ಕೊಡಗಿನಲ್ಲಿ ಈ ಬಾರಿಯೂ ಬೇಸಿಗೆಯ ಕ್ರೀಡಾ ಸಂಭ್ರಮವಿಲ್ಲ...
ಮಡಿಕೇರಿ, ಏಪ್ರಿಲ್ 22: ಸುಮಾರು ಎರಡು ದಶಕಗಳಿಂದ ಕೊಡಗಿನಲ್ಲಿ ನಡೆದುಕೊಂಡು ಬರುತ್ತಿದ್ದ ಕೊಡವ ಕುಟುಂಬಗಳ ಹಾಕಿ ಉತ್ಸವ ಹಾಗೂ ಇತರೆ ಸಮುದಾಯದ ಹಲವು ಕ್ರೀಡಾಕೂಟಗಳು ಕಳೆದ ಎರಡು ವರ್ಷಗಳಿಂದ ನಡೆಯದಂತಾಗಿದೆ. ಇದಕ್ಕೆ ಜಿಲ್ಲೆಯಲ್ಲಿ ಸಂಭವಿಸಿದ ಜಲಪ್ರಳಯ ಮತ್ತು ಈ ಬಾರಿ ಜನಕಂಟಕವಾದ ಮಹಾಮಾರಿ ಕೊರೊನಾ ಕಾರಣವಾಗಿದೆ.
ಬಹುಶಃ ಕೊರೊನಾ ಮಹಾಮಾರಿಯ ಭೀತಿ ಇಲ್ಲದೆ ಹೋಗಿದ್ದರೆ ಇಷ್ಟರಲ್ಲಿಯೇ ಹಾಕಿ ಉತ್ಸವ ಆರಂಭಗೊಳ್ಳಬೇಕಿತ್ತು. ಅದರ ಜತೆಗೆ ಇನ್ನಿತರ ಕ್ರೀಡಾ ಕೂಟಗಳು ಅಲ್ಲಲ್ಲಿ ನಡೆಯಬೇಕಾಗಿತ್ತು. ಆದರೆ ಈಗಾಗಲೇ ಶೀಘ್ರಗತಿಯಲ್ಲಿ ಹರಡುತ್ತಿರುವ ಸೋಂಕಿನ ಹೊಡೆತಕ್ಕೆ ಇಡೀ ದೇಶವೇ ಲಾಕ್ ಡೌನ್ ಆಗಿ ಸಾಮಾಜಿಕ ಅಂತರ ಕಾದುಕೊಂಡು ಜೀವನ ನಡೆಸಬೇಕಾದ ಅನಿವಾರ್ಯತೆಯಿಂದಾಗಿ ಈ ಬಾರಿ ಯಾವ ಕ್ರೀಡಾಕೂಟವೂ ನಡೆಯದಂತಾಗಿದೆ.
ಪ್ರಕೃತಿ ವಿಕೋಪ ತಂದೊಡ್ಡಿದ ಸಂಕಷ್ಟ
ಕಳೆದ ವರ್ಷ ಕೊಡಗಿನಲ್ಲಿ ಸಂಭವಿಸಿದ ಜಲಪ್ರಳಯ, ಭೂಕುಸಿತದ ಕಾರಣದಿಂದ ಜನ ಜೀವನ ಸಂಕಷ್ಟಕ್ಕೀಡಾಗಿತ್ತು. ಹಲವರು ಮನೆ, ಭೂಮಿ ಕಳೆದುಕೊಂಡು ನಿರ್ಗತಿಕರಾದರು. ಅದರ ಹೊಡೆತಕ್ಕೆ ಸಿಲುಕಿದ ಜನ ಇನ್ನೂ ಸುಧಾರಿಸಿಲ್ಲ. ಹೀಗಾಗಿ ಕಳೆದ ವರ್ಷ ಕೊಡವ ಕುಟುಂಬಗಳ ಹಾಕಿ ಉತ್ಸವವನ್ನು ರದ್ದುಗೊಳಿಸಲಾಗಿತ್ತು. ಆದರೆ ಈ ವರ್ಷ ಉತ್ಸವವನ್ನು ಅದ್ಧೂರಿಯಾಗಿ ನಡೆಸಬೇಕೆಂಬ ತೀರ್ಮಾನವನ್ನು ಕಳೆದ ವರ್ಷವೇ ಕೈಗೊಳ್ಳಲಾಗಿತ್ತು. ಅಲ್ಲದೆ ಅದಕ್ಕೋಸ್ಕರ ಪ್ರಾಥಮಿಕ ಸಿದ್ಧತೆಯನ್ನು ಕೂಡ ಮಾಡಿಕೊಳ್ಳಲಾಗಿತ್ತು. ಆದರೆ ಅಷ್ಟರಲ್ಲಿಯೇ ಮಹಾಮಾರಿ ಕೊರೊನಾ ಜನಜೀವನವನ್ನೇ ಇನ್ನಿಲ್ಲದಂತೆ ಕಾಡಲಾರಂಭಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಜೀವನ ನಿರ್ವಹಿಸುವುದೇ ಕಷ್ಟವಾಗಿ ಕಾಣಿಸುತ್ತಿದೆ. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ.
ಪುಟ್ಟ ಜಿಲ್ಲೆ ಕೊಡಗು ಸೋಂಕುರಹಿತ ಜಿಲ್ಲೆಯಾದ ಹಿಂದಿನ ರಹಸ್ಯವೇನು?
ಕ್ರೀಡಾ ಸಂಭ್ರಮಕ್ಕೆ ಕರಿ ಮೋಡ
ಹಾಗೆನೋಡಿದರೆ ಬೇಸಿಗೆ ಕಾಲ ಎನ್ನುವುದು ಕೊಡಗಿನ ಮಟ್ಟಿಗೆ ವಿವಿಧ ಆಟಗಳ ಹಬ್ಬ ಎಂದರೆ ತಪ್ಪಾಗಲಾರದು. ಸಣ್ಣಪುಟ್ಟ ಗ್ರಾಮಗಳಿಂದ ಆರಂಭವಾಗಿ ಜಿಲ್ಲಾ, ರಾಜ್ಯಮಟ್ಟದ ವಿವಿಧ ಕ್ರೀಡೆಗಳು ನಡೆಯುತ್ತಿರುತ್ತವೆ. ಎಲ್ಲಿ ನೋಡಿದರಲ್ಲಿ ಕ್ರಿಕೆಟ್ ಬ್ಯಾಟ್, ಹಾಕಿ ಸ್ಟಿಕ್ ಹಿಡಿದು ಓಡಾಡುವ ಆಟಗಾರರು, ಜತೆಗೆ ವಾಲಿಬಾಲ್, ಫುಟ್ಭಾಲ್ ನಂತಹ ಕ್ರೀಡೆಗಳು ಕೂಡ ನಡೆಯುತ್ತಿದ್ದವು. ಇನ್ನು ವಿವಿಧ ಸಮುದಾಯದ ಕುಟುಂಬಗಳು ಹಲವು ಕ್ರೀಡೆಗಳನ್ನು ಆಯೋಜಿಸುವ ಮೂಲಕ ಆಟಗಾರರನ್ನು ಪ್ರೋತ್ಸಾಹಿಸುವುದರೊಂದಿಗೆ ಕೊಡಗಿನವರು ಕ್ರೀಡಾ ಪ್ರೇಮಿಗಳು ಎಂಬುದನ್ನು ಜಗತ್ತಿಗೆ ತೋರಿಸಿಕೊಡುತ್ತಿದ್ದರು.
ಸುಧಾರಿಸುವುದಕ್ಕೆ ಇನ್ನೆಷ್ಟು ಸಮಯವೋ?
ಆದರೆ ಕಳೆದ ವರ್ಷದಿಂದೀಚೆಗೆ ಕೊಡಗಿಗೆ ಒದಗಿ ಬಂದಿರುವ ಸಂಕಟಗಳು ಬೆಚ್ಚಿ ಬೀಳುವಂತೆ ಮಾಡಿದೆ. ಕೃಷಿಯನ್ನೇ ನಂಬಿ ಬದುಕುತ್ತಿದ್ದವರಿಗೆ ಅತಿವೃಷ್ಟಿ ಹೊಡೆತ ನೀಡಿದೆ. ಜತೆಗೆ ಕಾಫಿ, ಕರಿಮೆಣಸು ಬೆಲೆ ಕುಸಿತವೂ ಕಂಗಾಲು ಮಾಡಿದೆ. ಎಲ್ಲವನ್ನು ಎದುರಿಸಿ ಮೇಲೇಳುವ ಹೊತ್ತಿಗೆ ಸರಿಯಾಗಿ ಕೊರೊನಾ ವಕ್ಕರಿಸಿದೆ. ಮೇಲಿಂದ ಮೇಲೆ ಹೊಡೆತವನ್ನು ತಿಂದಿರುವ ಕೊಡಗಿನ ಮಂದಿ ಸುಧಾರಿಸಿಕೊಳ್ಳಲು ಇನ್ನೆಷ್ಟು ಸಮಯ ಬೇಕೆಂಬುದೇ ಪ್ರಶ್ನೆಯಾಗಿ ಉಳಿದುಹೋಗಿದೆ.
ಪಾದರಾಯನಪುರದಿಂದ ಕೊಡಗಿಗೆ ಆಂಬ್ಯುಲೆನ್ಸ್: ಸಿಕ್ಕಿಬಿದ್ದ ಖದೀಮರು
ಕೊರೊನಾ ತಡೆದ ಯಶಸ್ಸಿದೆ
ಬೇರೆ ಕಡೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ವರ್ಷಪೂರ್ತಿ ಒಂದಲ್ಲ ಒಂದು ರೀತಿಯ ಕ್ರೀಡಾಕೂಟಗಳು ನಡೆಯುತ್ತಲೇ ಇರುತ್ತವೆ. ಅದು ಸುರಿಯುವ ಮಳೆಯಿರಲಿ, ಸುಡುವ ಬಿಸಿಲಿರಲಿ ಕ್ರೀಡೆಗಳಂತೂ ನಡೆದೇ ನಡೆಯುತ್ತವೆ. ಕಳೆದ ಮತ್ತು ಈ ಬಾರಿಯ ಬೇಸಿಗೆಯಲ್ಲಿ ಕ್ರೀಡಾ ಕೂಟಗಳಿಲ್ಲದೆ ಮೈದಾನಗಳು ಬಣಗುಟ್ಟುತ್ತಿವೆ. ಅದು ಒತ್ತಟ್ಟಿಗಿರಲಿ, ಜಿಲ್ಲೆಯ ಜನ ಜಿಲ್ಲಾಡಳಿದೊಂದಿಗೆ ಸಹಕರಿಸಿ ಕೊರೊನಾವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವುದು ಅಷ್ಟೇ ಸಂತಸದ ವಿಷಯವಾಗಿದೆ.