ ಉಪಟಳ ಎಲ್ಲೆಡೆ ಅಧಿಕಗೊಳ್ಳಲು ಕಾರಣ. ಹುಲಿ ದಾಳಿಯಿಂದ ಹಸು ಕಳೆದುಕೊಂಡಿರುವ ರೈತ ಕುಟುಂಬಕ್ಕೆ ಶೀಘ್ರ ಪರಿಹಾರ ಒದಗಿಸಬೇಕು. ಹುಲಿ ಸೆರೆ ವಿಳಂಬ ಮಾಡಿದಲ್ಲಿ ಬಿ. ಶೆಟ್ಟಿಗೇರಿಯ ರೈತರು, ಗ್ರಾಮಸ್ಥರನ್ನು ಸಂಘಟಿಸಿ ಪೊನ್ನಂಪೇಟೆ ಅರಣ್ಯ ಇಲಾಖೆ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು" ಎಂದರು.
ಸಂಕೇತ್ ಪೂವಯ್ಯ ಭೇಟಿ; ಜೆಡಿಎಸ್ನ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಕೊಟ್ಟಗೇರಿಗೆ ತೆರಳಿ ಸ್ಥಳದಲ್ಲಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಜಿಲ್ಲಾ ಮುಖ್ಯ ಸಂರಕ್ಷಣಾಧಿಕಾರಿ ಲಿಂಗರಾಜುರನ್ನು ದೂರವಾಣಿ ಮೂಲಕ ಸಂಪರ್ಕಿಸುವ ಪ್ರಯತ್ನ ಮಾಡಿದರು. ಈ ಸಂದರ್ಭ ಅಧಿಕಾರಿ ಲಿಂಗರಾಜು ರಜೆಯ ಮೇಲೆ ತೆರಳಿರುವ ಬಗ್ಗೆ ಮಾಹಿತಿ ಲಭ್ಯವಾಗಿತು. ಇಲಾಖೆಯಲ್ಲಿನ ಮೂರು ವಿಭಾಗದ ಸಿಬ್ಬಂದಿಯನ್ನು ಕೊಟ್ಟಗೇರಿ ಭಾಗದ ಹುಲಿ ಕಾರ್ಯಾಚರಣೆಯಲ್ಲಿ ತೊಡಗಿಸಲಾಗಿದೆ. ವಿವಿಧ ರೀತಿಯ ಕಾರ್ಯಾ ತಂತ್ರಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಸೆರೆಗೆ ಸತತ ಪ್ರಯತ್ನ ಮಾಡಲಾಗುತ್ತಿದ್ದು, ಶೀಘ್ರ ಸೆರೆ ಹಿಡಿಯಲಾಗುವುದು ಎಂದು ಪೊನ್ನಂಪೇಟೆ ಆರ್ಎಫ್ಓ ಗಂಗಾಧರ್ ತಿಳಿಸಿದರು.