ಕೊಡಗಿನ ಜಲಪಾತಗಳತ್ತ ತೆರಳುವ ಮುನ್ನ ಹುಷಾರ್!
ಮಡಿಕೇರಿ, ಮೇ 31: ಕೊಡಗಿನ ಜಲಪಾತಗಳು ಪ್ರವಾಸಿಗರ ಪಾಲಿಗೆ ಮೃತ್ಯುಕೂಪಗಳಾಗುತ್ತಿವೆ. ದೂರದಿಂದ ಬರುವ ಪ್ರವಾಸಿಗರು ಇಲ್ಲಿರುವ ಜಲಪಾತಗಳ ಸೌಂದರ್ಯಕ್ಕೆ ಮಾರು ಹೋಗಿ ಈಜುವ ಸಾಹಸ ಮಾಡಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೊಡಗಿನಲ್ಲಿ ಇತ್ತೀಚೆಗೆ ಪ್ರವಾಸ ಬಂದವರು ಜಲಪಾತಗಳಲ್ಲಿ ಹಲವು ಕಾರಣಗಳಿಗೆ ಸಾವನ್ನಪ್ಪುತ್ತಿದ್ದಾರೆ. ಇದೊಂದು ಬೇಸರದ ಸಂಗತಿಯಾಗಿದೆ. ಇದನ್ನು ತಡೆಯಲು ಸಾಧ್ಯವಿಲ್ಲವೆ ಎಂಬ ಪ್ರಶ್ನೆಗಳು ಕಾಡುತ್ತಿವೆ.
ಹಾಗೆ ನೋಡಿದರೆ ಕೊಡಗಿನಲ್ಲಿ ಹತ್ತಾರು ಜಲಪಾತಗಳಿವೆ. ಇವುಗಳೆಲ್ಲವೂ ನಗರದಿಂದ ದೂರವಾಗಿ ಬೆಟ್ಟಗುಡ್ಡ, ತೋಟ ಹೀಗೆ ಜನ ವಸತಿ ಪ್ರದೇಶಗಳಿಂದ ಹೊರಗಿವೆ. ಪ್ರಶಾಂತ ವಾತಾವರಣದಲ್ಲಿ ತಮ್ಮ ಪಾಡಿಗೆ ತಾವು ಎಂಬಂತೆ ಧುಮುಕುವ ಜಲಧಾರೆಗಳತ್ತ ಪ್ರವಾಸಿಗರು ತೆರಳುವುದು ಕಡಿಮೆಯೇ.
ಮೈಸೂರು: ಕಾಡಿನಿಂದ ನಾಡಿನತ್ತ ಕಾಡಾನೆಗಳು; ರೈತರ ಎದೆಯಲ್ಲಿ ಢವಢವ...
ಕೆಲವು ಜಲಪಾತಗಳನ್ನು ಅರಸಿ ಬರುವ ಪ್ರವಾಸಿಗರು ಕೇವಲ ಜಲಪಾತಗಳನ್ನಷ್ಟೆ ನೋಡಿಕೊಂಡು ಹಿಂತಿರುಗಿದರೆ ಯಾವುದೇ ಅಪಾಯ ಕಾಡುವುದಿಲ್ಲ. ಆದರೆ ಪ್ರವಾಸಿಗರು ಜಲಪಾತದ ಬಳಿ ಈಜುವ ಸಾಹಸ ಮಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಜಲಪಾತ ಧುಮುಕುವ ತಳಭಾಗದಲ್ಲಿ ಆಳವಾದ ಕಂದಕಗಳಿದ್ದು, ಅಲ್ಲಿ ನೀರು ಸುಳಿಯಾಗಿ ತಿರುಗುತ್ತ ಮುಂದೆ ಸಾಗುವುದರಿಂದ ಆ ಸುಳಿಗೆ ಸಿಕ್ಕವರು ಹೊರ ಬರಲಾರದೆ ಮುಳುಗಿ ಸಾವನ್ನಪ್ಪುವುದು ಸಾಮಾನ್ಯವಾಗಿದೆ.
ಎಚ್ಡಿ ಕೋಟೆಯ ಕಳಾಹೀನ ಶಾಲೆಗೆ ಹೊಸ ಮೆರಗು ಕಲ್ಪಿಸಿದ ಎನ್ಜಿಒ ಸಂಸ್ಥೆ
ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಪ್ರವಾಸಿಗರು
ಮೊದಲೆಲ್ಲ ಕೊಡಗಿನ ಕೆಲವೇ ಕೆಲವು ಜಲಪಾತಗಳಿಗಳಷ್ಟೇ ಹೆಸರುವಾಸಿಯಾಗಿದ್ದವು. ಅವುಗಳನ್ನಷ್ಟೇ ನೋಡಿಕೊಂಡು ಪ್ರವಾಸಿಗರು ತೆರಳುತ್ತಿದ್ದರು. ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಅರಣ್ಯ ತೋಟಗಳ ನಡುವೆ ಇರುವ ಜಲಪಾತಗಳನ್ನು ಅರಸಿಕೊಂಡು ಬರುವವರ ಸಂಖ್ಯೆಯೂ ಹೆಚ್ಚಾಯಿತು. ಕೆಲವರು ಯಾವುದೇ ಮಾಹಿತಿ ನೀಡದೆ ಜಲಪಾತಗಳಿಗೆ ತೆರಳುವುದಲ್ಲದೆ, ನೀರಿನಲ್ಲಿ ಈಜುವ ಸಾಹಸ ಮಾಡಿ ಕೆಲವೊಮ್ಮೆ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ.
