ಅ.17ಕ್ಕೆ ತಲಕಾವೇರಿ ತೀರ್ಥೋದ್ಭವ; ಏನೇನೆಲ್ಲಾ ತಯಾರಿ ಸಾಗಿದೆ?
ಮಡಿಕೇರಿ, ಅಕ್ಟೋಬರ್ 10: ಅಕ್ಟೋಬರ್ 17ರಂದು ನಡೆಯುವ ಕಾವೇರಿ ತುಲಾ ಸಂಕ್ರಮಣ ಸಂಬಂಧ ಶಾಸಕ ಕೆ.ಜಿ ಬೋಪಯ್ಯ ಅಧ್ಯಕ್ಷತೆಯಲ್ಲಿ ಇಂದು ಪೂರ್ವ ಸಿದ್ಧತಾ ಸಭೆಯನ್ನು ನಡೆಸಲಾಯಿತು.
ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮುಡಿಕಟ್ಟಡದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಈ ಸಂಬಂಧ ಶಾಸಕ ಕೆ.ಜಿ ಬೋಪಯ್ಯ ಅವರು ಮಾತನಾಡಿ, ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಅತ್ಯಂತ ಎಚ್ಚರಿಕೆಯಿಂದ ಜಾತ್ರಾ ಮಹೋತ್ಸವವನ್ನು ನಡೆಸಬೇಕಿದೆ. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ ಎಂದರು.
ತೀರ್ಥೋದ್ಭವ; ತಲಕಾವೇರಿಯಲ್ಲಿ ಭಕ್ತರಿಗೆ ತೀರ್ಥಸ್ನಾನವಿಲ್ಲ
ತೀರ್ಥೋದ್ಭವ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ. ತಲಕಾವೇರಿಯಲ್ಲಿ ವಿಪರೀತ ಚಳಿಯಿದ್ದು, ಈ ಸಂದರ್ಭ ಸೋಂಕು ಹರಡುವ ಸಾದ್ಯತೆ ಹೆಚ್ಚಿದ್ದು, ಎಚ್ಚರ ವಹಿಸುವುದು ಅಗತ್ಯ ಎಂದು ಜನರಲ್ಲಿ ಮನವಿ ಮಾಡಿದರು.
ಆರ್.ಸಿ.ಎಚ್ ಅಧಿಕಾರಿ ಡಾ.ಗೋಪಿನಾಥ್ ಅವರು ಮಾತನಾಡಿ, ತಲಕಾವೇರಿ ಮತ್ತು ಭಾಗಮಂಡಲದ ಎರಡು ಕಡೆಗಳಲ್ಲಿ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ 72 ಗಂಟೆಗಳ ಮುಂಚಿತವಾಗಿ ಆರ್.ಟಿ.ಪಿ.ಸಿ.ಆರ್ ಮುಖೇನ ಕೋವಿಡ್ ಪರೀಕ್ಷೆ ಮಾಡಬೇಕಿದೆ ಎಂದರು. ಸ್ಥಳೀಯ ನಿವಾಸಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 24 ಗಂಟೆಗಳ ಮುಂಚಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.
ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಅವರು ಮಾತನಾಡಿ, ಆರೋಗ್ಯ ಇಲಾಖೆ ಕಾವೇರಿ ತೀರ್ಥೋದ್ಭವ ಸಂಬಂಧ ಹೆಚ್ಚು ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು. ಹೊರಗಿನಿಂದ ಬರುವವರಿಗೆ ಥರ್ಮಲ್ ಸ್ಕ್ರೀನಿಂಗ್, ಪಲ್ಸ್ ಆಕ್ಸಿಮೀಟರ್ ಪರೀಕ್ಷೆಯನ್ನು ನಡೆಸಬೇಕು. ಜಾತ್ರೆಯ ಸಂದರ್ಭ ಯಾರಿಗೂ ಸೋಂಕು ಹರಡದಂತೆ ಅತ್ಯಂತ ಎಚ್ಚರಿಕೆಯಿಂದ ಜಾತ್ರಾ ಮಹೋತ್ಸವವನ್ನು ನಡೆಸಬೇಕಿದೆ" ಎಂದು ಹೇಳಿದರು.
ಕೊಡಗಿನ ಕೋವಿಡ್ ಪ್ರಕರಣಗಳು: ಕೊಡಗು ಜಿಲ್ಲೆಯಲ್ಲಿ ಒಟ್ಟು 3652 ಕೊರೊನಾ ಪ್ರಕರಣಗಳಿದ್ದು, 2886 ಮಂದಿ ಗುಣಮುಖರಾಗಿದ್ದಾರೆ. 713 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ 53 ಮಂದಿ ಸಾವನ್ನಪ್ಪಿದ್ದಾರೆ.