ಕೊಡಗಿನವರನ್ನು ಕಾಡುತ್ತಿದೆ ಹತ್ತಾರು ಸಮಸ್ಯೆಗಳು..!
ಕೊಡಗು, ಮಾರ್ಚ್ 01: ಕೊಡಗಿನಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದಂತೆಯೇ ಒಂದಷ್ಟು ಸಮಸ್ಯೆಗಳು ಹೆಚ್ಚಾಗತೊಡಗಿದೆ. ಅತಿವೃಷ್ಠಿ ಅನಾವೃಷ್ಠಿಗಳಲ್ಲದೆ, ಕೂಲಿ ಕಾರ್ಮಿಕರ ಸಮಸ್ಯೆ, ವಲಸಿಗ ಕಾರ್ಮಿಕರಿಂದ ಕೊಲೆ, ಸುಲಿಗೆ, ಹೋಂಸ್ಟೇ ಹೆಸರಿನಲ್ಲಿ ಅಕ್ರಮ ಹೀಗೆ ಹತ್ತಾರು ಸಮಸ್ಯೆಗಳು ಸದ್ದಿಲ್ಲದೆ ಮೇಲೇಳುತ್ತಿವೆ.
ಇದರ ಜತೆಗೆ ಗ್ರಾಮೀಣ ಪ್ರದೇಶಗಳ ಬಹಳಷ್ಟು ಮನೆಗಳಲ್ಲಿ ಮಕ್ಕಳು ಉದ್ಯೋಗ ನಿಮಿತ್ತ ಹೊರ ಹೋಗುತ್ತಿರುವುದರಿಂದ ಹೆತ್ತವರು ಒಬ್ಬಂಟಿಗಳಾಗುತ್ತಿದ್ದಾರೆ. ಜಿಲ್ಲೆಯಲ್ಲಿ ತೋಟದ ಕೆಲಸಗಳಿಗೆ ಕಾರ್ಮಿಕರು ಸಿಗದ ಕಾರಣದಿಂದಾಗಿ ದೂರದ ಅಸ್ಸಾಂ ಕಡೆಯಿಂದ ಬರುವ ಅಪರಿಚಿತ ಕೂಲಿ ಕಾರ್ಮಿಕರಿಗೆ ಬೆಳೆಗಾರರು ಮಣೆ ಹಾಕಿ ಅವರ ಪೂರ್ವಾಪರ ತಿಳಿಯದೆ ಕೆಲಸಕ್ಕಿಟ್ಟುಕೊಳ್ಳುತ್ತಿರುವುದು ಕೂಡ ಹಲವು ಅಪರಾಧ ಪ್ರಕರಣಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ.
ದುರ್ವಾಸನೆಯಿಂದ ಪಾರಾದ ಮಡಿಕೇರಿ ಜನ; ಹೇಗೆ ಗೊತ್ತಾ?
ಇದಕ್ಕೆ ನಿದರ್ಶನ ಎಂಬಂತೆ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ, ಕಳ್ಳತನ ಸೇರಿದಂತೆ ಹಲವು ಪ್ರಕರಣಗಳು ನಡೆದು ಹೋಗಿವೆ. ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ಒಂಟಿ ಮನೆಗಳು ಹೆಚ್ಚಾಗಿದ್ದು, ಬಹಳಷ್ಟು ಮನೆಗಳು ಒಂದು ಮನೆಯಿಂದ ಮತ್ತೊಂದು ಮನೆಗೆ ಕನಿಷ್ಟವೆಂದರೂ ಅರ್ಧ ಪರ್ಲಾಂಗು ದೂರವಾದರೂ ಇದ್ದೇ ಇರುತ್ತವೆ.
ತಮ್ಮ ತೋಟಗಳ ನಡುವೆ ಮನೆ ಕಟ್ಟಿಕೊಂಡು ಹೆಚ್ಚಿನ ಜನ ಜೀವನ ಸಾಗಿಸುತ್ತಾರೆ. ಕೆಲವು ಮನೆಗಳಲ್ಲಿ ಒಬ್ಬಂಟಿ ಹೆಂಗಸರು, ಗಂಡಸರು ಇರುತ್ತಾರೆ. ಇಲ್ಲಿಗೆ ಯಾರೂ ಬರಲ್ಲ. ಸುತ್ತಲಿನವರು, ಗ್ರಾಮಸ್ಥರು ಎಲ್ಲರೂ ಪರಿಚಿತರೇ ಆಗಿರುವುದರಿಂದ ಯಾರೂ ತಮಗೆ ತೊಂದರೆ ಮಾಡುವುದಿಲ್ಲ ಎಂಬ ಧೈರ್ಯದಿಂದಲೇ ಜೀವನ ಸಾಗಿಸುತ್ತಾರೆ. ಮುಂದೆ ಓದಿ...
