ಕುಶಾಲನಗರ ಸಂತ್ರಸ್ತರ ಕ್ಯಾಂಪ್ನಲ್ಲಿ ತಹಶೀಲ್ದಾರ್ ಮೇಲೆ ಹಲ್ಲೆ
ಮಡಿಕೇರಿ, ಸೆಪ್ಟೆಂಬರ್ 20 : ಕುಶಾಲನಗರದ ಸಂತ್ರಸ್ತರ ಕ್ಯಾಂಪ್ನಲ್ಲಿ ಸೋಮವಾರ ಪೇಟೆ ತಹಶೀಲ್ದಾರ್ ಮೇಲೆ ಹಲ್ಲೆ ನಡೆದಿದೆ. ಈ ಸಂಬಂಧ ಎರಡು ದೂರುಗಳು ದಾಖಲಾಗಿವೆ. ಸಂತ್ರಸ್ತರ ಕೇಂದ್ರದಲ್ಲಿ 287 ಜನರು ಆಶ್ರಯ ಪಡೆದಿದ್ದಾರೆ.
ಸೋಮವಾರಪೇಟೆಯ ತಹಶೀಲ್ದಾರ್ ಪಿ.ಎಸ್.ಮಹೇಶ್ ಮೇಲೆ ಸಂತ್ರಸ್ತರ ಕೇಂದ್ರದಲ್ಲಿ ಬುಧವಾರ ರಾತ್ರಿ 10.45ಕ್ಕೆ ಹಲ್ಲೆ ನಡೆದಿದೆ. ಈ ಸಂಬಂಧ ತಹಶೀಲ್ದಾರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. 50 ಜನರ ಗುಂಪು ಹಲ್ಲೆ ನಡೆಸಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಚಿತ್ರಗಳು : ಮಳೆ, ಭೂ ಕುಸಿತದ ಬಳಿಕ ಕೊಡಗು ಜಿಲ್ಲೆ
ಕುಶಾಲನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ 287 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ತಹಶೀಲ್ದಾರ್ ಪಿ.ಎಸ್.ಮಹೇಶ್ ರಾತ್ರಿ 10.45ರ ಸುಮಾರಿಗೆ ಕೇಂದ್ರಕ್ಕೆ ಆಗಮಿಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದರು. ಆಗ ಅವರ ಮೇಲೆ ಹಲ್ಲೆ ನಡೆದಿದೆ ಎಂಬುದು ಆರೋಪ.
ಚಿತ್ರಗಳು : ಕೊಡಗಿನಲ್ಲಿ ಕೇಂದ್ರ ಅಧ್ಯಯನ ತಂಡದಿಂದ ನಷ್ಟ ಅಂದಾಜು
ಸಂತ್ರಸ್ತರು ಅಲ್ಲದಿರುವವರು ಕೇಂದ್ರದಲ್ಲಿದ್ದರು. ಆದ್ದರಿಂದ, ಪರಿಶೀಲನೆಗೆ ಬಂದಿದ್ದ ತಹಶೀಲ್ದಾರ್ ಅವರು ಜನರ ತಲೆ ಎಣಿಕೆ ಮಾಡುತ್ತಿದ್ದರು. ಈ ಸಮಯದಲ್ಲಿ ಮಹಿಳೆಯನ್ನು ಮುಟ್ಟಿ ಮಾತನಾಡಿಸಿದ್ದಾರೆ. ಅದಕ್ಕಾಗಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪವೂ ಇದೆ.
ಚಿತ್ರಗಳು : ಮಡಿಕೇರಿ-ಮಂಗಳೂರು ರಸ್ತೆ ದುರಸ್ಥಿ
'40 ರಿಂದ 50 ಜನರು ನನ್ನ ಮೇಲೆ ಕಲ್ಲು ತೂರಾಟ ನಡೆಸಿದರು. ನಾನು ಇಬ್ಬರನ್ನು ಗುರುತಿಸಿದ್ದೇನೆ' ಎಂದ ತಹಶೀಲ್ದಾರ್ ಹೇಳಿಕೆ ನೀಡಿದ್ದಾರೆ. ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಆಗಸ್ಟ್ ತಿಂಗಳಿನಲ್ಲಿ ಭಾರಿ ಮಳೆ, ಗುಡ್ಡ ಕುಸಿತದಿಂದ ಸಾವಿರಾರು ಜನರು ಕೊಡಗಿನಲ್ಲಿ ಮನೆ ಕಳೆದುಕೊಂಡಿದ್ದಾರೆ. ಅವರಿಗಾಗಿ ಜಿಲ್ಲೆಯಲ್ಲಿ 41 ಸಂತ್ರಸ್ತ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿತ್ತು. ಅವುಗಳಲ್ಲಿ ಇದೂ ಒಂದಾಗಿದ್ದು, ಮೊದಲು ಸುಮಾರು 600 ಜನರು ಈ ಕೇಂದ್ರದಲ್ಲಿದ್ದರು.