ಜಿಲ್ಲೆಯಲ್ಲಿರುವ ಜಲಪಾತಗಳ ಪೈಕಿ ಅಬ್ಬಿ ಜಲಪಾತ, ಮಲ್ಲಳ್ಳಿ, ಚೇಲಾವರ ಜಲಪಾತಗಳಲ್ಲಿ ಈಗಾಗಲೇ ಹಲವರು ಸಾವನ್ನಪ್ಪಿದ್ದಾರೆ. ಇದೀಗ ಕಾಡಿನ ನಡುವೆ ಇರುವ ಮುಕ್ಕೋಡ್ಲು ಗ್ರಾಮದ ಕೋಟೆ ಅಬ್ಬಿ ಜಲಪಾತದಲ್ಲೂ ಮೂವರು ಸಾವನ್ನಪ್ಪುವ ಮೂಲಕ ಮತ್ತೊಂದು ಜಲಪಾತ ಮೃತ್ಯುಕೂಪವಾಗಿ ಕುಖ್ಯಾತಿ ಪಡೆಯುತ್ತಿದೆ.
ಪ್ರಾಣ ಕಳೆದವರ ಸಂಖ್ಯೆ
ಕೆಲವು ವರ್ಷಗಳ ಹಿಂದೆ ಮಡಿಕೇರಿ ಸಮೀಪದ ಅಬ್ಬಿಜಲಪಾತದಲ್ಲಿ ನೀರಿನಲ್ಲಿ ಅಬ್ಬಿ ಜಲಪಾತದಲ್ಲಿ ಮುಳುಗಿ ಸಾಯುವ ಪ್ರಕರಣಗಳು ಒಂದರ ಮೇಲೊಂದರಂತೆ ನಡೆಯುತ್ತಿತ್ತು. ಈ ಜಲಪಾತದಲ್ಲಿ ಸತ್ತವರ ಸಂಖ್ಯೆ ಇದುವರೆಗೆ 52 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಹಾಗೆಯೇ ಚೇಲಾವರದಲ್ಲಿ 12ಕ್ಕೂ ಹೆಚ್ಚು, ಮಲ್ಲಳ್ಳಿಯಲ್ಲಿ 15ಕ್ಕೂ ಹೆಚ್ಚು ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಈಗ ಮೂವರು ಸಾವನ್ನಪ್ಪಿರುವ ಮುಕ್ಕೋಡ್ಲು ಗ್ರಾಮದ ಕೋಟೆ ಅಬ್ಬಿ ಜಲಪಾತದಲ್ಲಿ ಈ ಹಿಂದೆ ಇಬ್ಬರು ಸಾವನ್ನಪ್ಪಿದ್ದರು. ಹೀಗಾಗಿ ಸಾವಿಗೀಡಾದವರ ಸಂಖ್ಯೆ ಐದಕ್ಕೇರಿದೆ. ಅನಾಹುತ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೋಟೆ ಅಬ್ಬಿ ಜಲಪಾತದ ಪ್ರದೇಶಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಬೇಕೆಂದು ವ್ಯಾಲಿ ಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ನ ಅಧ್ಯಕ್ಷ ಹಾಗೂ ಸ್ಥಳೀಯ ನಿವಾಸಿ ಹಂಚೆಟ್ಟಿರ ಮನುಮುದ್ದಪ್ಪ ಒತ್ತಾಯಿಸಿದ್ದಾರೆ.
ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧವೇರಬೇಕು
ಇತ್ತೀಚಿನ ವರ್ಷಗಳಲ್ಲಿ ಕೋಟೆ ಅಬ್ಬಿ ಒಂದು ಪ್ರವಾಸಿತಾಣವಾಗಿ ಪ್ರಖ್ಯಾತಿಯನ್ನು ಪಡೆಯುತ್ತಿದೆ, ಇದರ ಬೆನ್ನಲ್ಲೇ ಇಲ್ಲಿ ಅನಾಹುತಗಳು ಕೂಡ ಸಂಭವಿಸುತ್ತಿವೆ. ಸುರಕ್ಷಿತ ಪ್ರದೇಶವಲ್ಲದ ಕೋಟೆ ಅಬ್ಬಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರುವ ಮೂಲಕ ಮತ್ತಷ್ಟು ಸಾವು, ನೋವು ಸಂಭವಿಸುವುದನ್ನು ತಪ್ಪಿಸಬೇಕಾಗಿದೆ ಎಂದು ಅವರು ಮನವಿ ಮಾಡಿದ್ದಾರೆ. ಪ್ರವಾಸಿತಾಣದಲ್ಲಿ ಪ್ರವಾಸಿಗರ ಸುರಕ್ಷತೆಗೆಂದು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಹಸಿರ ಪರಿಸರದಲ್ಲಿರುವ ಪ್ರಕೃತಿದತ್ತವಾದ ಜಲಪಾತವನ್ನು ವೀಕ್ಷಿಸಲೆಂದು ಪ್ರತಿದಿನ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಕೋಟೆ ಅಬ್ಬಿಯಲ್ಲಿ ಅಪಾಯದ ಪರಿಸ್ಥಿತಿ ಇದ್ದರೂ ಪ್ರವಾಸಿಗರಿಗೆ ಸುರಕ್ಷತೆಯ ಬಗ್ಗೆ ಮಾಹಿತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ
2002ರಲ್ಲಿ ಸೇತುವೆ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆ ಅನುದಾನ ಬಿಡುಗಡೆ ಮಾಡಿದ್ದು ಬಿಟ್ಟರೆ ಇತ್ತೀಚಿನ ವರ್ಷಗಳಲ್ಲಿ ಕೋಟೆ ಅಬ್ಬಿಯ ಅಭಿವೃದ್ಧಿಗೆ ಸರಕಾರ ಹಣ ನೀಡಿಲ್ಲ. ಆಡಳಿತ ವ್ಯವಸ್ಥೆ ಈ ಪ್ರವಾಸಿತಾಣದ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಪ್ರವಾಸಿಗರ ಸುರಕ್ಷತೆಯ ಬಗ್ಗೆಯೂ ಕಾಳಜಿ ಇಲ್ಲದ ಪರಿಣಾಮ ಸಾವುಗಳು ಸಂಭವಿಸುತ್ತಿವೆ ಎಂದು ದೂರಿದ್ದಾರೆ. ಪ್ರವಾಸಿಗರು ಜಲಪಾತಕ್ಕೆ ಇಳಿಯದಂತೆ ಬ್ಯಾರಿಕೇಡ್ಗಳನ್ನು ಅಳವವಡಿಸಬೇಕು ಅಥವಾ ಸೇತುವೆ ಬಳಿಯೇ ಪ್ರವಾಸಿಗರನ್ನು ತಡೆಯಬೇಕು, ಅಪಾಯವನ್ನು ಸೂಚಿಸುವ ಎಚ್ಚರಿಕೆಯ ಫಲಕಗಳನ್ನು ಅಳವಡಿಸಬೇಕು, ಪೊಲೀಸರು ಗಸ್ತು ತಿರುಗುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕೋಟೆ ಅಬ್ಬಿ ವ್ಯಾಪ್ತಿಯಲ್ಲಿ ಪ್ರವಾಸಿಗರ ನೂರಾರು ವಾಹನಗಳು ಎಲ್ಲೆಂದರಲ್ಲಿ ನಿಲುಗಡೆಗೊಳ್ಳುವುದರಿಂದ ಗ್ರಾಮಸ್ಥರ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಆದ್ದರಿಂದ ಸೂಕ್ತ ವಾಹನ ನಿಲುಗಡೆ ವ್ಯವಸ್ಥೆಯನ್ನು ಕೂಡ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಅದು ಏನೇ ಇರಲಿ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಪಡೆದುಕೊಂಡು ಬರುವ ದೂರದ ಪ್ರವಾಸಿಗರು ಮಾರ್ಗದರ್ಶಕರ ಕೊರತೆಯಿಂದ ನಿರ್ಜನ ಪ್ರದೇಶಗಳಲ್ಲಿರುವ ಜಲಪಾತ, ಸೇರಿದಂತೆ ಬೆಟ್ಟಗುಡ್ಡಗಳಿಗೆ ತೆರಳುತ್ತಿದ್ದು, ಕೆಲವೊಮ್ಮೆ ಹುಚ್ಚು ಸಾಹಸ ಮಾಡಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನಾದರೂ ಇತ್ತ ಆಗಮಿಸುವ ಪ್ರವಾಸಿಗರು ಜಲಪಾತಗಳಲ್ಲಿ ಈಜುವ ಸಾಹಸ ಮಾಡದೆ ದೂರದಿಂದಲೇ ಚೆಲುವನ್ನು ನೋಡಿಕೊಂಡು ಹಿಂತಿರುಗುವುದು ಬಹು ಮುಖ್ಯವಾಗಿದೆ.