ಉದ್ಯೋಗ ಅರಸಿ ಪಟ್ಟಣದತ್ತ
ಇಷ್ಟಕ್ಕೂ ಇಲ್ಲಿನ ಮನೆಗಳಲ್ಲಿ ಒಂಟಿಯಾಗಿ ಮಲಗುವುದಕ್ಕೆ ಜೀವನ ಮಾಡುವುದಕ್ಕೆ ಯಾರೂ ಹೆದರುವುದಿಲ್ಲ. ಕಾರಣ ಹುಟ್ಟಿನಿಂದಲೇ ಅದು ಅಭ್ಯಾಸವಾಗಿ ಹೋಗಿದೆ. ಅದರಲ್ಲೂ ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿನ ಕುಟುಂಬಗಳಲ್ಲಿ ಅಂತಹದೊಂದು ಪರಿಸ್ಥಿತಿ ಅನಿವಾರ್ಯವಾಗಿ ನಿರ್ಮಾಣವಾಗತೊಡಗಿದೆ. ಹಿಂದಿನ ಕಾಲದಲ್ಲಿ ದೊಡ್ಡ ಕುಟುಂಬಗಳಿದ್ದವು. ಒಂದು ಮನೆಯಲ್ಲಿ ಹತ್ತಾರು ಮಂದಿಯಿರುತ್ತಿದ್ದರು. ಅವರಿಗೆ ಹತ್ತಾರು ಎಕರೆ ತೋಟ, ಗದ್ದೆಗಳಿರುತ್ತಿದ್ದವು. ಇವರ ಮನೆಗಳು ತೋಟದ ಮಧ್ಯೆಯಿರುತ್ತಿತ್ತು. ಕೃಷಿಯೇ ಬದುಕಾಗಿತ್ತು. ಮನೆಯಲ್ಲಿ ಹೆಚ್ಚಿನ ಜನರು ಇರುತ್ತಿದ್ದರಿಂದ ಒಂಟಿಮನೆಗಳಾಗಿದ್ದರೂ ಯಾವುದೇ ಭಯವಿಲ್ಲದೆ ಬದುಕುತ್ತಿದ್ದರು. ಆದರೆ ಕಾಲ ಕ್ರಮೇಣ ಶಿಕ್ಷಣ ಪಡೆದವರು ಉದ್ಯೋಗ ಅರಸಿ ಪಟ್ಟಣದತ್ತ ಮುಖ ಮಾಡಿದರು. ಹಾಗೆ ಹೋದವರು ಅಲ್ಲಿಯೇ ಬದುಕು ಕಟ್ಟಿಕೊಳ್ಳತೊಡಗಿದರು.
ಏನೂ ಇಲ್ಲದಂತೆ ಬದುಕಬೇಕಾದ ಸ್ಥಿತಿ
ಮನೆಯ ಹಿರಿಯರು ಮಕ್ಕಳೊಂದಿಗೆ ತಾವು ಕಷ್ಟಪಟ್ಟು ಕಟ್ಟಿದ ಮನೆ ಮತ್ತು ಬದುಕಿ ಬಂದ ತೋಟಗಳನ್ನು ಬಿಟ್ಟು ಹೋಗಲಾಗದೆ ತಮ್ಮ ಮನೆಗಳಲ್ಲಿ ಉಳಿದು ಹೋದರು. ಹೀಗಾಗಿ ಇವತ್ತಿಗೂ ಹಿರಿಯರು ತಮ್ಮ ಮಕ್ಕಳು ಹೊರಗಿದ್ದರೂ ತಾವು ಅವರೊಂದಿಗೆ ಹೋಗದೆ ತಮ್ಮ ಊರುಗಳ ಮನೆಯಲ್ಲಿ ಒಬ್ಬಂಟಿಯಾಗಿಯೇ ಉಳಿದು ಹೋಗಿದ್ದಾರೆ. ಮಕ್ಕಳು ವಾರಕ್ಕೋ ತಿಂಗಳಿಗೋ ಒಮ್ಮೆ ಬಂದು ಹೋಗುತ್ತಾರೆ. ಉಳಿದಂತೆ ದಿನಕ್ಕೊಮ್ಮೆ ಫೋನ್ ಮಾಡಿ ವಿಚಾರಿಸಿಕೊಳ್ಳುತ್ತಾರೆ. ಇಲ್ಲಿ ಹೆತ್ತವರನ್ನು ತಮ್ಮ ಮಕ್ಕಳು ತಾವಿರುವ ಕಡೆ ಕರೆದುಕೊಂಡು ಹೋಗಿ ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದರೂ ಹೆತ್ತವರು ತಮ್ಮ ತೋಟ, ಮನೆ ಬಿಟ್ಟು ಮಕ್ಕಳೊಂದಿಗೆ ಹೋಗಿ ಬದುಕಲು ಸುತರಾಂ ಒಪ್ಪುತ್ತಿಲ್ಲ. ಇತ್ತ ಮಕ್ಕಳು ಕೆಲಸ ಬಿಟ್ಟು ಬಂದು ಊರಿನಲ್ಲಿ ಇರುವಂತಿಲ್ಲ. ಇಂತಹದೊಂದು ಪರಿಸ್ಥಿತಿ ಇದೀಗ ಹೆಚ್ಚಾಗಿ ಕಂಡು ಬರುತ್ತಿದ್ದು, ಎಲ್ಲವೂ ಇದ್ದರೂ ಏನೂ ಇಲ್ಲದಂತೆ ಬದುಕ ಬೇಕಾದ ಪರಿಸ್ಥಿತಿ ಬಂದೊದಗಿದೆ.
ಚಿತ್ರಗಳು : ಕೊಡಗು ಸಂತ್ರಸ್ತರಿಗೆ ಕಟ್ಟುತ್ತಿರುವ ಮನೆಗಳು ಹೇಗಿವೆ?
ವಂಚಕರು ಯಾರೆಂಬುದು ಗೊತ್ತಾಗುವುದಿಲ್ಲ
ಮೊದಲೆಲ್ಲ ಇರುವುದರಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಜತೆಗೆ ತಮ್ಮ ತೋಟ, ಗದ್ದೆಯ ಕೆಲಸವನ್ನು ತಾವೇ ಮಾಡುತ್ತಿದ್ದರು. ಹೀಗಾಗಿ ಕೂಲಿ ಕಾರ್ಮಿಕರ ಸಮಸ್ಯೆ ಇರಲಿಲ್ಲ. ಆದರೆ ಈಗ ಹಾಗಿಲ್ಲ. ಇಲ್ಲಿರುವ ಓದಿದವರು ತೋಟ ಕೆಲಸ ಮಾಡಲು ತಯಾರಿಲ್ಲ. ಜತೆಗೆ ಈಗಾಗಲೇ ಹೊರಗೆ ಹೋಗಿ ಕೆಲಸ ಮಾಡುತ್ತಿರುವ ಬಹಳಷ್ಟು ಮಂದಿಗೆ ತೋಟಗಳಿವೆ. ಅದರ ಕೆಲಸವನ್ನು ಮಾಡಿಸಲೇಬೇಕಾಗಿದೆ. ಆದರೆ ಕೆಲಸ ಮಾಡಲು ಕೂಲಿ ಕಾರ್ಮಿಕರು ಸಿಗುತ್ತಿಲ್ಲ.ಹಿಂದಿನ ಕಾಲದಲ್ಲಿ ಬಡವರು, ಅನಕ್ಷರಸ್ಥರು ಕೂಲಿ ಕೆಲಸಕ್ಕಾಗಿ ತೋಟಗಳಿಗೆ ಬರುತ್ತಿದ್ದರು. ಅವರು ತಮ್ಮ ಮಕ್ಕಳನ್ನು ಓದಿಸಿ ಕೆಲಸ ಕೊಡಿಸಿದ್ದರಿಂದ ಬದುಕೋದಕ್ಕೆ ಅವರು ಬೇರೆ ಬೇರೆ ಉದ್ಯೋಗ ಮಾಡುತ್ತಿದ್ದಾರೆ. ಹಿಂದೆ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ವಯಸ್ಸಾಗಿದ್ದು, ಕೆಲಸ ಮಾಡಲು ಶಕ್ತಿಯಿಲ್ಲದಾಗಿದೆ. ಹೀಗಾಗಿ ಕೂಲಿ ಕಾರ್ಮಿಕರ ಸಮಸ್ಯೆ ಎದುರಾಗಿದ್ದು, ಎಲ್ಲಿಂದಲೋ ಕೂಲಿ ಕಾರ್ಮಿಕರನ್ನು ಕರೆಯಿಸಿಕೊಂಡು ಕೆಲಸವನ್ನು ಮಾಡಿಸಬೇಕಾಗಿದೆ. ಬೆಳೆಗಾರರು ತೋಟದ ಕೆಲಸಕ್ಕೆ ಬರುವ ಕಾರ್ಮಿಕರ ಪೂರ್ವಪರ ವಿಚಾರಿಸದೆ. ಕೆಲಸ ಮಾಡಿಸಲು ಕೆಲಸಗಾರರು ಸಿಕ್ಕಿದರಲ್ಲ ಎಂಬ ಒಂದೇ ಕಾರಣಕ್ಕೆ ಅವರಿಗೆ ಕೆಲಸ ಕೊಡುತ್ತಿದ್ದಾರೆ. ಆದರೆ ಹಾಗೆ ಕೆಲಸಕ್ಕೆ ಬರುವವರಲ್ಲಿ ಕಳ್ಳರು, ಕೊಲೆಗಾರರು, ವಂಚಕರು ಯಾರು ಎಂಬುದೇ ಗೊತ್ತಾಗುವುದಿಲ್ಲ. ಕೆಲವೊಮ್ಮೆ ಗೊತ್ತಾಗುವ ವೇಳೆಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ನಾಪತ್ತೆಯಾಗಿರುತ್ತಾನೆ. ಆತನ ಬಗ್ಗೆ ಮಾಹಿತಿ ನೀಡೋಣ ಎಂದರೆ ಯಾವುದೇ ಪರಿಚಯ, ದಾಖಲೆಗಳೇ ಇರುವುದಿಲ್ಲ.
ಪ್ರತಿಯೊಬ್ಬರು ನೋಡಲೇಬೇಕಾದ ಕೊಡಗಿನ ಟಾಪ್ 20 ಪ್ರವಾಸಿ ತಾಣಗಳು
ಬಹಳಷ್ಟು ಬೆಳೆಗಾರರ ನಿರ್ಲಕ್ಷ್ಯ
ಇವತ್ತು ಕೊಡಗಿನಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳಿಗೆ ಇಲ್ಲಿ ಸೃಷ್ಠಿಯಾಗಿರುವ ಕೂಲಿ ಕಾರ್ಮಿಕರ ಸಮಸ್ಯೆ ಮತ್ತು ಕೆಲಸಕ್ಕಾಗಿ ಗುರುತು ಪರಿಚಯವಿಲ್ಲದ ವ್ಯಕ್ತಿಗಳನ್ನು ಸೇರಿಸಿಕೊಳ್ಳುತ್ತಿರುವುದು ಕಾರಣ ಎಂದರೆ ತಪ್ಪಾಗಲಾರದು. ಈಗಾಗಲೇ ಹಲವು ಅಪರಾಧ ಪ್ರಕರಣಗಳು ನಡೆದು ಹೋಗಿವೆ ಅದರಲ್ಲಿ ದೂರದ ಊರಿನ ಕಾರ್ಮಿಕರ ಕೈವಾಡಗಳಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ಅಸ್ಸಾಂ ಕಡೆಯಿಂದ ಹೆಚ್ಚಿನ ಕೂಲಿ ಕಾರ್ಮಿಕರು ಕೆಲಸಕ್ಕಾಗಿ ಕೊಡಗಿನ ಎಸ್ಟೇಟ್ಗಳಿಗೆ ಬರುತ್ತಿದ್ದು, ಅವರ ಗುರುತಿನ ಚೀಟಿ ಸೇರಿದಂತೆ ಭಾವಚಿತ್ರ ಇನ್ನಿತರ ದಾಖಲೆಗಳೊಂದಿಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡುತ್ತಿದ್ದರೂ ಬಹಳಷ್ಟು ಬೆಳೆಗಾರರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇನ್ನಾದರೂ ಬೆಳೆಗಾರರು ತಮ್ಮ ತೋಟಕ್ಕೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಮುನ್ನ ದಾಖಲಾತಿಗಳನ್ನು ಪಡೆಯುವುದಲ್ಲದೆ, ಆತನ ಕುರಿತಂತೆ ಸ್ಥಳೀಯ ಪೊಲೀಸ್ ಠಾಣೆಗಳಿಗೂ ಮಾಹಿತಿ ನೀಡುವುದು ಒಳಿತು ಇಲ್ಲದೆ ಹೋದರೆ ಅಪಾಯ ತಪ್ಪಿದಲ್ಲ.
ಒಣಗಿದ ಕಾಳುಮೆಣಸು ಬಳ್ಳಿಗಳು:ಮಾರಲು, ಸಂಗ್ರಹಿಸಲು ಆಗದೆ ಕಷ್ಟ ಅನುಭವಿಸುತ್ತಿರುವ ರೈತ