ರಾಷ್ಟ್ರೀಯ ಹೆದ್ದಾರಿ ಮೂಲಕ ಕೇರಳದಿಂದ ರಾಜ್ಯಕ್ಕೆ ಬರಲು ಅನುಮತಿ
ಮಂಗಳೂರು, ಏಪ್ರಿಲ್ 07: ಕೇರಳ ರಾಜ್ಯದಿಂದ ಕರ್ನಾಟಕಕ್ಕೆ ರಾಷ್ಟ್ರೀಯ ಹೆದ್ದಾರಿ ಮೂಲಕ ಬರಲು ಅನುಮತಿ ನೀಡಲಾಗಿದೆ. ತುರ್ತು ಚಿಕಿತ್ಸೆಯ ಅಗತ್ಯವಿದ್ದವರು ಮಾತ್ರ ಕರ್ನಾಟಕಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್ ನಲ್ಲಿ ಕೇಂದ್ರ ಸರ್ಕಾರ ಹೇಳಿದೆ.
ತಲಪಾಡಿ ಗಡಿ ಚೆಕ್ ಪೋಸ್ಟ್ ನಲ್ಲಿ ಕರ್ನಾಟಕ ಮತ್ತು ಕೇರಳ ಉಭಯ ರಾಜ್ಯಗಳ ವೈದ್ಯರಿಂದ ತಪಾಸಣೆ ಬಳಿಕವೇ ತುರ್ತುಚಿಕಿತ್ಸೆಗೆ ರೋಗಿಗಳು ಕರ್ನಾಟಕದ ಮಂಗಳೂರಿಗೆ ಪ್ರವೇಶಿಸಬಹುದಾಗಿದೆ. ಅಂತಹ ರೋಗಿಗಳಿಗೆ ಕೇರಳದಲ್ಲಿ ಚಿಕಿತ್ಸೆ ಸಾಧ್ಯವಿಲ್ಲ ಎಂದು ಸ್ಥಳೀಯ ವೈದ್ಯರಿಂದ ಸೂಕ್ತ ಪತ್ರ ಪಡೆಯಬೇಕಾಗಿರುವುದು ಕಡ್ಡಾಯವಾಗಿದೆ.
ಸಾಕಷ್ಟು ಸೂಕ್ತ ವೈದ್ಯಕೀಯ ಪರೀಕ್ಷೆಯ ಬಳಿಕವೇ ಕೇರಳದಿಂದ ಮಂಗಳೂರಿಗೆ ಬರಲು ಚೆಕ್ ಪೋಸ್ಟ್ ನಲ್ಲಿ ರೋಗಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ಸರ್ಕಾರದಿಂದ ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡಲಾಗಿದೆ.
ಈ ತೀರ್ಮಾನದಿಂದ ಉಭಯ ರಾಜ್ಯಗಳ ನಡುವಿನ ಹೆದ್ದಾರಿ ಗಡಿ ಸಂಬಂಧಿತ ತ್ಯಾಜ್ಯ ಇತ್ಯರ್ಥವಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಮತ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್ ನ ಈ ತೀರ್ಮಾನ ಕೊಡಗು ಮತ್ತು ಕೇರಳ ಹೆದ್ದಾರಿ ಗಡಿ ಬಂದ್ ಗೆ ಅನ್ವಯಿಸುವುದಿಲ್ಲ ಎಂದು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಹೇಳಿದ್ದಾರೆ. ಮಂಗಳೂರು ಆಸ್ಪತ್ರೆಗೆ ತುರ್ತು ಅಗತ್ಯವಿರುವ ರೋಗಿಗಳನ್ನು ಸಾಗಿಸಲು ಮಾತ್ರ ಸಡಿಲಿಕೆ ಅನ್ವಯವಾಗಲಿದೆ.
ಕೊಡಗು ಜಿಲ್ಲಾ ಗಡಿ ಬಂದ್ ಇದೇ ರೀತಿ ಮುಂದುವರಿಯುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಕೊಡಗು ಅತ್ಯಂತ ಸುರಕ್ಷಿತವಾಗಿದ್ದು, ಯಾವುದೇ ಕಾರಣಕ್ಕೂ ಸೋಂಕು ಶಂಕಿತ ವ್ಯಕ್ತಿಗಳನ್ನು ಕೊಡಗು ಜಿಲ್ಲೆಗೆ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಜಿಲ್ಲಾಡಳಿತಕ್ಕೆ ಸೂಚಿಸಿರುವುದಾಗಿ ಬೋಪಯ್ಯ ತಿಳಿಸಿದ್ದಾರೆ.