ಕೊಡಗಿನಲ್ಲಿ ಹುಲಿ ದಾಳಿಗೆ ಬಾಲಕ ಸಾವು, ಮತ್ತೋರ್ವನ ಸ್ಥಿತಿ ಗಂಭೀರ
ಮಡಿಕೇರಿ, ಮಾರ್ಚ್ 8: ಹುಲಿ ದಾಳಿ ನಡೆಸಿದ ಪರಿಣಾಮವಾಗಿ 8 ವರ್ಷದ ಬಾಲಕ ಸಾವನ್ನಪ್ಪಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ.
ಸೋಮವಾರ ಬೆಳಿಗ್ಗೆ ಹುಲಿ ದಾಳಿ ನಡೆಸಿದ್ದರಿಂದ 8 ವರ್ಷದ ಬಾಲಕ ಸಾವನ್ನಪ್ಪಿ, ಆತನ ತಾತ ಕೆಂಚಪ್ಪ (೫೨) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹುಲಿಯ ಆರ್ಭಟಕ್ಕೆ ಕಳೆದ ದಿನಗಳಲ್ಲಿ ಮೂರು ವ್ಯಕ್ತಿಗಳು ಸೇರಿದಂತೆ 12 ಹಸುಗಳು ಬಲಿಯಾಗಿವೆ. ಇನ್ನು ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಸೆರೆಗಾಗಿ ಹರಸಾಹ ಪಡುತ್ತಿದ್ದಾರೆ. ಇಂದು ಬೆಳಿಗ್ಗೆ ತೋಟದಲ್ಲಿ ಕೆಲಸ ಮಾಡುತಿದ್ದ ಸಂದರ್ಭ ಕೆಂಚನನ್ನು ಗಂಭಿರ ಗಾಯಗೊಳಿಸಿದ ಹುಲಿ ಜತೆಯಲ್ಲೇ ಇದ್ದ ಮಗನನ್ನು ಬಲಿ ಪಡೆದಿದೆ.
ಈ ವಿಚಾರ ತಿಳಿಯುತಿದ್ದಂತೆ ನೂರಾರು ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ದ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು. ಕಳೆದ ಫೆಬ್ರುವರಿ 19 ಮತ್ತು 20 ರಂದು ಇಬ್ಬರನ್ನು ಹುಲಿ ಕೊಂದು ಹಾಕಿತ್ತು. ಕೂಡಲೇ 21 ರಿಂದಲೇ ಸುಮಾರು 150 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಅಧಿಕಾರಿಗಳು ಸ್ಥಳದಲ್ಲೇ ಬಿಡಾರ ಹೂಡಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತಿದ್ದಾರೆ.
ನಂತರ ಒಂದು ನಿತ್ರಾಣಗೊಂಡಿದ್ದ ಹೆಣ್ಣು ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ಆದರೆ ಜಾನುವಾರುಗಳ ಮೇಲೆ ಹುಲಿ ಧಾಳಿ ನಿಲ್ಲದೆ ಮತ್ತೆಯೂ 5-6 ಜಾನುವಾರುಗಳು ಬಲಿಯಾಗಿದ್ದವು. ಅರಣ್ಯ ಇಲಾಖೆ ಹುಲಿ ಸೆರೆಗೆ ಸಾಕಾನೆಗಳನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳುತ್ತಿದೆಯಾದರೂ ಹುಲಿ ಸೆರೆ ಸಾಧ್ಯವಾಗಿಲ್ಲ.
ಸೆರೆ ಹಿಡಿಯಲು ಸಾಧ್ಯವಾಗದ್ದಕ್ಕೆ ಅರಣ್ಯ ಇಲಾಖೆಯ ವಿರುದ್ದ ಜನರು ಅಸಮಾಧಾನಗೊಂಡಿದ್ದರು. ಮತ್ತೊಂದೆಡೆ ಬೆಲೆ ಬಾಳುವ ಜಾನುವಾರುಗಳನ್ನು ಹುಲಿ ಕೊಂದು ಹಾಕುತ್ತಿದೆ. ಅರಣ್ಯ ಇಲಾಖೆ ಹುಲಿಯನ್ನು ಸೆಳೆಯಲು ಮೈಸೂರು ಮೃಗಾಲಯದಿಂದ ಹೆಣ್ಣು ಹುಲಿಯ ಮಲ ಮೂತ್ರವನ್ನೂ ಸಂಗ್ರಹಿಸಿ ಸಿಂಪಡಣೆ ಮಾಡಿತ್ತು. ಆದರೂ ಸೆರೆ ಸಾಧ್ಯವಾಗದಿರವುದು ಅರಣ್ಯ ಇಲಾಖೆಗೂ ತಲೆನೋವಾಗಿ ಪರಿಣಮಿಸಿದೆ.
Recommended Video
ಸೋಮವಾರ ಹುಲಿ ದಾಳಿ ಸುದ್ದಿ ತಿಳಿಯುತಿದ್ದಂತೆಯೇ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾ ಲಾಲ್ ಸ್ಥಳಕ್ಕೆ ಧಾವಿಸಿದ್ದು, ಗ್ರಾಮಸ್ಥರನ್ನು ಸಮಾಧಾನಿಸುತಿದ್ದಾರೆ. ಸ್ಥಳದಲ್ಲಿ ಪೊಲೀಸರೂ ಬಿಗಿ ಬಂದೋಬಸ್ತ್ ಮಾಡಿದ್ದು, ಹುಲಿ ಸೆರೆಗೆ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ.