ಕೊಡಗು ಪ್ರವಾಹ ಸಂತ್ರಸ್ತರಿಗೆ ಮಾಸಿಕ 10 ಸಾವಿರ ರೂ. ಸಹಾಯ ಧನ
ಬೆಂಗಳೂರು, ಸೆಪ್ಟೆಂಬರ್ 25 : ಕೊಡಗು ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ಮಾಸಿಕ 10 ಸಾವಿರ ರೂ. ಪರಿಹಾರ ಧನ ನೀಡಲು ಸರ್ಕಾರ ನಿರ್ಧರಿಸಿದೆ. ಶಾಶ್ವತ ಮನೆ ನಿರ್ಮಾಣಗೊಳ್ಳುವ ತನಕ ಪರಿಹಾರ ಧನ ನೀಡಲಾಗುತ್ತದೆ.
ಮಂಗಳವಾರ ವಸತಿ ಸಚಿವ ಯು.ಟಿ.ಖಾದರ್ ಅವರು ಈ ಕುರಿತು ಮಾಹಿತಿ ನೀಡಿದರು. 'ಸಂತ್ರಸ್ತರಿಗೆ ತಾತ್ಕಾಲಿಕ ಟೆಂಟ್ ನಿರ್ಮಾಣ ಮಾಡಿಕೊಡುವ ಪ್ರಸ್ತಾವನೆ ಕೈಬಿಡಲಾಗಿದೆ' ಎಂದು ಹೇಳಿದರು.
'ಸಂತ್ರಸ್ತರಿಗೆ ಶಾಶ್ವತ ಮನೆಗಳು ನಿರ್ಮಾಣವಾಗುವ ತನಕ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ಪರಿಹಾರ ಧನವನ್ನು ಪ್ರತಿ ತಿಂಗಳು ನೀಡಲಾಗುತ್ತದೆ' ಎಂದು ಯ.ಟಿ.ಖಾದರ್ ಮಾಹಿತಿ ನೀಡಿದರು.
'ಕೊಡಗು ಜಿಲ್ಲೆಯಲ್ಲಿ ಸುರಿದ ಮಳೆ, ಪ್ರವಾಹದಿಂದಾಗಿ 700-800 ಕುಟುಂಬಗಳು ಆಶ್ರಯ ಕಳೆದುಕೊಂಡಿವೆ. ಸಂತ್ರಸ್ತರನ್ನು ಗುರುತಿಸಲಾಗಿದೆ, ಜಿಲ್ಲಾಧಿಕಾರಿಗಳು ನಿಗದಿಪಡಿಸುವ ಸ್ಥಳಗಳಲ್ಲಿ 6 ಲಕ್ಷ ವೆಚ್ಚದಲ್ಲಿ ಮಾದರಿ ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ' ಎಂದು ವಿವರಣೆ ನೀಡಿದರು.
ಪರಿಹಾರ ಕೇಂದ್ರದಲ್ಲಿ ಇರುವವರ ವಿವರ : ಸೆ.25ರ ಮಾಹಿತಿಯಂತೆ ಮಡಿಕೇರಿ ತಾಲೂಕಿನ 8 ಪರಿಹಾರ ಕೇಂದ್ರಗಳಲ್ಲಿ 291 ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 364 ಪುರುಷರು, ಮತ್ತು 362 ಮಹಿಳೆಯರು ಸೇರಿದಂತೆ 726 ಜನ ಸಂತ್ರಸ್ತರಿದ್ದಾರೆ.
ಸೋಮವಾರಪೇಟೆಯ 1 ಪರಿಹಾರ ಕೇಂದ್ರಗಳಲ್ಲಿ 101 ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 122 ಪುರುಷರು ಮತ್ತು 112 ಮಹಿಳೆಯರು ಸೇರಿದಂತೆ ಒಟ್ಟು 234 ಜನ ಸಂತ್ರಸ್ತರಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿರುವ 9 ಪರಿಹಾರ ಕೇಂದ್ರಗಳಲ್ಲಿ ಒಟ್ಟು 392 ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 486 ಪುರುಷರು ಮತ್ತು 474 ಮಹಿಳೆಯರು ಸೇರಿದಂತೆ ಒಟ್ಟು 960 ಜನ ಸಂತ್ರಸ್ತರಿದ್ದಾರೆ.