ವಿದ್ಯಾರ್ಥಿಗಳಿಗೆ ಥಳಿಸಿದ ಸುಂಟಿಕೊಪ್ಪದ ವಿದ್ಯಾಸಂಸ್ಥೆಗೆ ನೋಟಿಸ್
ಮಡಿಕೇರಿ, ಫೆಬ್ರವರಿ 29: ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದಿರುವ ಕಾರಣಕ್ಕಾಗಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಥಳಿಸಿದ ಸುಂಟಿಕೊಪ್ಪ ಬಳಿಯ ಕೊಡಗರಹಳ್ಳಿಯ ಶಾಂತಿನಿಕೇತನ ವಿದ್ಯಾಸಂಸ್ಥೆಯ ಶಿಕ್ಷಕರಿಗೆ ಹಾಗೂ ಮುಖ್ಯೋಪಾಧ್ಯಾಯರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.
ಕೊಡಗರಹಳ್ಳಿಯ ಶಾಂತಿನಿಕೇತನ ಪ್ರೌಢಶಾಲೆಯಲ್ಲಿ ಫೆ.25ರಂದು ಪೂರ್ವ ಸಿದ್ಧತಾ ಪರೀಕ್ಷೆಯ ಸಂಬಂಧ ಕಡಿಮೆ ಅಂಕ ತೆಗೆದಿರುವ ಕನ್ನಡ ಶಿಕ್ಷಕರು ಮಕ್ಕಳಿಗೆ ಥಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪೋಷಕರು ದೂರು ನೀಡಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಮಕ್ಕಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಸುಮಾರು 10 ರಿಂದ 15 ಮಕ್ಕಳಿಗೆ ಹೊಡೆದಿರುವುದು ಕಂಡುಬಂದಿದೆ.
ಶವಯಾತ್ರೆ ವೇಳೆ ಹಾರ್ನ್ ಮಾಡಿದ್ದಕ್ಕೆ ಬಸ್ ಡ್ರೈವರ್ ಗೆ ಥಳಿತ
ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕಾದ ಶಾಲೆಯಲ್ಲಿ ಇಂತಹ ಘಟನೆಗೆ ಆಸ್ಪದ ನೀಡಿರುವುದು ಕಂಡು ಬಂದಿದ್ದು, ಶಾಲೆಗೆ ನೋಟಿಸ್ ನೀಡಿ, ಮೂರು ದಿನದೊಳಗೆ ಆಡಳಿತ ಮಂಡಳಿ ಲಿಖಿತ ವರದಿ ನೀಡಲು ಸೂಚಿಸಿದೆ.
ಈ ನಡುವೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಪಿ.ಎಸ್. ಮಚ್ಚಾಡೋ ಅವರೂ ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರಾದ ರವೀಂದ್ರ, ಪದಾಧಿಕಾರಿಗಳಾದ ಮಂಜುನಾಥ್ ಹಾಗೂ ಸ್ವಾತಿ ಅವರೂ ಶಾಲೆಗೆ ಭೇಟಿ ನೀಡಿದ್ದಾರೆ.