ಮಡಿಕೇರಿಯಲ್ಲಿ ಜನ ಮಲಗಿದ್ದಾಗ ಚಿನ್ನ, ನಗದು ದೋಚಿದ ಕಳ್ಳರು
ಮಡಿಕೇರಿ ಏಪ್ರಿಲ್ 27: ಮನೆ ಮಂದಿ ಮಲಗಿದ್ದ ಸಂದರ್ಭ ಮನೆಯಿಂದ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 5 ಸಾವಿರ ರೂ. ನಗದು ದೋಚಿರುವ ಘಟನೆ ವಿರಾಜಪೇಟೆ ಪಟ್ಟಣದಲ್ಲಿ ನಡೆದಿದೆ.
ವೀರಾಜಪೇಟೆಯ ಮುಖ್ಯ ರಸ್ತೆಯಲ್ಲಿರುವ ವರ್ತಕ ಎನ್.ಶ್ರೀನಿವಾಸ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿರಾಜಪೇಟೆ ಮುಖ್ಯ ರಸ್ತೆಯ ಗಾಂಧಿನಗರಕ್ಕೆ ಹೋಗುವ ತಿರುವಿನಲ್ಲಿರುವ ಮನೆಯ ಹೆಂಚನ್ನು ತೆಗೆದು ಒಳ ನುಗ್ಗಿದ ಕಳ್ಳರು ಮನೆಯ ಮಾಲೀಕರು ಮತ್ತು ಅವರ ಕುಟುಂಬದವರು ಮಲಗಿದ್ದ ಪಕ್ಕದ ಕೊಠಡಿಯಲ್ಲಿದ್ದ ಅಲ್ಮೇರಾದ ಬಾಗಿಲನ್ನು ತೆಗೆದು ಚಿನ್ನದ ಬಳೆಗಳು, ಸರಗಳು, ಓಲೆಗಳು, ಉಂಗುರಗಳು ಸೇರಿದಂತೆ ಸುಮಾರು 160 ಗ್ರಾಂ ಗಳ ಚಿನ್ನಾಭರಣ, ಇದರ ಜೊತೆಯಲ್ಲಿ ಇಟ್ಟಿದ್ದ 5000 ರೂ. ನಗದು ಕಳವು ಮಾಡಿದ್ದಾರೆ.
ಶ್ರೀನಿವಾಸ್ ಅವರು ಬೆಳಿಗ್ಗೆ ಎದ್ದು ನೋಡಿದಾಗ ಅಲ್ಮೇರಾದ ಒಳಗಡೆ ಇದ್ದ ಎಲ್ಲಾ ಚಿನ್ನಾಭರಣ ನಗದನ್ನು ದೋಚಲಾಗಿತ್ತು. ಅವರ ಮನೆಯ ಮುಂದೆ ಹಾರ್ಡ್ ವೇರ್ ಮಳಿಗೆ ಇದ್ದು, ಅದರ ಹಿಂದೆ ಮನೆ ಇದೆ.
ರಾತ್ರಿ 11 ಗಂಟೆಯಿಂದ ಬೆಳಗಿನ 5 ಗಂಟೆ ಅವಧಿಯೊಳಗೆ ಈ ಕಳವು ನಡೆದಿರುವುದಾಗಿ ಹೇಳಲಾಗಿದೆ. ಯಾರೋ ಪರಿಚಯ ಇರುವ ದುಷ್ಕರ್ಮಿಗಳು ಈ ಕಳವು ನಡೆಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ನಗರ ಪೊಲೀಸರು ಮಡಿಕೇರಿಯಿಂದ ಶ್ವಾನ ದಳ ಕರೆಸಿದ್ದರೂ, ಮನೆಯ ಸುತ್ತ ಸಂಚರಿಸಿದ ಶ್ವಾನ ಅಲ್ಲಿಯೇ ನಿಂತಿದೆ. ಘಟನೆ ನಡೆದ ಸ್ಥಳದ ಕೊಠಡಿಯನ್ನು ಬೆರಳಚ್ಚು ತಜ್ಞರು ಬಂದು ಪರಿಶೀಲನೆ ನಡೆಸಿದ್ದಾರೆ.